ಹೈಕಮಾಂಡ್ ಆದೇಶದ ಬಗ್ಗೆ ಗೊತ್ತಿಲ್ಲ.. ಸಿಎಂ ಬದಲಾವಣೆಯೂ ಗೊತ್ತಿಲ್ಲ.. ಎರಡು ವರ್ಷ ಪೂರೈಸಿದ್ದಕ್ಕೆ ಅಭಿನಂದಿಸ್ತೇನೆ ಎಂದ ನಳಿನ್ !! 

25-07-21 10:09 pm       Mangaluru Correspondent   ಕರಾವಳಿ

ಮುಖ್ಯಮಂತ್ರಿ ‌ಬದಲಾವಣೆ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ. ಹಾಗಾಗಿ ಈ ಬಗ್ಗೆ ನಾನು ಹೆಚ್ಚು ಏನೂ ಹೇಳೋದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.

ಮಂಗಳೂರು, ಜುಲೈ 25: ನಾನು ನಾಳೆ ದೆಹಲಿಗೆ ಹೋಗುತ್ತಿದ್ದೇನೆ, ಹೈಕಮಾಂಡ್ ನಿಂದ ಸೂಚನೆ ಬರುವ ಬಗ್ಗೆ , ಆದೇಶದ ಬಗ್ಗೆ ನನಗೆ ಮಾಹಿತಿಯಿಲ್ಲ. ಮುಖ್ಯಮಂತ್ರಿ ‌ಬದಲಾವಣೆ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ. ಹಾಗಾಗಿ ಈ ಬಗ್ಗೆ ನಾನು ಹೆಚ್ಚು ಏನೂ ಹೇಳೋದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ. ಇದೇ ವೇಳೆ, ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಕಾದು ನೋಡಿ ಅಂತ ಯಾವ ಭಾವನೆಯಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಅದನ್ನ ಯಾವ ಅರ್ಥದಲ್ಲಿ ಹೇಳಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. 

ನಗರದಲ್ಲಿ ತೀವ್ರ ಅಸೌಖ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್ ಮುಖಂಡ ಆಸ್ಕರ್ ಫೆರ್ನಾಂಡಿಸ್ ಅವರನ್ನು ಭೇಟಿ ಮಾಡಿದ ಬಳಿಕ ನಳಿನ್ ಕುಮಾರ್ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದರು. ಸಿಎಂ ಬದಲಾವಣೆ ಕುರಿತ ಪ್ರಶ್ನೆಗೆ, ಎರಡು ವರ್ಷದ ಆಡಳಿತವನ್ನ ಮುಖ್ಯಮಂತ್ರಿಗಳು ಈಗಾಗ್ಲೇ ಪೂರೈಸಿದ್ದಾರೆ.‌ ಹಲವಾರು ಸವಾಲುಗಳ ಮಧ್ಯೆ ಬಹಳ ಒಳ್ಳೆಯ ಆಡಳಿತ ಕೊಟ್ಟಿದ್ದಾರೆ, ನೆರೆ, ಕೋವಿಡ್ ಎಲ್ಲವನ್ನೂ ಚೆನ್ನಾಗಿ ನಿಭಾಯಿಸಿದ್ದಾರೆ. ಆರ್ಥಿಕ ಹೊಡೆತದ ಮಧ್ಯೆಯೂ ಒಳ್ಳೆಯ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಈ ಹೊತ್ತಲ್ಲಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎನ್ನುವ ಮೂಲಕ ಯಡಿಯೂರಪ್ಪ ಅವರಿಗೆ ಇಂದೇ ಕೊನೆ ದಿನ ಅನ್ನುವ ರೀತಿ ಮಾತನಾಡಿದ್ದಾರೆ. 

ಯಡಿಯೂರಪ್ಪನವರು ಪ್ರತೀ ಕಾರ್ಯಕರ್ತರಿಗೆ ಆದರ್ಶ. ಪಕ್ಷ ಹೇಳುವುದನ್ನ ಪಾಲಿಸ್ತೇನೆ ಎನ್ನುವ ಅವರು ನಮಗೆಲ್ಲಾ ಆದರ್ಶ. ರಾಷ್ಟ್ರೀಯ ನಾಯಕರು ಮತ್ತು ಪಕ್ಷದ ಹಿರಿಯರ ಮಾತಿಗೆ ಗೌರವ ಕೊಟ್ಟು ನಡೆದುಕೊಂಡು ಹೋಗೋದು ಕಾರ್ಯಕರ್ತರಿಗೆ ಪ್ರೇರಣೆ. ಈ ದೃಷ್ಟಿಯಿಂದ ಪಕ್ಷ ಹೇಳಿದ್ರೆ ಯಾವುದಕ್ಕೂ ಸಿದ್ದ ಅಂತ ಹೇಳಿದ್ದಾರೆ. ನಾನು ನಾಳೆ ಅಧಿವೇಶನದ ಹಿನ್ನೆಲೆ ದೆಹಲಿಗೆ ಹೋಗ್ತಾ ಇದೇನೆ, ಅವರಿಗೆ ಎರಡು ವರ್ಷ ಪೂರೈಸಿದ್ದಕ್ಕೆ ಅಭಿನಂದನೆ ಸಲ್ಲಿಸ್ತೇನೆ ಎಂದು ಪರೋಕ್ಷವಾಗಿ ಗುಡ್ ಬೈ ಹೇಳಿದ್ದಾರೆ. ‌

ಇನ್ನು ಸಚಿವೆ ಶಶಿಕಲಾ ಜೊಲ್ಲೆ ಅವರ ಮೊಟ್ಟೆ ಡೀಲ್  ಪ್ರಕರಣ ಕುರಿತ ಪ್ರಶ್ನೆಗೆ, ಆ ಬಗ್ಗೆ ಶಶಿಕಲಾ ಜೊಲ್ಲೆ ಅವರಿಂದ ಮಾಹಿತಿ ಪಡೆದು ಕೊಳ್ಳುತ್ತೇನೆ. ಏನು ನಡೆದಿದೆ ಎಂಬುದನ್ನು ವಿಚಾರಿಸಿ ನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದರು

Mangalore State BJP president Nalin Kumar Kateel congratulates CM BSY over two years as CM. He spoke during his visit to see congress senior leader Oscar Fernandes who has been admitted to the hospital after a fall during Yoga.