ಕರಾವಳಿಯಲ್ಲಿ ಚಲಾವಣೆ ಕಳಕೊಂಡ ಕಾಂಗ್ರೆಸ್ ನಾಯಕರು ; ಬೆಂಗಳೂರಿಗೆ ಕರೆದು ರಾಜ್ಯ ನಾಯಕರ ಕ್ಲಾಸ್ ! ಮೈಚಳಿ ಬಿಟ್ಟಾರೇ ಮಾಜಿ ನಾಯಕರು ?

04-09-21 10:46 pm       Mangaluru Correspondent   ಕರಾವಳಿ

ಕರಾವಳಿ ಜಿಲ್ಲೆಗಳ ಕಾಂಗ್ರೆಸ್ ನಾಯಕರನ್ನು ಇಂದು ಬೆಂಗಳೂರಿಗೆ ಕರೆಸ್ಕೊಂಡು ರಾಜ್ಯ ನಾಯಕರು ಕ್ಲಾಸ್ ತೆಗೆದುಕೊಂಡಿದ್ದಾರೆ.

ಬೆಂಗಳೂರು, ಸೆ.4 : ಬಿಜೆಪಿ ಜನಾಶೀರ್ವಾದ ಯಾತ್ರೆ ನೆಪದಲ್ಲಿ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ. ಸಂಘಟನಾ ಶಕ್ತಿಯಿಂದಲೂ ಯಾವೆಲ್ಲಾ ಭಾಗದಲ್ಲಿ ಬಿಜೆಪಿಗೆ ಶಕ್ತಿ ಕಡಿಮೆ ಇದೆ ಅನ್ನೋದನ್ನು ಪತ್ತೆ ಮಾಡಿ, ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳನ್ನೂ ಪಟ್ಟಿ ಮಾಡಿ ಮುಂದಿನ ಬಾರಿ ಗೆಲ್ಲುವುದಕ್ಕಾಗಿ ಕಸರತ್ತು ಮಾಡುತ್ತಿದ್ದಾರೆ. ಖಚಿತ ಗೆಲ್ಲಬಲ್ಲ, ಶ್ರಮ ಹಾಕಿದರೆ ಗೆಲ್ಲಬಲ್ಲ, ಗೆಲ್ಲಲು ಕಷ್ಟ ಆಗಬಲ್ಲ ಹೀಗೆ ಮೂರಾಗಿ ವಿಭಾಗಿಸಿ 120ರ ಮ್ಯಾಜಿಕ್ ಸಂಖ್ಯೆಯತ್ತ ದೃಷ್ಟಿ ನೆಟ್ಟಿದ್ದಾರೆ. ಆದರೆ, ಇದೇ ಹೊತ್ತಲ್ಲಿ ಕಾಂಗ್ರೆಸ್ ಏನು ಮಾಡುತ್ತಿದೆ ಅಂದರೆ, ನಾಯಕರು ಮೀಟಿಂಗಿನ ಡೊಂಬರಾಟ ಮಾಡುತ್ತಿದ್ದಾರೆ ಅನ್ನಬೇಕಷ್ಟೆ.

ಕರಾವಳಿ ಜಿಲ್ಲೆಗಳ ಕಾಂಗ್ರೆಸ್ ನಾಯಕರನ್ನು ಇಂದು ಬೆಂಗಳೂರಿಗೆ ಕರೆಸ್ಕೊಂಡು ರಾಜ್ಯ ನಾಯಕರು ಕ್ಲಾಸ್ ತೆಗೆದುಕೊಂಡಿದ್ದಾರೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ಪಕ್ಷದ ಜಿಲ್ಲಾಧ್ಯಕ್ಷರು ಸಭೆಯಲ್ಲಿ ಭಾಗಿಯಾಗಿದ್ದರು. ಸಭೆಯಲ್ಲಿ ಮುಂದಿನ ಬಾರಿಯ ಚುನಾವಣೆ ಗೆಲ್ಲಲು ಈಗಲೇ ತಯಾರಿ ನಡೆಸುವಂತೆ ಸೂಚನೆ ನೀಡಲಾಗಿದೆ. ಆದರೆ, ಕರಾವಳಿಯಲ್ಲಿ ಕಾಂಗ್ರೆಸ್ ನಾಯಕರು ಎಲ್ಲಿ ಮುಟ್ಟಿದ್ದಾರೆ ಅಂದ್ರೆ, ಮೈಮುಟ್ಟಿ ಅಲುಗಾಡಿಸಿದ್ರೂ ಮೈಚಳಿ ಬಿಟ್ಟಿಲ್ಲ ಅನ್ನುವಷ್ಟು. ಯಾಕಂದ್ರೆ, ಕಾಂಗ್ರೆಸ್ ನಾಯಕರಿಗೆ ಈ ಬಾರಿ ಎಷ್ಟೆಲ್ಲಾ ಅವಕಾಶ ಇದ್ದರೂ, ಅದನ್ನು ಬಳಸಿಕೊಂಡೇ ಇಲ್ಲ ಅನ್ನುವುದನ್ನು ಅಲ್ಲಿನ ಕಾರ್ಯಕರ್ತರೇ ಹೇಳುತ್ತಾರೆ.

ಕರಾವಳಿಯ ಎರಡು ಜಿಲ್ಲೆಗಳಲ್ಲಿ ಬಿಜೆಪಿ ಕಳೆದ ಬಾರಿ ಒಂದು ಸೀಟ್ ಹೊರತುಪಡಿಸಿ ಕ್ಲೀನ್ ಸ್ವೀಪ್ ಮಾಡಿತ್ತು. ಆದರೆ, ಹೀಗೆ ಗೆದ್ದು ಬಂದವರೆಲ್ಲ ಹೆಚ್ಚಿನವರು ಹೊಸಬರೇ ಆಗಿದ್ದರು. ಮಂಗಳೂರು, ಬಂಟ್ವಾಳ, ಮೂಡುಬಿದ್ರೆ, ಪುತ್ತೂರು ಕ್ಷೇತ್ರಗಳಲ್ಲಿ ಮೊದಲ ಬಾರಿಗೆ ಕಣಕ್ಕಿಳಿದು ಪಕ್ಷದ ಪತಾಕೆ ಹಾರಿಸಿದ್ದರು. ಇದರರ್ಥ ಅಲ್ಲೆಲ್ಲಾ ಅನನುಭವಿ ಶಾಸಕರು ಇದ್ದಾರೆ, ಹಿಂದೆ ಶಾಸಕರಾಗಿ ಅನುಭವ ಇದ್ದವರು ಮಾಜಿಯಾಗಿದ್ದಾರೆ. ಕಾಂಗ್ರೆಸ್ ಮನಸ್ಸು ಮಾಡಿದ್ದರೆ, ಇಲ್ಲಿನ ಅನುಭವಿ ಶಾಸಕರನ್ನೇ ಮುಂದಿಟ್ಟು ಆಡಳಿತದ ಎಬಿಸಿಡಿ ತಿಳಿಯದ ಅನನುಭವಿಗಳನ್ನು ಇರಿಸು ಮುರಿಸು ಮಾಡಬಹುದಿತ್ತು. ಆದರೆ, ಕಾಂಗ್ರೆಸ್ ಚುನಾವಣೆ ನಡೆದು ನಾಲ್ಕು ವರ್ಷ ಆಗುತ್ತಾ ಬಂದರೂ, ಆ ರೀತಿಯಲ್ಲಿ ಜನರನ್ನು ಆಕರ್ಷಿಸುವ ಕೆಲಸಕ್ಕೆ ಮುಂದಾಗಿಲ್ಲ ಬಿಡಿ. ಜೊತೆಗೆ, ಇಷ್ಟೆಲ್ಲಾ ಸಮಸ್ಯೆ, ಮತ್ತೊಂದು ಎದುರಾದಾಗಲೂ ಜನರ ಜೊತೆ ನಿಲ್ಲುವ ಪ್ರಯತ್ನವನ್ನೇ ಮಾಡಿಲ್ಲ.

ಲೆಕ್ಕ ಹಾಕಿದರೆ, ಬಿಜೆಪಿ ಮತ್ತು ಇಲ್ಲಿನ ಶಾಸಕರು ಕಾಂಗ್ರೆಸ್ ಪಾಲಿಗೆ ಬಹಳಷ್ಟು ಬಾರಿ ಆಹಾರ ಆಗಿದ್ದರು. ಬಹಳಷ್ಟು ಸಂದರ್ಭಗಳಲ್ಲಿ ಶಸ್ತ್ರವನ್ನೇ ಕೈಗಿಟ್ಟು ಬಿಟ್ಟದ್ದೂ ಇತ್ತು. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತು ಇಡೀ ಜಿಲ್ಲೆಯ ವಿಚಾರದಲ್ಲಿ ಬಿಜೆಪಿಗೆ ರಾಜ್ಯದಲ್ಲಿ ಅಧಿಕಾರ ಇದ್ದರೂ, ಇರಿಸು ಮುರಿಸು ಆಗಿದ್ದೇ ಹೆಚ್ಚು. ಆದರೆ, ಇವನ್ನೆಲ್ಲ ಕಾಂಗ್ರೆಸ್ ನಾಯಕರಿಗೆ ಎನ್ ಕ್ಯಾಶ್ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ವಿಚಿತ್ರ ಏನಂದ್ರೆ, ಕಾಂಗ್ರೆಸ್ ಪಾಲಿಗೆ ಕಳೆದ ನಾಲ್ಕು ವರ್ಷಗಳಲ್ಲಿ ಇರುವ ನಾಯಕರೂ ತಮ್ಮ ವರ್ಚಸ್ಸು ಕಳಕೊಂಡಿದ್ದು. ಈಗ ಕಾಲ ಬುಡಕ್ಕೆ ಬೆಂಕಿ ಹತ್ತಿಕೊಳ್ಳುತ್ತೆ ಎನ್ನುವಾಗ ರಾಜ್ಯ ನಾಯಕರು ಜಿಲ್ಲಾ ಮಟ್ಟದ ನಾಯಕರು, ಶಾಸಕರನ್ನು ಕರೆದು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.

ಕರಾವಳಿಯ ಮಟ್ಟಿಗೆ ಹೇಳೋದಾದ್ರೆ, 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಪೂರ್ತಿಯಾಗಿ ಆವರಿಸಿಕೊಂಡಿತ್ತು. ಆದರೆ, 2018ರ ಚುನಾವಣೆಯಲ್ಲಿ ಪೂರ್ತಿ ಉಲ್ಟಾ ಆಗಿತ್ತು. ಅದಕ್ಕೆ ಸ್ವಯಂಕೃತ ಅಪರಾಧಗಳೇ ಹೆಚ್ಚು ದುಬಾರಿಯಾಗಿದ್ದು. ಸಿದ್ದರಾಮಯ್ಯ ಎಸೆದ ಟಿಪ್ಪು ಜಯಂತಿ, ಹಿಂದು ಕಾರ್ಯಕರ್ತರ ಕೊಲೆ ಸರಣಿ ಹಿಂದು ಮತಗಳನ್ನು ಒಂದು ಹಂತಕ್ಕೆ ಧ್ರುವೀಕರಣ ಮಾಡಿತ್ತು. ಅದಕ್ಕೆ ತಕ್ಕಂತೆ, ಜಿಲ್ಲೆಯ ನಾಯಕರು ಚುನಾವಣೆ ಹೊತ್ತಿಗೆ ನೀಡಿದ ಹೇಳಿಕೆಗಳು ಮತ ಗಳಿಕೆಯ ಮೇಲೆ ಪೆಟ್ಟು ಕೊಟ್ಟಿತ್ತು. ಹಾಗೆಂದು, ಇದೇನೂ ಕಾಂಗ್ರೆಸ್ ಪಾಲಿಗೆ ಶಾಶ್ವತ ಅಡ್ಡ ಪರಿಣಾಮಗಳಲ್ಲ. ಆ ಸಂದರ್ಭಕ್ಕೆ ತಕ್ಕ ಪ್ರತಿಕ್ರಿಯೆ ಆಗಿರುತ್ತವಷ್ಟೇ. ಹಿಂದುಳಿದ, ಅಲ್ಪಸಂಖ್ಯಾತ ಟ್ರಂಪ್ ಕಾರ್ಡನ್ನೇ ಮುಂದಿಟ್ಟು ಚುನಾವಣೆ ಗೆಲ್ಲುವ ಕಾಂಗ್ರೆಸ್ ಇವನ್ನೆಲ್ಲ ದೊಡ್ಡ ಮೈನಸ್ ಪಾಯಿಂಟ್ ಅಂತ ಅನಿಸ್ಕೊಳ್ಳೋದೂ ಇಲ್ಲ.

ಆದರೆ, ಕರಾವಳಿಯಲ್ಲಿ ಕಾಂಗ್ರೆಸ್ ನಾಯಕರು ಹಿಂದಿನ ಖದರ್ ಕಳಕೊಂಡಿದ್ದೂ ಅಷ್ಟೇ ಸತ್ಯ. ಯಾವುದೇ ಒಬ್ಬ ನಾಯಕ ಚುನಾವಣೆ ಗೆಲ್ಲೋದು ಕೇವಲ ಆತನ ಹಣಬಲ ಮತ್ತು ಜನ ಬಲದಿಂದಷ್ಟೇ ಆಗಿರುವುದಿಲ್ಲ. ಚುನಾವಣೆ ಗೆಲುವಿನಲ್ಲಿ 40 ಶೇಕಡಾ ಪಾಲು ನಾಯಕನ ವರ್ಚಸ್ಸು ಕೂಡ ವರ್ಕೌಟ್ ಆಗುತ್ತದೆ. ಈ ವಿಚಾರ ನೋಡಿದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡನೇ ಹಂತದ ನಾಯಕರನ್ನು ಬೆಳೆಸಿದ್ದು ಕಂಡುಬರುವುದಿಲ್ಲ. ಬಿಜೆಪಿಯಾದ್ರೆ ಸಂಘ ಪರಿವಾರದ ನಾಯಕರನ್ನಾದ್ರೂ ಪಣಕ್ಕೊಡ್ಡಿ ಚುನಾವಣೆ ಗೆಲ್ಲುತ್ತದೆ. ಆ ರೀತಿಯ ಸಂಘಟನಾ ಶಕ್ತಿ ಕಾಂಗ್ರೆಸಿನಲ್ಲಿ ಇಲ್ಲ. ಬದಲಿಗೆ, ಇರುವ ನಾಯಕರು ಸೋತ ಬಳಿಕ ಐದು ವರ್ಷ ಕಾಲವೂ ಸ್ವರ ಕಳಕೊಂಡು ಇದ್ದುಬಿಟ್ಟು ಚುನಾವಣೆ ಹೊತ್ತಿಗೆ ಚಾಲ್ತಿಗೆ ಬರುತ್ತಾರೆ. ಕಾಂಗ್ರೆಸ್ ನಾಯಕರ ಈ ರೀತಿಯ ಜಾಯಮಾನ ಪಕ್ಷಕ್ಕೇ ಮುಳುವಾಗಲಿದೆ.

ಮಂಗಳೂರಿನಲ್ಲಿ ಜೆ.ಆರ್.ಲೋಬೋ ಪ್ರಾಬಲ್ಯ ಕಳಕೊಂಡಿದ್ದರೆ, ಇತ್ತ ಐವಾನ್ ಡಿಸೋಜ ಪ್ರತಿ ಬಾರಿ ಕಾಲೆಳೆಯುವ ಕೆಲಸದಲ್ಲೇ ಇದ್ದಾರೆ. ಸ್ವಂತ ಗೆಲ್ಲುವ ಶಕ್ತಿ ಇರದಿದ್ದರೂ, ಇನ್ನೊಬ್ಬನಿಗೆ ಎಡತಾಕುವ ಕೆಲಸ. ಇಬ್ಬರೂ ಈಗ ಚಲಾವಣೆ ಇಲ್ಲದ ನಾಣ್ಯದಂತಾಗಿದ್ದಾರೆ. ಮಂಗಳೂರು ಉತ್ತರದಲ್ಲಿ ಮೊಯ್ದೀನ್ ಬಾವಾ ಪೂರ್ತಿಯಾಗಿ ಹಿಡಿತ ಕಳಕೊಂಡಿದ್ದಾರೆ. ಚಲಾವಣೆಯಲ್ಲಿ ಮೊದಲೇ ಇಲ್ಲ. ಬಂಟ್ವಾಳದಲ್ಲಿ ರಮಾನಾಥ ರೈಗೆ ಚಾರ್ಮ್ ಇದ್ದರೂ, ಹಿಂದಿನ ವರ್ಚಸ್ಸು ಉಳಿಸಿಕೊಂಡಿಲ್ಲ. ಪುತ್ತೂರಿನಲ್ಲಿ ಶಕುಂತಳಾ ಶೆಟ್ಟಿ ಮತ್ತು ಹೇಮನಾಥ ಶೆಟ್ಟಿ ಪರಸ್ಪರ ಕಾಲೆಳೆಯುವುದರಲ್ಲೇ ಇದ್ದಾರೆ. ಸುಳ್ಯದಲ್ಲಿ ಡಾ.ರಘು ಚುನಾವಣೆ ಸಂದರ್ಭಕ್ಕೆ ಮಾತ್ರ ಸೀಮಿತ. ಬೆಳ್ತಂಗಡಿಯಲ್ಲಿ ವಸಂತ ಬಂಗೇರ ಹಳೆ ಹುಲಿಯೇ ಆಗಿದ್ದರೂ, ಬಿಜೆಪಿಯ ಯುವ ನಾಯಕನ ಮುಂದೆ ಹಲ್ಲಿಲ್ಲದ ಹಾವು ಅಷ್ಟೇ.

ಇನ್ನು ಮಂಗಳೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಯುಟಿ ಖಾದರ್ ಮಾತ್ರ ಹಿಂದಿನ ಸ್ಥಿತಿಯನ್ನೇ ಕಾಯ್ದುಕೊಂಡಿದ್ದಾರೆ. ತಿಪ್ಪರಲಾಗ ಹೊಡೆದರೂ ತನ್ನ ಸ್ಥಾನ ಕದಲಿಸಲಾಗದು ಅನ್ನುವುದು ಅವರಿಗೂ ಗೊತ್ತು. ಹಿಂದು- ಮುಸ್ಲಿಮರನ್ನು ಒಂದೇ ದೋಣಿಯಲ್ಲಿ ಒಯ್ಯುವ ಚಾಣಾಕ್ಷ ನೀತಿಯಿಂದಾಗಿ ಏನೇ ಆದ್ರೂ ಚಲಾವಣೆಯಲ್ಲೇ ಇರುತ್ತಾರೆ. ಮೂಡುಬಿದ್ರೆಯಲ್ಲಿ ಅಭಯಚಂದ್ರ ಜೈನ್ ಸ್ವತಃ ಕೆಳಕ್ಕಿಳಿದು ಮಿಥುನ್ ರೈಯನ್ನು ಮುಂದಕ್ಕೊಡ್ಡುವುದು ಖಾತ್ರಿಯಾಗಿದೆ. ಅದಕ್ಕಾಗಿ ಮಿಥುನ್ ರೈ ಕೂಡ ಮೂಡುಬಿದ್ರೆಯಲ್ಲೇ ಝಂಡಾ ಊರಿ ಕಸರತ್ತಿನ ಅಭಿಯಾನದಲ್ಲಿದ್ದಾರೆ. ಪೆಟ್ರೋಲ್, ಡೀಸೆಲ್ ದರ ಏರಿಕೆ, ಲಾಕ್ಡೌನ್ ತಪ್ಪುಗಳು, ಲಸಿಕೆ ಗೊಂದಲ, ದೈನಂದಿನ ಸಾಮಗ್ರಿಗಳ ಬೆಲೆಯೇರಿಕೆ, ಆಡಳಿತ ಇದ್ದರೂ ಸ್ವರ ಕಳಕೊಂಡ ಬಿಜೆಪಿ ನಾಯಕರೆದುರು ಅನುಭವಿ ಕಾಂಗ್ರೆಸ್ ನಾಯಕರೇ ಹುಲ್ಲಿನ ಚಾಪೆಯಡಿ ಮಲಗಿಕೊಂಡಿದ್ದರೆ, ಪಕ್ಷದ ರಾಜ್ಯ ನಾಯಕರು ಮೀಟಿಂಗ್ ಮಾಡಿ ಏನು ಕುಟ್ಟುವುದಕ್ಕಾಗುತ್ತೆ ಹೇಳಿ..

Congress party slowly loses power in Mangalore. Bengaluru leaders call leaders of Mangalore organise meeting and take class about how to get ready for the next coming elections.