ದ.ಕ.ದಲ್ಲಿ ಮುಂದಿನ ವಾರದಿಂದಲೇ ಪಿಯುಸಿ ತರಗತಿ, ಶಾಲೆ ಆರಂಭ ಇನ್ನಷ್ಟು ತಡ ; ಜಿಲ್ಲಾಧಿಕಾರಿ ರಾಜೇಂದ್ರ ಮಾಹಿತಿ 

23-08-21 11:12 pm       Mangaluru correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದಿನ ವಾರದಿಂದಲೇ ಪಿಯುಸಿ ತರಗತಿ ಆರಂಭಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಮಂಗಳೂರು, ಆಗಸ್ಟ್ 23: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದಿನ ವಾರದಿಂದಲೇ ಪಿಯುಸಿ ತರಗತಿ ಆರಂಭಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಜನಪ್ರತಿನಿಧಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಬಗ್ಗೆ ಸಭೆ ನಡೆಸಿದ್ದು ನಿರ್ಧಾರಕ್ಕೆ ಬರಲಾಗಿದೆ. 

ಸದ್ಯಕ್ಕೆ ಪಿಯುಸಿ ತರಗತಿ ಆರಂಭಿಸಲು ನಿರ್ಧರಿಸಲಾಗಿದೆ. ಗ್ರೇಡೆಡ್ ಆಧರಿಸಿ, ಪಾಳಿಯಂತೆ ತರಗತಿಗಳನ್ನು ವಿಭಜಿಸಿ ಕ್ಲಾಸ್ ನಡೆಸಬೇಕು. ಈ ಬಗ್ಗೆ  ಅಧಿಕೃತವಾಗಿ ಜಿಲ್ಲಾಡಳಿತದಿಂದ ಮಾರ್ಗಸೂಚಿ ನೀಡಲಾಗುವುದು ಎಂದು ಸಭೆಯ ಬಳಿಕ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. 

ಅಲ್ಲದೆ, ಪಿಯುಸಿ ತರಗತಿಯ ಫಲಿತಾಂಶ ಆಧರಿಸಿ ಶಾಲೆಗಳನ್ನು ಆರಂಭಿಸಲಾಗುವುದು.‌ ಮುಂದಿನ ಎರಡು ವಾರ ಕಾಲ ಶಾಲೆ ಆರಂಭಿಸುವಂತಿಲ್ಲ.‌ ಆನಂತರ ಶಾಲೆಗಳನ್ನು ನಡೆಸುವ ಬಗ್ಗೆ ಎರಡು ವಾರದ ಬಳಿಕ ನಿರ್ಧರಿಸಲಾಗುವುದು. 

ಪಿಯುಸಿ ತರಗತಿ ಆರಂಭಿಸುವುದಕ್ಕೂ ಮುನ್ನ ಎಲ್ಲ ವಿದ್ಯಾರ್ಥಿಗಳ ಆರ್ ಟಿಪಿಸಿಆರ್ ಮಾಡಿಸಿ, ನೆಗೆಟಿವ್ ಹೊಂದಿರಬೇಕು. ಆಯಾ ಶಾಲೆಗಳ ಆಡಳಿತ ಮಂಡಳಿ ಈ ಬಗ್ಗೆ ಮುತುವರ್ಜಿ ವಹಿಸಬೇಕು. 

ಸದ್ಯಕ್ಕೆ ಹತ್ತರಿಂದ ಹನ್ನೊಂದು ಸಾವಿರ ಟೆಸ್ಟಿಂಗ್ ಆಗ್ತಾ ಇದೆ. ಈ ಹಿಂದೆ ದಿನಕ್ಕೆ ಏಳು ಸಾವಿರ ಪರೀಕ್ಷೆ ಆಗುತ್ತಿದ್ದಾಗ ಪಾಸಿಟಿವ್ ರೇಟ್ 3.9 ಇತ್ತು. ಈಗ ನಾಲ್ಕರಷ್ಟು ಇದೆ.‌ ಇಂದಿನ ಸಭೆಯಲ್ಲಿ ಟೆಸ್ಟಿಂಗನ್ನು ಹೆಚ್ಚಿಸಲು ನಿರ್ಧಾರಕ್ಕೆ ಬರಲಾಗಿದೆ. ‌14 ರಿಂದ 15 ಸಾವಿರ ಟೆಸ್ಟ್ ಮಾಡಲು ನಿರ್ಧರಿಸಿದ್ದು ಆಮೂಲಕ ಸೋಂಕು ಸಮುದಾಯಕ್ಕೆ ಹರಡಿರುವುದನ್ನು ಪತ್ತೆ ಮಾಡಲಾಗುವುದು. ಪಾಸಿಟಿವ್ ಹೆಚ್ಚು ಬಂದರೂ, ಅದನ್ನು ನಿರ್ವಹಣೆ ಮಾಡುವಷ್ಟು ಸಾಮರ್ಥ್ಯ ಜಿಲ್ಲೆಯಲ್ಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ‌

ಕೇರಳದಿಂದ ಬಂದಿರುವ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೆಗೆಟಿವ್ ಸರ್ಟಿಫಿಕೇಟ್ ಹೊಂದಿದ್ದರೂ ಕ್ವಾರಂಟೈನ್ ಬಳಿಕ ಪಾಸಿಟಿವ್ ಆಗಿರುವುದು ಕಂಡುಬಂದಿದೆ. ಈ ಬಗ್ಗೆ ಕಾಲೇಜು ಆಡಳಿತದ ವಿರುದ್ಧ ನೋಟೀಸ್ ನೀಡಲಾಗಿದೆ. ಯಾವ ಲೋಪದಿಂದ ಪಾಸಿಟಿವ್ ಆಗಿದ್ದಾರೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರಾಜೇಂದ್ರ ತಿಳಿಸಿದ್ದಾರೆ.

Mangalore Next week PUC colleges to start, delay in opening schools states Dc Rajendra Kumar