ಮಂದಾರ ಊರನ್ನು ನುಂಗಿ ಹಾಕಿತ್ತು ಪಾಲಿಕೆ ಅಧಿಕಾರಸ್ಥರ ಅಸಡ್ಡೆ ; ತ್ಯಾಜ್ಯ ವಿಲೇವಾರಿಯನ್ನೇ ಮುಂದಿಟ್ಟು ರಾಮಕೃಷ್ಣ ಮಠ ಕಟ್ಟಿದ್ದ ಕಂಪನಿಯೀಗ ನಂಬರ್ ವನ್ !

29-09-21 06:05 pm       Giridhar Shetty   ಕರಾವಳಿ

ಕಸ ವಿಲೇವಾರಿ ಅನ್ನೋದನ್ನೇ ಮುಂದಿಟ್ಟು ಮನಸ್ಸು ಮಾಡಿದರೆ, ಕಸದಿಂದ ರಸ ತೆಗೆಯಬಲ್ಲ ಕಂಪನಿ ಹುಟ್ಟು ಹಾಕಬಹುದು, ತ್ಯಾಜ್ಯವನ್ನೇ ಮಾರ್ಕೆಟ್ ಮಾಡಿ ನೂರಾರು ಜನರಿಗೆ ಉದ್ಯೋಗ ನೀಡಬಹುದು ಅನ್ನೋದನ್ನು ಸಾಧಿಸಿ ತೋರಿಸಿದವರು ರಾಮಕೃಷ್ಣ ಮಠದ ಗರಡಿಯಲ್ಲಿ ಬೆಳೆದು ನಿಂತ ಮಂಗಳಾ ರಿಸೋರ್ಸ್ ಮ್ಯಾನೇಜ್ಮೆಂಟ್ ಎನ್ನುವ ಸಂಸ್ಥೆ.

ಮಂಗಳೂರು, ಸೆ.29: ನಗರಗಳು ಅಂದ್ರೆ, ಅಲ್ಲಿನ ಕಸ ನಿರ್ವಹಣೆಯದ್ದೇ ದೊಡ್ಡ ಚಿಂತೆ. ದಿನವಹಿ ಉತ್ಪಾದನೆಯಾಗುವ ನಾನಾ ರೀತಿಯ ತ್ಯಾಜ್ಯಗಳನ್ನು ವಿಲೇವಾರಿ ಮಾಡುವುದೇ ಆಡಳಿತಕ್ಕೆ ದೊಡ್ಡ ಸವಾಲು. ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು ಎನ್ನುವ ನಿಯಮಗಳಿದ್ದರೂ, ಅದನ್ನು ಪಾಲನೆ ಮಾಡುವುದು ಅಷ್ಟಕ್ಕಷ್ಟೆ. ಮಂಗಳೂರಿನ ಮಟ್ಟಿಗೆ ಕಸ ವಿಲೇವಾರಿ ಬಗ್ಗೆ ಆಡಳಿತಕ್ಕೆ ಎಷ್ಟು ಅಸಡ್ಡೆ ಇದೆಯಂದ್ರೆ, ಪಚ್ಚನಾಡಿ ಎನ್ನುವ ಸುಂದರ ಜಾಗವನ್ನು ಗಬ್ಬೆದ್ದು ನಾರುವಂತೆ ಮಾಡಿದ ಕೀರ್ತಿ ಇಲ್ಲಿನ ಪಾಲಿಕೆಯವರಿಗೆ ಸಲ್ಲುತ್ತದೆ. ಪಾಲಿಕೆಯ ಅಧಿಕಾರಸ್ಥರ ದೈನೇಸಿ ಆಡಳಿತದಿಂದಾಗಿ ಪಚ್ಚನಾಡಿಯಲ್ಲಿ ತ್ಯಾಜ್ಯ ರಾಶಿಯೇ ಕುಸಿದು ಮಂದಾರ ಎನ್ನುವ ಊರೇ ಇಲ್ಲದಂತಾಗಿದೆ. ಅಲ್ಲಿದ್ದ ನಿವಾಸಿಗಳೆಲ್ಲ ಈಗ ಬೀದಿಗೆ ಬಿದ್ದಿದ್ದಾರೆ.

ಈ ಪೀಠಿಕೆ ಯಾಕಂದ್ರೆ, ಕಸ ವಿಲೇವಾರಿ ಅನ್ನೋದನ್ನೇ ಮುಂದಿಟ್ಟು ಮನಸ್ಸು ಮಾಡಿದರೆ, ಕಸದಿಂದ ರಸ ತೆಗೆಯಬಲ್ಲ ಕಂಪನಿ ಹುಟ್ಟು ಹಾಕಬಹುದು, ತ್ಯಾಜ್ಯವನ್ನೇ ಮಾರ್ಕೆಟ್ ಮಾಡಿ ನೂರಾರು ಜನರಿಗೆ ಉದ್ಯೋಗ ನೀಡಬಹುದು ಅನ್ನೋದನ್ನು ಸಾಧಿಸಿ ತೋರಿಸಿದವರು ರಾಮಕೃಷ್ಣ ಮಠದ ಗರಡಿಯಲ್ಲಿ ಬೆಳೆದು ನಿಂತ ಮಂಗಳಾ ರಿಸೋರ್ಸ್ ಮ್ಯಾನೇಜ್ಮೆಂಟ್ ಎನ್ನುವ ಸಂಸ್ಥೆ. ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷರೂ ಆಗಿರುವ ದಿಲ್ ರಾಜ್ ಆಳ್ವ, ಬಿಜೆಪಿ ಮುಖಂಡ ಗಣೇಶ್ ಕಾರ್ಣಿಕ್, ಸಹ್ಯಾದ್ರಿ ಕಾಲೇಜಿನ ಮುಖ್ಯಸ್ಥ ಮಂಜುನಾಥ ಭಂಡಾರಿ, ರಂಜನ್ ಕಲ್ಲರಪಾಡಿ, ಸಚಿನ್ ಶೆಟ್ಟಿ ಹೀಗೆ ಐದಾರು ಮಂದಿ ಸೇರಿಕೊಂಡು ರಾಮಕೃಷ್ಣ ಮಠದ ಜಿತಕಾಮಾನಂದ ಸ್ವಾಮೀಜಿಗಳ ಪ್ರೇರಣೆಯಂತೆ ತ್ಯಾಜ್ಯ ವಿಲೇವಾರಿಯ ಕೆಲಸಕ್ಕಿಳಿದು ನೂರಾರು ಜನರಿಗೆ ಉದ್ಯೋಗದ ದಾರಿಯಾಗಿಸಿದ್ದಾರೆ. ಅಷ್ಟೇ ಅಲ್ಲ, ಕೇವಲ ಆರಂಭಿಸಿದ ಒಂದೇ ವರ್ಷದಲ್ಲಿ ಅತ್ಯಂತ ಯಶಸ್ವಿಯಾಗಿ ತ್ಯಾಜ್ಯ ವಿಲೇವಾರಿ ಮಾಡುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ.

ಇವರು ಕಸ ವಿಲೇವಾರಿ ಉದ್ದೇಶದ ಸ್ಟಾರ್ಟಪ್ ಕಂಪನಿಯನ್ನು ಹುಟ್ಟುಹಾಕಲು ಕಾರಣವಾಗಿದ್ದೇ ಮಂದಾರದಲ್ಲಿ ಮೂರು ವರ್ಷಗಳ ಹಿಂದೆ ನಡೆದಿದ್ದ ದುರಂತ. ಅದಕ್ಕೂ ಹಿಂದೆ, ಐದು ವರ್ಷಗಳಿಂದ ಮಂಗಳೂರು ನಗರದಲ್ಲಿ ರಾಮಕೃಷ್ಣ ಮಠದಿಂದ ಸ್ವಚ್ಛ ಭಾರತ್ ಕಲ್ಪನೆಯಡಿ ಕಾರ್ಯಕ್ರಮ ನಡೆಸುತ್ತಾ ಬಂದಿದ್ದ ಇವರಿಗೆ ಮಂದಾರದಲ್ಲಿ ನಡೆದಿದ್ದ ದುರಂತ ಹೊಸ ಸವಾಲನ್ನು ಮುಂದಿಟ್ಟಿತ್ತು. ಹತ್ತನ್ನೆರಡು ವರ್ಷಗಳಿಂದ ಪಚ್ಚನಾಡಿಯಲ್ಲಿ ಕಸವನ್ನು ಸುರಿಯುತ್ತಾ ಗುಡ್ಡೆ ಹಾಕಿದ್ದು ಒಂದು ಊರನ್ನೇ ಆಹುತಿ ತೆಗೆದುಕೊಂಡಿದ್ದನ್ನು ಊಹಿಸಲು ಸಾಧ್ಯವಾಗಲಿಲ್ಲ. ಕಸ ವಿಲೇವಾರಿ ಮಾಡದಿದ್ದರೇ ಇಡೀ ನಗರಕ್ಕೇ ದುರಂತ ಎದುರಾಗಬಹುದು ಎನ್ನುವ ದೂರಗಾಮಿ ಕಲ್ಪನೆಯೊಂದಿಗೆ ಹುಟ್ಟಿದ್ದೇ ಮಂಗಳಾ ರಿಸೋರ್ಸ್ ಮ್ಯಾನೇಜ್ಮೆಂಟ್ ಸಂಸ್ಥೆ.

ಮೊದಲಿಗೆ, ನಗರ ವ್ಯಾಪ್ತಿಯ 15 ಅಪಾರ್ಟ್ಮೆಂಟ್ ಗಳನ್ನು ಗುರುತಿಸಿ, ಕಸ ವಿಲೇವಾರಿಗೆ ಸಂಸ್ಥೆ ಮುಂದಾಗಿತ್ತು. ಅದಾಗಲೇ ರಾಮಕೃಷ್ಣ ಮಠದಿಂದ ಪಾಟ್ ಕಾಂಪೋಸ್ಟ್ ಗೊಬ್ಬರದ ಪರಿಕಲ್ಪನೆ ಇದ್ದುದರಿಂದ ಸಂಸ್ಥೆಯ ವತಿಯಿಂದ 600 ಮನೆಗಳಿಗೆ ಪಾಟ್ ಗಳನ್ನು ನೀಡಿ, ಕಸವನ್ನು ಸಂಗ್ರಹಿಸಿ ಗೊಬ್ಬರ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ ಗ್ರಾಹಕ ಕಂಪನಿಗಳಿಗೆ ನೀಡುವ ವ್ಯವಸ್ಥೆ ಆರಂಭಿಸಿದ್ದರು. ಎರಡು ವರ್ಷಗಳ ಹಿಂದೆ ಹೀಗೆ ಆರಂಭಗೊಂಡ ಸಂಸ್ಥೆ ಈಗ ಕಸ ವಿಲೇವಾರಿಯಲ್ಲಿ ಯಶಸ್ವಿಯಾಗಿ ಬೆಳೆದು ನಿಂತಿದೆ. ಆನಂತರ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ನಡೆಸಲು ಗುತ್ತಿಗೆ ದೊರೆತಿತ್ತು. ದಿನಕ್ಕೆ ಒಂದೂವರೆ ಟನ್ ಬರುತ್ತಿದ್ದ ಕಸವನ್ನು ಸಂಗ್ರಹಿಸಿ, ವಿಲೇವಾರಿ ನಡೆಸಿದ್ದು ಗಮನ ಸೆಳೆದಿತ್ತು. ಒಂದೂವರೆ ವರ್ಷದಿಂದ ಅಲ್ಲಿ ಕೆಲಸ ಸಾಗಿದ್ದು ಎಂಟು ಮಂದಿ ಉದ್ಯೋಗದಲ್ಲಿದ್ದಾರೆ.

ಗ್ರಾಪಂ ಮಟ್ಟದಲ್ಲಿ ಕಸವನ್ನು ಸಂಗ್ರಹಿಸಿ ವಿಲೇವಾರಿ ಮಾಡುವುದು ಭಾರೀ ಕಡಿಮೆ. ಆದರೆ, ಕೇಂದ್ರ ಸರಕಾರ ತ್ಯಾಜ್ಯ ವಿಲೇವಾರಿಗೆ ಸ್ಪಷ್ಟ ಸೂಚನೆ ನೀಡಿದ್ದು ಪ್ರತೀ ಗ್ರಾಪಂ ವ್ಯಾಪ್ತಿಯಲ್ಲೂ ತ್ಯಾಜ್ಯ ಸಂಗ್ರಹ ಆಗಬೇಕೆಂದು ಸೂಚನೆ ನೀಡಿದೆ. ಅದರಂತೆ, ಇಡೀ ದೇಶದಲ್ಲೇ ಮೊದಲ ಬಾರಿಗೆ ದಕ್ಷಿಣ ಕನ್ನಡ, ಉಡುಪಿ, ರಾಮನಗರ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಆರಂಭಿಕ ಪ್ರಕ್ರಿಯೆ ನಡೆದಿದೆ. ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಮೂರು ತಿಂಗಳ ಹಿಂದೆ, 41 ಗ್ರಾಮ ಪಂಚಾಯತ್ ವ್ಯಾಪ್ತಿಯ ಕಸ ವಿಲೇವಾರಿಯ ಹೊಣೆಯನ್ನು ಮಂಗಳಾ ರಿಸೋರ್ಸ್ ಸಂಸ್ಥೆಗೆ ವಹಿಸಲಾಗಿತ್ತು. ದಿನಕ್ಕೆ 3ರಿಂದ ನಾಲ್ಕು ಟನ್ ಕಸ ಸಂಗ್ರಹವಾಗುತ್ತಿದ್ದು, ನಿಟ್ಟೆ ಬಳಿಯ ಪದವು ಎಂಬಲ್ಲಿ ಪ್ಲಾಂಟ್ ಮಾಡಲಾಗಿದೆ. ಎರಡು ತಿಂಗಳಿಂದ ಕೆಲಸ ನಡೆಯುತ್ತಿದ್ದು 26 ಮಂದಿ ಅಲ್ಲಿ ಕೆಲಸಕ್ಕಿದ್ದಾರೆ.

ಒಟ್ಟು ಕೆಲಸವನ್ನು ಮುತುವರ್ಜಿ ವಹಿಸ್ಕೊಂಡು ಮಾಡುತ್ತಿರುವ ದಿಲ್ ರಾಜ್ ಆಳ್ವ ತಮ್ಮ ಕೆಲಸದ ಬಗ್ಗೆ ತುಂಬ ಮೆಚ್ಚುಗೆ ವಹಿಸುತ್ತಾರೆ. ಕುಡಿದು ಎಸೆದ ಬಿಸ್ಲೆರಿ ಬಾಟಲ್, ಪ್ಲಾಸ್ಟಿಕ್ ವಸ್ತುಗಳು, ಬೇರೆ ಬೇರೆ ರೂಪದ ರಟ್ಟು, ಪುಸ್ತಕ, ಎಲ್ಲ ರೀತಿಯ ಒಣ ಕಸಗಳಿಗೂ 99 ಶೇಕಡಾ ಗ್ರಾಹಕರಿದ್ದಾರೆ. ತ್ಯಾಜ್ಯವನ್ನು ಮರು ಬಳಸಿ, ಟ್ಯಾಂಕ್, ಕ್ಯಾನ್ ಇನ್ನಿತರ ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳು ಇದರ ಗ್ರಾಹಕರು. ನಾವು ಯಾವುದೇ ಕಸವನ್ನು ಭೂಮಿಗೆ ಎಸೆಯಬೇಕಿಲ್ಲ. ಎಲ್ಲವನ್ನೂ ಪ್ರತ್ಯೇಕಿಸಿ, ಬೆಂಗಳೂರಿನ ಕಂಪನಿಗಳಿಗೆ ನೀಡುತ್ತೇವೆ ಎಂದು ಹೇಳುತ್ತಾರೆ.

ಸದ್ಯಕ್ಕೆ ಮಂಗಳಾ ರಿಸೋರ್ಸ್ ಸಂಸ್ಥೆಗೆ ಭಾರೀ ಡಿಮ್ಯಾಂಡ್ ಬಂದಿದ್ದು, ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಮೆಡಿಕಲ್ ಕಾಲೇಜಿನ ತ್ಯಾಜ್ಯ ಸಂಸ್ಕರಣೆಯ ಹೊಣೆಯನ್ನೂ ವಹಿಸಲಾಗಿದೆ. ಅಲ್ಲಿ ದಿನಕ್ಕೆ 3 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು ಅದನ್ನು ಅವರದೇ ಪ್ಲಾಂಟ್ ನಲ್ಲಿ ಸಂಸ್ಕರಿಸಿ, ಅಗತ್ಯ ಇದ್ದವರಿಗೆ ಪೂರೈಕೆ ಮಾಡುತ್ತೇವೆ. ಇದರ ಜೊತೆಗೆ ಎಂಆರ್ ಪಿಎಲ್ ಕಂಪನಿಯಿಂದಲೂ ತ್ಯಾಜ್ಯ ವಿಲೇವಾರಿ ಗುತ್ತಿಗೆ ಸಿಕ್ಕಿದ್ದು, ಅದರ ಕೆಲಸ ಪ್ರಗತಿಯಲ್ಲಿದೆ. ಕಟೀಲು ದೇವಸ್ಥಾನದಲ್ಲಿಯೂ 5 ತಿಂಗಳಿಂದ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದೇವೆ ಎನ್ನುತ್ತಾರೆ, ದಿಲ್ ರಾಜ್ ಆಳ್ವ.

ಇಷ್ಟಕ್ಕೂ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಸ ತ್ಯಾಜ್ಯ ವಿಲೇವಾರಿಗೆಂದೇ ಕೋಟ್ಯಂತರ ರೂಪಾಯಿ ತೆರಿಗೆ ಸಂಗ್ರಹ ಮಾಡಲಾಗುತ್ತದೆ. ಪ್ರತಿ ಮನೆಗೂ ಕಸ ಸಂಗ್ರಹಕ್ಕೆಂದು ತೆರಿಗೆ ವಿಧಿಸುತ್ತಾರೆ. ಆದರೆ, ಪಾಲಿಕೆಯವರು ಕೋಟ್ಯಂತರ ರೂಪಾಯಿ ಮೊತ್ತವನ್ನು ಯಾವುದೋ ಕಂಪನಿಗೆ ಗುತ್ತಿಗೆ ಕೊಟ್ಟು ಪಚ್ಚನಾಡಿ ಎನ್ನುವ ಗ್ರಾಮವನ್ನು ದುರ್ನಾತ ಬೀರುವಂತೆ ಮಾಡಿದ್ದಾರೆ. ಅಲ್ಲಿದ್ದ ಮಂದಾರ ಎನ್ನುವ ನಿಸರ್ಗ ಸಿರಿಯ ಊರನ್ನೇ ತ್ಯಾಜ್ಯ ನುಂಗಿ ಹಾಕುವಂತೆ ಮಾಡಿದ್ದು, ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಇಲ್ಲಿನ ನರಸತ್ತ ಆಡಳಿತಗಾರರು. ತ್ಯಾಜ್ಯವನ್ನು ವಿಲೇವಾರಿ ಮಾಡದೆ, ರಾಶಿ ಹಾಕಿದ್ದೇ ಅಲ್ಲಿನ ದುರಂತಕ್ಕೆ ಕಾರಣವಾಗಿತ್ತು. ಕಳೆದ ಬಾರಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಮುಂಬೈ ಮೂಲದ ಆಂಟನಿ ವೇಸ್ಟ್ ಕಂಪನಿಗೆ ಗುತ್ತಿಗೆ ಕೊಡಲಾಗಿತ್ತು. ಏಳು ವರ್ಷಗಳ ಗುತ್ತಿಗೆ ಮುಂದಿನ ಜನವರಿಗೆ ಮುಗಿಯಲಿದೆ. ಹೀಗಾಗಿ ಈಗ ಆಡಳಿತದಲ್ಲಿರುವ ಬಿಜೆಪಿ ಹೊಸ ಗುತ್ತಿಗೆಗೆ ಮುಂದಾಗಿದೆ. ಅದಕ್ಕಾಗಿ ಭಾರೀ ದೊಡ್ಡ ಯೋಜನೆಗೆ ಪಾಲಿಕೆಯ ಆಡಳಿತ ಕೈಹಾಕಿದೆ.

ಮಾಹಿತಿ ಪ್ರಕಾರ, ಪಾಲಿಕೆಯಲ್ಲಿ ತ್ಯಾಜ್ಯ ವಿಲೇವಾರಿಗೆ 52 ಕೋಟಿ ಖರ್ಚು ಮಾಡುವುದಕ್ಕೆ ಯೋಜನೆ ರೆಡಿಯಾಗಿದೆ. 38 ಕೋಟಿ ವೆಚ್ಚದಲ್ಲಿ ಹೊಸ ವಾಹನ ಖರೀದಿಸುವುದು, ಹಿಂದೆ ಇದ್ದ ಪೌರ ಕಾರ್ಮಿಕರನ್ನೇ ಉಳಿಸಿಕೊಂಡು ಕೆಲಸ ಮಾಡಿಸುವುದು, ಜೊತೆಗೆ 14 ಕೋಟಿ ವೆಚ್ಚದಲ್ಲಿ ಪಾಲಿಕೆಯ ವಾರ್ಡುಗಳನ್ನು ನಾಲ್ಕು ವಲಯಗಳಾಗಿಸಿ ಸ್ಥಳೀಯ ಕಂಟ್ರಾಕ್ಟರುಗಳಿಗೆ ಹಂಚಲು ಪ್ಲಾನ್ ಆಗಿತ್ತು. ಆದರೆ, ಪಾಲಿಕೆ ಆಡಳಿತದ ನಿರ್ಣಯಕ್ಕೆ ಕಾಂಗ್ರೆಸ್ ವಿರೋಧ ಸೂಚಿಸಿದ್ದು, ರಾಮಕೃಷ್ಣ ಮಠದ ಮಂಗಳಾ ರಿಸೋರ್ಸ್ ಸಂಸ್ಥೆಗೇ ತ್ಯಾಜ್ಯ ವಿಲೇವಾರಿ ಗುತ್ತಿಗೆ ನೀಡುವಂತೆ ರಾಜಕೀಯ ಒತ್ತಡ ಹಾಕಿದೆ. ಸುದ್ದಿಗೋಷ್ಠಿ ನಡೆಸಿದ, ಮಾಜಿ ಶಾಸಕ ಲೋಬೋ ಮತ್ತು ವಿಪಕ್ಷ ನಾಯಕ ವಿನಯರಾಜ್, ಬಿಜೆಪಿ ಆಡಳಿತ 52 ಕೋಟಿಯ ಎಸ್ಟಿಮೇಟ್ ಮಾಡಿದ್ದನ್ನು ವಿರೋಧಿಸಿದ್ದಲ್ಲದೆ ಇದರ ಹಿಂದೆ ಬಿಜೆಪಿ ನಾಯಕರು ಭಾರೀ ಕಿಕ್ ಬ್ಯಾಕ್ ಪಡೆಯುವ ಹುನ್ನಾರ ಇದೆಯೆಂದು ಆರೋಪಿಸಿದ್ದರು.  

ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಂತೆ, ಪಾಲಿಕೆಯಲ್ಲಿ ಜಿಲ್ಲಾಧಿಕಾರಿ, ಮೇಯರ್ ಮತ್ತು ಇತರ ಅಧಿಕಾರಿಗಳು ತುರ್ತಾಗಿ ಸಭೆ ನಡೆಸಿದ್ದಾರೆ. ಸಾರ್ವಜನಿಕವಾಗಿ ಮುಜುಗರ ತಪ್ಪಿಸಲೆಂದೋ ಏನೋ, ರಾಮಕೃಷ್ಣ ಮಠದ ಮಂಗಳಾ ರಿಸೋರ್ಸ್ ಮ್ಯಾನೇಜ್ಮೆಂಟ್ ಕಂಪನಿಗೂ ತ್ಯಾಜ್ಯ ವಿಲೇವಾರಿ ಬಗ್ಗೆ ಡಿಪಿಆರ್ ನೀಡುವಂತೆ ಸೂಚನೆ ನೀಡಿದ್ದಾರೆ. ಮಹಾನಗರ ಪಾಲಿಕೆ ವ್ಯಾಪ್ತಿಯ ಕಸದ ನಿರ್ವಹಣೆಯ ಗುತ್ತಿಗೆ ವಹಿಸಿದರೆ ನಾವು ಮಾಡಲು ರೆಡಿ ಇದ್ದೇವೆ. ಮೊದಲಿಗೆ, ಬೇಕಾದರೆ ಒಂದು ವಾರ್ಡ್ ಗುತ್ತಿಗೆ ನೀಡಲಿ. ನಾವು ಹೇಗೆ ಮಾಡುತ್ತೇವೆ ಎನ್ನುವುದನ್ನು ತೋರಿಸುತ್ತೇವೆ ಎಂದು ದಿಲ್ ರಾಜ್ ಆಳ್ವ ಹೇಳಿದ್ದಾರೆ. ಪಾಲಿಕೆಯ ಆಡಳಿತಕ್ಕೆ ಕಸ ನಿರ್ವಹಣೆಯ ಬಗ್ಗೆ ಆಸಕ್ತಿ ಇದೆಯೋ, ಹಣ ಹೊಡೆಯೋದ್ರ ಮೇಲೆ ಆಸಕ್ತಿ ಇದೆಯೋ ಗೊತ್ತಿಲ್ಲ. 

Dilraj Alva Mangala Research Management a unit of Ramkrishana Mission Mangalore come up with new idea for waste management which is creating big damage for people living in city.