ಆಸ್ಕರ್ ಫೆರ್ನಾಂಡಿಸ್ ಆರೋಗ್ಯ ಸ್ಥಿತಿ ಕ್ಷೀಣ ; ಗಳಗಳನೆ ಅತ್ತ ಪೂಜಾರಿ, ಆರೋಗ್ಯ ವಿಚಾರಿಸಿದ ಸೋನಿಯಾ ಗಾಂಧಿ

21-07-21 04:42 pm       Mangalore Correspondent   ಕರಾವಳಿ

ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ಮೆದುಳಿನಲ್ಲಿ ರಕ್ತಸ್ರಾವ ಆಗಿರುವುದರಿಂದ ಆರೋಗ್ಯ ಸ್ಥಿತಿ ಬಿಗಡಾಯಿಸಿದೆ ಎಂದು ಆಸ್ಪತ್ರೆ ಮೂಲಗಳಿಂದ ತಿಳಿದುಬಂದಿದೆ.

ಮಂಗಳೂರು, ಜುಲೈ 21: ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ (80) ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ರಾಷ್ಟ್ರ ಮಟ್ಟದ ನಾಯಕರು ಆಸ್ಕರ್ ಕುಟುಂಬಸ್ಥರ ಜೊತೆ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ.

ಎರಡು ದಿನಗಳ ಹಿಂದೆ ಮನೆಯಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದ ಅವರನ್ನು ಕೊಡಿಯಾಲಬೈಲಿನ ಯೇನಪೋಯ ಆಸ್ಪತ್ರೆಗೆ ದಾಖಲಾಗಿತ್ತು. ಮೆದುಳಿನಲ್ಲಿ ರಕ್ತಸ್ರಾವ ಆಗಿರುವುದರಿಂದ ಆರೋಗ್ಯ ಸ್ಥಿತಿ ಬಿಗಡಾಯಿಸಿದೆ ಎಂದು ಆಸ್ಪತ್ರೆ ಮೂಲಗಳಿಂದ ತಿಳಿದುಬಂದಿದೆ.

ಹೀಗಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರು ಆಸ್ಕರ್ ಫೆರ್ನಾಂಡಿಸ್ ಆರೋಗ್ಯದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಇಂದು ಮಧ್ಯಾಹ್ನ ಹಿರಿಯ ಕಾಂಗ್ರೆಸಿಗ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಆಸ್ಪತ್ರೆಗೆ ಭೇಟಿ ನೀಡಿದ್ದು, ಆಸ್ಕರ್ ಅವರನ್ನು ನೋಡಿಬಂದು ಗಳಗಳನೆ ಅತ್ತಿದ್ದಾರೆ. ಅವರನ್ನು ದೇವರು ಉಳಿಸುತ್ತಾರೆ ಎಂದಷ್ಟೇ ಹೇಳಿ, ಮಾಧ್ಯಮದವರಿಗೆ ಕೈಮುಗಿಯುತ್ತಾ ಹೊರನಡೆದಿದ್ದು ಆಸ್ಕರ್ ಆರೋಗ್ಯ ಸ್ಥಿತಿಯನ್ನು ಹೇಳಿತ್ತು. ಇದಕ್ಕೂ ಮುನ್ನ ಮಾಜಿ ಸಚಿವ ಉತ್ತರ ಕರ್ನಾಟಕ ಭಾಗದ ಪ್ರಭಾವಿ ಮುಖಂಡ ಎಂ.ಬಿ.ಪಾಟೀಲ್ ಆಗಮಿಸಿ ಆಸ್ಕರ್ ಆರೋಗ್ಯ ವಿಚಾರಿಸಿದರು.

ಸುದೀರ್ಘ ಕಾಲದಿಂದ ಆಸ್ಕರ್ ಫೆರ್ನಾಂಡಿಸ್ ಮತ್ತು ಜನಾರ್ದನ ಪೂಜಾರಿಯವರು ಕರಾವಳಿ ಕಾಂಗ್ರೆಸ್ ನಲ್ಲಿ ಒಡನಾಡಿಯಾಗಿದ್ದು, ಪಕ್ಷದ ಬೆಳವಣಿಗೆಗೆ ಶ್ರಮಿಸಿದ್ದರು. ಪೂಜಾರಿಯವರು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ್ದರೆ, ಉಡುಪಿಯನ್ನು ಆಸ್ಕರ್ ಫೆರ್ನಾಂಡಿಸ್ ಪ್ರತಿನಿಧಿಸಿದ್ದರು. 1980ರಲ್ಲಿ ಮೊದಲ ಬಾರಿಗೆ ಉಡುಪಿ ಕ್ಷೇತ್ರದಿಂದ ಗೆದ್ದು ಲೋಕಸಭೆ ಸದಸ್ಯರಾಗಿದ್ದ ಆಸ್ಕರ್, ಆಬಳಿಕ 1984, 89, 1991 ಮತ್ತು 1996ರ ಚುನಾವಣೆಯಲ್ಲಿ ಸತತ ಗೆಲುವು ಸಾಧಿಸಿ ಐದು ಬಾರಿ ಸಂಸದರಾಗಿದ್ದರು. 1998ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಆಸ್ಕರ್ ಅವರನ್ನು ಬಳಿಕ ರಾಜ್ಯಸಭೆ ಸದಸ್ಯರಾಗಿ ಆಯ್ಕೆ ಮಾಡಲಾಗಿತ್ತು.

ಸತತ ನಾಲ್ಕು ಅವಧಿಗೆ ರಾಜ್ಯಸಭೆ ಸದಸ್ಯರಾಗಿದ್ದ ಆಸ್ಕರ್, ಸೋನಿಯಾ ಗಾಂಧಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಕೆಪಿಸಿಸಿ ಅಧ್ಯಕ್ಷ , ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ, ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 2004-09ರ ಎರಡು ಅವಧಿಯ ಯುಪಿಎ ಸರಕಾರದಲ್ಲಿ ಆಸ್ಕರ್ ಫೆರ್ನಾಂಡಿಸ್, ಕಾರ್ಮಿಕ ಖಾತೆ, ಹೆದ್ದಾರಿ, ಭೂಸಾರಿಗೆ, ಸಾಂಖ್ಯಿಕ ಮತ್ತು ಯೋಜನೆ ಅನುಷ್ಠಾನ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 1980ರಲ್ಲಿ ಆಸ್ಕರ್ ಅವರನ್ನು ಮೊದಲಿಗೆ ಲೋಕಸಭೆ ಅಭ್ಯರ್ಥಿಯಾಗಿ ಜನಾರ್ದನ ಪೂಜಾರಿಯವರೇ ಶಿಫಾರಸು ಮಾಡಿದ್ದರು ಅನ್ನುವುದು ಗಮನಾರ್ಹ.

ಜುಲೈ 22, 23ರಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಮಂಗಳೂರಿಗೆ ಆಗಮಿಸಲಿದ್ದು, ಆರೋಗ್ಯ ಸ್ಥಿತಿ ವಿಚಾರಿಸಲಿದ್ದಾರೆ.

Video: 

Mangalore Senior Congress Leader Oscar Fernandes Admitted To Hospital critical. Congress former leader Janardhana Poojary who came to the hospital bursted out in tears. While practising Yoga on Sunday morning, Oscar Fernandes lost his balance and fell down. He did not take it seriously at the time as it was a minor fall," family sources.