ನೇತ್ರಾವತಿ, ಕುಮಾರಧಾರಾದಲ್ಲಿ ನೀರಿನ ಮಟ್ಟ ಏರಿಕೆ ; ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸ್ನಾನಘಟ್ಟ ಮುಳುಗಡೆ

14-07-21 03:01 pm       Mangalore Correspondent   ಕರಾವಳಿ

ಭಾರೀ ಮಳೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕುಮಾರಧಾರಾ, ನೇತ್ರಾವತಿ, ಪಯಸ್ವಿನಿ, ಗುಂಡ್ಯ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

ಸುಬ್ರಹ್ಮಣ್ಯ, ಜುಲೈ 14 : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು ಕುಮಾರಧಾರಾ, ನೇತ್ರಾವತಿ ನದಿ ತುಂಬಿ ಹರಿಯತೊಡಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬಳಿಯ ಕುಮಾರಧಾರಾ ಸ್ನಾನ ಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. 

ಶಿರಾಡಿ ಘಾಟಿ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕುಮಾರಧಾರಾ, ನೇತ್ರಾವತಿ, ಪಯಸ್ವಿನಿ, ಗುಂಡ್ಯ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿದ ಭಕ್ತಾದಿಗಳು ಕುಮಾರಧಾರಾ ನದಿಗೆ ಇಳಿಯಲಾಗದೆ ರಸ್ತೆಗೆ ಬಂದಿರುವ ನೆರೆನೀರಿನಲ್ಲಿ ತೀರ್ಥಸ್ನಾನ ನೆರವೇರಿಸುತ್ತಿದ್ದಾರೆ. ನದಿಯ ದಡದಲ್ಲಿ ತೀರ್ಥಸ್ನಾನ ಮಾಡಲು ಭಕ್ತರಿಗೆ ಅವಕಾಶ ನೀಡಲಾಗಿದ್ದು, ನದಿಗೆ ಇಳಿಯದಂತೆ ಎಚ್ಚರಿಕೆ ಸಂದೇಶ ನೀಡಲಾಗಿದೆ. ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. 

ಹಾಗೆಯೇ ಧರ್ಮಸ್ಥಳದಲ್ಲಿಯೂ ನೇತ್ರಾವತಿ ನದಿಯಲ್ಲಿ ನೀರು ಏರಿಕೆಯಾಗಿದ್ದು ತೀರ್ಥಸ್ನಾನ ಮಾಡುವವರಿಗೆ ನದಿಗಿಳಿಯದಂತೆ ಸ್ಥಳದಲ್ಲಿ ಸಿಬಂದಿ ಸೂಚನೆ ನೀಡುತ್ತಿದ್ದಾರೆ. ‌ಘಟ್ಟ ಪ್ರದೇಶಗಳಲ್ಲಿ ಮಳೆಯಾದ ವೇಳೆ ನದಿಯಲ್ಲಿ ಆಗಿಂದಾಗ್ಗೆ ನೆರೆನೀರು ಬರುವುದರಿಂದ ನದಿಗೆ ಇಳಿಯುವುದು, ಈಜಾಡುವುದಕ್ಕೆ ಅವಕಾಶ ನೀಡಿಲ್ಲ‌. ಭಕ್ತರು ಜಾಗ್ರತೆ ವಹಿಸುವಂತೆ ಸ್ಥಳದಲ್ಲಿ ಬಂದೋಬಸ್ತ್ ಮಾಡಲಾಗಿದೆ. ‌

Video: 

Following bountiful rain in the catchment area of River Kumaradhara, the inflow of water to the river has increased and the bathing ghat (snanaghatta) at Kukke Subrahmanya Temple was inundated on Wednesday