ಹಾಲಾಡಿ ಕೊಡುಗೆ ಮರೆತು ಹೋಯಿತೇ ಬಿಜೆಪಿಯವರೇ ; ಅಭಿಮಾನಿಗಳಿಂದ ಬಹಿರಂಗ ಅಭಿಯಾನ, ಜಾಲತಾಣದಲ್ಲಿ ಸದ್ದು ಮಾಡಿದ ಡಿಯರ್ ಬಿಜೆಪಿ ಕೂಗು !

03-08-21 06:05 pm       Udupi Correspondent   ಕರಾವಳಿ

ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಮಂತ್ರಿಸ್ಥಾನ ಕೊಡಬೇಕು ಎಂಬ ಕೂಗು ಜೋರಾಗಿದೆ. ಹಾಲಾಡಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಮಾಡುವ ಮೂಲಕ ಅಭಿಮಾನ ಮೆರೆದಿದ್ದಾರೆ. 

ಉಡುಪಿ, ಆಗಸ್ಟ್ 3: ನೂತನ ಸಿಎಂ ಬೊಮ್ಮಾಯಿ ಸಂಪುಟಕ್ಕೆ ಹೊಸಬರು ಸೇರಲಿದ್ದಾರೆ ಎಂಬ ವದಂತಿ ದಟ್ಟವಾಗಿ ಹಬ್ಬಿದೆ. ಇನ್ನೆರಡು ದಿನದಲ್ಲಿ ಹೊಸ ಸಚಿವರು ಪ್ರಮಾಣವಚನ ಸ್ವೀಕರಿಸುತ್ತಾರೆ ಎನ್ನುವ ಮಾಹಿತಿಗಳೂ ಇವೆ. ಈ ನಡುವೆ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಮಂತ್ರಿಸ್ಥಾನ ಕೊಡಬೇಕು ಎಂಬ ಕೂಗು ಜೋರಾಗಿದೆ. ಹಾಲಾಡಿ ಅಭಿಮಾನಿಗಳು ಮಾಜಿ ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರಿಗೆ ಬಹಿರಂಗ ಪತ್ರ ಬರೆದಿದ್ದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಮಾಡುವ ಮೂಲಕ ಅಭಿಮಾನ ಮೆರೆದಿದ್ದಾರೆ. 

ಬೆಂಗಳೂರಿಗೆ ಹೋಗಿ ಯಾರದ್ದೋ ಕೈಕಾಲು ಹಿಡಿದು ಮಂತ್ರಿ ಸ್ಥಾನವನ್ನು ಕೇಳುವುದಿಲ್ಲ. ನನ್ನ ಉಸಿರು ಇದ್ದರೆ ನಾನು ಕಾಡಿಬೇಡಿ ಮಂತ್ರಿಯಾಗುವುದಿಲ್ಲ ಎಂದು ಹಾಲಾಡಿ ಶ್ರೀನಿವಾಸ್ ಶೆಟ್ಟಿ ಹೇಳಿಕೆ ನೀಡಿದ್ದಾರೆ. ಈ ನಡುವೆ ಹಾಲಾಡಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಗರಿಗೆ ಪತ್ರ ಅಭಿಯಾನ ನಡೆಸುತ್ತಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಬರೆದ ಪತ್ರದಲ್ಲಿ ಹಳೆಯ ಎಲ್ಲಾ ನೆನಪುಗಳನ್ನು ಕೆದಕಿದ್ದಾರೆ. 

ಬೆಂಗಳೂರಿಗೆ ಕರೆಸಿ ಮಂತ್ರಿ ಸ್ಥಾನ ತಪ್ಪಿದಾಗ ಯಡಿಯೂರಪ್ಪ ಮಾತುಕತೆ ಮಾಡಿ ಸಿಹಿಸುದ್ದಿ ಕೊಡುವುದಾಗಿ ಹೇಳಿದ್ದರು. ಅದನ್ನು ಯಾಕೆ ಮರೆತಿದ್ದೀರಿ? ನೀವು ಕಿಂಗ್ ಮೇಕರ್. ಸದಾನಂದಗೌಡ, ಶೆಟ್ಟರ್, ಬೊಮ್ಮಾಯಿ ಅವರನ್ನು ಸಿಎಂ ಮಾಡಿದ್ದೀರಿ. ಹಾಲಾಡಿಯನ್ನು ಮಂತ್ರಿ ಮಾಡಬೇಕೆಂದು ಅನ್ನಿಸಲಿಲ್ಲವಾ? ಕೋಟಾ ಶ್ರೀನಿವಾಸ ಪೂಜಾರಿಗೆ ಸ್ಥಾನ ಕೊಟ್ಟದ್ದು ಯಾಕೆ ಎಂಬುದನ್ನು ನಾವು ಇನ್ನೂ ಮರೆತಿಲ್ಲ. ಶೋಭಾ ಕರಂದ್ಲಾಜೆಗೆ ಹಾಲಾಡಿ ಕ್ಷೇತ್ರದಲ್ಲಿ ಅತಿ ಹೆಚ್ಚು ಲೀಡ್ ಕೊಡಿಸಿದ್ದು ನಿಮಗೆ ಮರೆತುಹೋಯಿತೆ? ಹಾಲಾಡಿ ಜಿಲ್ಲೆಯ ಏಕೈಕ ಶಾಸಕರಾಗಿದ್ದ ದಿನಗಳನ್ನು ನೀವು ಮರೆಯಬೇಡಿ. 

ಪಕ್ಷೇತರರಾಗಿದ್ದಾಗ ನಿರ್ಮಲಾ ಸೀತಾರಾಮನ್ ಗೆ ಮತ ಹಾಕಿದ್ದು ನಿಮಗೆ ನೆನಪಿಲ್ಲವೇ? ಹಾಲಾಡಿಗೆ ಸಚಿವ ಸ್ಥಾನ ಸಿಗದಿದ್ದರೆ ನಮಗೆ ಬೇಸರವಿಲ್ಲ. ಆದರೆ ಲಕ್ಷಾಂತರ ಮಂದಿಯ ಶಾಪ ನಿಮಗೆ ತಟ್ಟಲಿದೆ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಎಲ್ಲಾ ಕಡೆ ಓಡಾಡುತ್ತಿದೆ. ಕೆಲವು ಅಭಿಮಾನಿಗಳು ಪ್ರಿಂಟ್ ತೆಗೆದು ಯಡಿಯೂರಪ್ಪನವರಿಗೆ ಪೋಸ್ಟ್ ಮಾಡುತ್ತಿದ್ದಾರೆ. 

ಡಿಯರ್ ಬಿಜೆಪಿ, ಮಂತ್ರಿಯಾಗಲೇಬೇಕು ಹಾಲಾಡಿ, ಇದು ನಮ್ಮ ಒಡಲ ನುಡಿ, ನೀವದನ್ನು ನಡೆಸಿಕೊಡಿ ಎನ್ನುವ ಟ್ಯಾಗ್ ಲೈನಲ್ಲಿ ಮಾಡಿರುವ ಅಭಿಯಾನ ಟೀಮ್ ಹಾಲಾಡಿ, ಥೀಮ್ ಹಾಲಾಡಿ ಹೆಸರಲ್ಲಿ ಭಾರೀ ವೈರಲ್ ಆಗಿದೆ.

Kundapur MLA Halady Srinivas Shetty fans have started twitter campaign stating has BJP party forgotten the good works of our leader on twitter.