ಕಂಬಳಕ್ಕೆ ಏಕರೂಪದ ನಿಯಮಗಳು ; ಒಬ್ಬನಿಗೆ ಮೂರು ಜೊತೆ ಓಡಿಸಲಷ್ಟೇ ಅನುಮತಿ, ಗದ್ದೆಗೆ ಬರಲು ವಿಳಂಬಿಸಿದರೆ ಅಮಾನತು ಶಿಕ್ಷೆ 

18-07-21 07:41 pm       Mangaluru Correspondent   ಕರಾವಳಿ

ಕಂಬಳ ಪ್ರಸಿದ್ಧಿಗೆ ಬರುತ್ತಿದ್ದಂತೆ ಏಕರೂಪ ನಿಯಮಗಳನ್ನು ಜಾರಿಗೆ ತರಲು ಮತ್ತು ಕಂಬಳ ವಿಳಂಬವಾಗಿ ಮುಗಿಯುವುದನ್ನು ತಪ್ಪಿಸಲು ಕೆಲವೊಂದು ಹೊಸ ನಿಯಮಗಳನ್ನು ಜಾರಿಗೆ ತರಲು ಕಂಬಳ ಶಿಸ್ತು ಪಾಲನಾ ಸಮಿತಿ ನಿರ್ಧರಿಸಿದೆ.

ಮಂಗಳೂರು, ಜುಲೈ 18: ಕಂಬಳ ಪ್ರಸಿದ್ಧಿಗೆ ಬರುತ್ತಿದ್ದಂತೆ ಏಕರೂಪ ನಿಯಮಗಳನ್ನು ಜಾರಿಗೆ ತರಲು ಮತ್ತು ಕಂಬಳ ವಿಳಂಬವಾಗಿ ಮುಗಿಯುವುದನ್ನು ತಪ್ಪಿಸಲು ಕೆಲವೊಂದು ಹೊಸ ನಿಯಮಗಳನ್ನು ಜಾರಿಗೆ ತರಲು ಕಂಬಳ ಶಿಸ್ತು ಪಾಲನಾ ಸಮಿತಿ ನಿರ್ಧರಿಸಿದೆ.

ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಒಬ್ಬ ಓಟಗಾರನಿಗೆ ಒಂದು ಕಂಬಳದಲ್ಲಿ ಮೂರು ಜೊತೆ ಕೋಣಗಳನ್ನು ಓಡಿಸಲು ಮಾತ್ರ ಅವಕಾಶ ನೀಡಲಾಗಿದೆ. ಆದರೆ ಒಂದೇ ತಂಡದ ಎರಡು ಜೊತೆಯ ಕೋಣಗಳಿದ್ದರೆ ಮಾತ್ರ 4 ಜೊತೆ ಕೋಣಗಳನ್ನು ಓಡಿಸಬಹುದಾಗಿದೆ. ಇದರಿಂದ ಹೊಸ ಓಟಗಾರರಿಗೆ ಅವಕಾಶ ನೀಡುವುದರ ಜೊತೆಗೆ ವಿಳಂಬವಾಗುವುದನ್ನು ತಪ್ಪಿಸಬಹುದು ಎನ್ನುವ ತೀರ್ಮಾನ ಸಮಿತಿಯದ್ದು. 

ಇನ್ನು ಕಂಬಳವನ್ನು 24 ಗಂಟೆಯೊಳಗೆ ಮುಗಿಸಲು ಕಂಬಳ ಶಿಸ್ತು ಪಾಲನಾ ಸಮಿತಿ ನಿರ್ಧಾರ ಮಾಡಿದೆ. ಬೆಳಗ್ಗೆ 9 ಗಂಟೆಗೆ ಕಂಬಳ ಆರಂಭಿಸಿ ಮರುದಿನ ಬೆಳಗ್ಗೆ 9 ಗಂಟೆಗೆ ಕಂಬಳವನ್ನು ಮುಗಿಸಬೇಕೆಂದು ತೀರ್ಮಾನ ಮಾಡಲಾಗಿದೆ. ಅಲ್ಲದೆ, ಕಂಬಳ ಸ್ಪರ್ಧೆಯ ವಿಳಂಬವನ್ನು ತಪ್ಪಿಸಲು ಕಂಬಳ ಕೋಣಗಳನ್ನು 5 ನಿಮಿಷದ ಒಳಗೆ ಕಂಬಳದ ಗದ್ದೆಗೆ ತರಬೇಕೆಂಬ ನಿಯಮ ಮಾಡಲಾಗಿದೆ. ತಡವಾದರೆ ಆ ತಂಡವನ್ನು ಕೈಬಿಟ್ಟು ವಾಕ್ ಓವರ್ ಅಂತಾ ಘೋಷಣೆ ಮಾಡಲು ನಿರ್ಧಾರ ಮಾಡಲಾಗಿದೆ.

ಕಂಬಳದ ತೀರ್ಪುಗಾರರು ಮದ್ಯಪಾನ ಮಾಡಿ ಬರುವಂತಿಲ್ಲ ಎಂದು ನಿರ್ಣಯಿಸಲಾಗಿದೆ. ಕಂಬಳದ ಬಗ್ಗೆ ಯಾವುದೇ ದೂರುಗಳಿದ್ದರೂ, ಜಿಲ್ಲಾ ಕಂಬಳ ಸಮಿತಿಯ ಗಮನಕ್ಕೆ ತರಬೇಕು.

ಯಾವುದಾದರೂ ತಂಡದ ತಪ್ಪು ಸಾಬೀತಾದರೆ ಒಂದು ವರ್ಷ ಕಾಲ ಆ ತಂಡವನ್ನು ಕಂಬಳದಿಂದ ಅಮಾನತು ಮಾಡುವ ಕಠಿಣ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಕಂಬಳ ಓಟಗಾರರು ಮತ್ತು ಕೋಣಗಳ ಯಜಮಾನರು ಕಂಬಳ ಸಮಿತಿಯ ಸದಸ್ಯತ್ವ ಪಡೆಯಬೇಕೆಂಬ ನಿರ್ಧಾರವನ್ನೂ ಮಾಡಲಾಗಿದೆ.

New Kambala Board has implemented new rules playing Karavali Kambala in coastal Karnataka.