ಬ್ರೇಕಿಂಗ್ ನ್ಯೂಸ್
13-11-21 03:15 pm Mangaluru Correspondent ಕರಾವಳಿ
ಮಂಗಳೂರು, ನ.13: ಅವರಿಬ್ಬರೂ ಬರಿಗೈ ಮತ್ತು ಬರಿಗಾಲಲ್ಲಿ ದೆಹಲಿ ಎತ್ತರಕ್ಕೆ ಏರಿಬಂದ ಕರಾವಳಿಯ ಸಾಧಕರು. ಒಬ್ಬರು ವೃಕ್ಷವನ್ನೇ ತಾಯಿ ತಂದೆ ಎಂದು ಪೂಜಿಸಿ ಗಮನ ಸೆಳೆದ ಸಿದ್ಧಿ ಜನಾಂಗದ 82 ವರ್ಷದ ಅಜ್ಜಿ ತುಳಸಿ ಗೌಡ. ಇನ್ನೊಬ್ಬರು ಕಿತ್ತಳೆ ಮಾರುತ್ತಲೇ ಶಿಕ್ಷಣದ ಕನಸು ಕಂಡು ಅದನ್ನು ಸಾಧಿಸಲು ಶಾಲೆ ಕಟ್ಟಿದ ಹಾಜಬ್ಬರು. ನಮ್ಮ ನಡುವೆ ಇದ್ದುಕೊಂಡೇ ಆಗದ್ದನ್ನು ಸಾಧಿಸಿ ತೋರಿಸಿದ ಇವರಿಬ್ಬರೂ ಒಂದೆಡೆ ಸೇರಿದ್ದರು.
ಹಾಜಬ್ಬರ ಸಾಧನೆ ಬಗ್ಗೆ ಕೇಳಿ ತಿಳಿದಿದ್ದ ತುಳಸಿ ಅಜ್ಜಿಗೆ ಹಾಜಬ್ಬರ ಶಾಲೆ ನೋಡಬೇಕೆಂಬ ಆಸೆ ಇತ್ತು. ಪ್ರಶಸ್ತಿ ಪಡೆದು ದೆಹಲಿಯಿಂದ ಬರುತ್ತಿದ್ದಾಗಲೇ ಈ ಮಹದಾಸೆಯನ್ನು ತಮ್ಮ ಆಪ್ತರಲ್ಲಿ ಹೇಳಿಕೊಂಡಿದ್ದರು. ದೆಹಲಿಯಿಂದ ಬೆಂಗಳೂರಿಗೆ ಬಂದು ಅಲ್ಲಿ ವಿವಿಧ ಸಂಘಟನೆಗಳಿಂದ ಸನ್ಮಾನ ಸ್ವೀಕರಿಸಿದ ತುಳಸಿ ಗೌಡರನ್ನು ಅಲ್ಲಿಂದ ನೇರವಾಗಿ ತನ್ನ ಮನೆಗೆ ತೆರಳುವ ಬದಲು ಮಂಗಳೂರಿಗೆ ಕರೆತರಲಾಗಿತ್ತು. ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದವರು ಬೆಂಗಳೂರಿನಿಂದ ಮಂಗಳೂರಿಗೆ ವಿಮಾನದ ಟಿಕೆಟ್ ಮಾಡಿದ್ದರು. ಅದರಂತೆ, ತುಳಸಿ ಗೌಡ ನೇರವಾಗಿ ನಿನ್ನೆ ರಾತ್ರಿಯೇ ಮಂಗಳೂರಿಗೆ ಬಂದಿದ್ದು, ಇಂದು ಬೆಳಗ್ಗೆ 9.30ಕ್ಕೆ ಕೋಣಾಜೆ ಬಳಿಯ ಹರೇಕಳದ ಶಾಲೆಗೆ ಬಂದಿದ್ದರು.

ಹಾಜಬ್ಬರ ಶ್ರಮದಿಂದ ಎದ್ದುನಿಂತಿರುವ ಎಸ್ಸೆಸ್ಸೆಲ್ಸಿ ವರೆಗಿನ ಶಾಲೆ, ಅಲ್ಲಿನ ಮಕ್ಕಳನ್ನು ನೋಡಿದ ತುಳಸಿ ಗೌಡರ ಆನಂದಕ್ಕೆ ಪಾರವೇ ಇರಲಿಲ್ಲ. ತುಳಸಿ ಅಜ್ಜಿ ಅಂಕೋಲದಲ್ಲಿದ್ದುಕೊಂಡು ತನ್ನೂರಿನಲ್ಲಿ ಲಕ್ಷಾಂತರ ಸಸಿಗಳನ್ನು ನೆಟ್ಟು ಬೆಳೆಸಿ ವೃಕ್ಷಮಾತೆ ಎನಿಸಿಕೊಂಡಿದ್ದವರು. ಮರಗಳನ್ನು ತನ್ನ ಮಕ್ಕಳೆಂದೇ ಭಾವಿಸಿ, ನೀರೆರೆದು ಪೋಷಣೆ ಮಾಡಿದ್ದರು. ಹಾಜಬ್ಬ ತನ್ನೂರಿನ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗಬೇಕು, ಇಂಗ್ಲಿಷ್ ಕಲಿತು ಉತ್ತಮ ನಾಗರಿಕರಾಗಬೇಕು ಎಂಬ ಮಹದಾಸೆ ಇಟ್ಟುಕೊಂಡು ಶಾಲೆ ಕಟ್ಟುವ ಕನಸು ಕಂಡಿದ್ದರು. ಇಬ್ಬರ ದಾರಿ ಬೇರೆಯಾಗಿದ್ದರೂ, ಸಾಧಿಸಬೇಕೆಂಬ ಛಲ, ಸಂಕಲ್ಪ ಶಕ್ತಿ ಅವರನ್ನು ಎತ್ತರಕ್ಕೇರಿಸಿತ್ತು.

ತಮ್ಮ ಮನೆಗೆ ಬಂದ ತುಳಸಿ ಗೌಡ ಮತ್ತು ಅವರ ಸೊಸೆ, ಮೊಮ್ಮಕ್ಕಳನ್ನು ಕಂಡು ಆನಂದ ತುಂದಿಲರಾದ ಹಾಜಬ್ಬರು, ತುಳಸಿ ಗೌಡರ ಕಾಲಿಗೆ ಬಿದ್ದು ಮನೆ ಒಳಗೆ ಕರೆದುಕೊಂಡರು. ಕೈಮುಗಿಯುತ್ತಲೇ ಇತರರನ್ನೂ ಒಳಗೆ ಸ್ವಾಗತಿಸಿದರು. ಆನಂತರ, ತನ್ನ ಮನೆಯಲ್ಲೇ ಕುಳ್ಳಿರಿಸಿ ತುಳಸಿ ಅಜ್ಜಿಗೆ ಉಪಾಹಾರ ನೀಡಿ ಸತ್ಕರಿಸಿದರು. ಆಬಳಿಕ ಮನೆ ಸಮೀಪದಲ್ಲೇ ಇರುವ ಕಿತ್ತಳೆ ಬುಟ್ಟಿಯಲ್ಲಿ ಅರಳಿದ ಶಾಲೆಯ ಬಳಿಗೆ ಇಬ್ಬರು ಸಂತರು ನಡೆದುಕೊಂಡು ಹೊರಟರು. ಅತ್ತ ಶಾಲೆಯ ಮಕ್ಕಳು ಅಂಗಳದಲ್ಲಿ ನಿಂತು ಬ್ಯಾಂಡ್, ವಾದ್ಯದಲ್ಲಿ ಇಬ್ಬರು ಸಂತರನ್ನೂ ಆದರದಿಂದ ಬರಮಾಡಿಕೊಂಡರು.

ಸಣ್ಣ ಮಕ್ಕಳಿಂದ ಹಿಡಿದು ಹಿರಿ- ಕಿರಿಯ ಮಕ್ಕಳೆಲ್ಲ ಸೇರಿ ಪದ್ಮಶ್ರೀ ಪುರಸ್ಕೃತರಾಗಿ ಬಂದ ಹಾಜಬ್ಬ ಮತ್ತು ತುಳಸಿ ಅಜ್ಜಿಯನ್ನು ಕೈಹಿಡಿದು ಶಾಲೆಯತ್ತ ಕರೆದೊಯ್ದರು. ಹಳ್ಳಿ ಮಕ್ಕಳಿಗೆ ತಮ್ಮ ಅಜ್ಜ- ಅಜ್ಜಿಯೇ ಶಾಲೆಗೆ ಬಂದ ರೀತಿಯ ಸಡಗರ. ಬಳಿಕ ಶಾಲೆಯಲ್ಲಿ ತುಳಸಿ ಗೌಡರನ್ನು ಹಾಜಬ್ಬರು ಸನ್ಮಾನಿಸಿದ್ದಾರೆ. ಈ ವೇಳೆ ಮಾತನಾಡಿದ ಹಾಜಬ್ಬ, ತುಳಸಿ ಅಮ್ಮನವರು ಈ ಬಡವನ ಮನೆಗೆ ಭೇಟಿ ನೀಡಿದ್ದು ನನ್ನ ಪುಣ್ಯ. ಮೊನ್ನೆ ದೆಹಲಿ ವಿಮಾನ ನಿಲ್ದಾಣದಲ್ಲಿ ಅವರಲ್ಲಿ ಮಾತನಾಡಲು ಸಾಧ್ಯವಾಗಿರಲಿಲ್ಲ. ಇಂದು ನನ್ನ ಮನೆಗೇ ಮಹಾತಾಯಿ ಬಂದಿರುವುದು ನನ್ನ ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
ತುಳಸಿ ಗೌಡ ಮಾತನಾಡಿ, ಹಾಜಬ್ಬರನ್ನು ಮಾತನಾಡಿಸಲು ಸಾಧ್ಯವಾಗಿಲ್ಲವೆಂಬ ಕೊರಗಿತ್ತು. ಹಾಗಾಗಿ ಅವರನ್ನು ಹುಡುಕಿಕೊಂಡು ಶಾಲೆ ನೋಡಬೇಕೆಂದು ಅವರಲ್ಲಿಗೇ ಬಂದಿದ್ದೇನೆ. ಹಾಜಬ್ಬರು ಇನ್ನಷ್ಟು ಸಮಾಜಕ್ಕೆ ಕೊಡುಗೆ ನೀಡಬೇಕು. ನಿಮ್ಮೆಲ್ಲರ ಸಹಕಾರ ಅವರ ಜೊತೆಗಿರಲಿ. ಹಾಜಬ್ಬರ ಕಾಲೇಜು ಕನಸು ಈಡೇರಿಸಲು ನನ್ನಿಂದಾಗುವ ಕಿಂಚಿತ್ ಸಹಾಯವನ್ನು ನೀಡುತ್ತೇನೆ ಎಂದರು.

ತುಳಸಿ ಗೌಡರಿಗೆ ಪದ್ಮಶ್ರೀ ಘೋಷಣೆಯಾಗಿದ್ದರೂ, ದೆಹಲಿಗೆ ಹೋಗಲು ಹಣ ಇರಲಿಲ್ಲ. ಈ ಬಗ್ಗೆ ಮಾಹಿತಿ ಪಡೆದ ಶಿವಮೊಗ್ಗದ ಆದಿಚುಂಚನಗಿರಿ ಶಾಖಾ ಮಠದ ಪ್ರಸನ್ನನಾಥ ಸ್ವಾಮೀಜಿ, ತಮ್ಮ ಭಕ್ತರಲ್ಲಿ ಕೈಲಾದ ಸಹಾಯ ಮಾಡುವಂತೆ ಕೋರಿದ್ದರು. ಅದರಂತೆ, ಎರಡು ಲಕ್ಷಕ್ಕೂ ಹೆಚ್ಚು ಹಣ ಒಟ್ಟುಗೂಡಿದ್ದು ತುಳಸಿ ಅಜ್ಜಿಗೆ ನೀಡಲಾಗಿತ್ತು. ಅದರಲ್ಲಿ ಉಳಿದಿದ್ದ ಹಣದಲ್ಲಿ ಒಂದಷ್ಟು ಮೊತ್ತವನ್ನು ತುಳಸಿ ಗೌಡ ಹಾಜಬ್ಬರ ಶಾಲೆಗೆ ದೇಣಿಗೆ ನೀಡಿದ್ದಾರೆ.
ಇನ್ಯಾರೋ ನೀಡಿದ್ದ ದುಡ್ಡನ್ನು ತಾನೇ ಇಟ್ಟುಕೊಳ್ಳದೆ ಇನ್ನೊಬ್ಬರ ಸಮಾಜ ಸೇವೆಗೆ ನೀಡಿದ ತುಳಸಿ ಗೌಡರ ಔದಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲದೆ, ತನ್ನಂತೆ ಎಲೆಮರೆಯ ಕಾಯಿಯಾಗೇ ಸಾಧನೆ ಮೆರೆದ ಹಾಜಬ್ಬರನ್ನು ಕಾಣಲು ತನ್ನೂರಿಗೆ ತೆರಳುವ ಮೊದಲೇ ಬಂದು ಹಾಜಬ್ಬರ ಜೊತೆ ಕಳೆತಿದ್ದು ಮತ್ತೊಂದು ವಿಶೇಷ. ಹಾಜಬ್ಬರ ಮನೆಯಲ್ಲಿ ಮಾತುಕತೆಯ ಬಳಿಕ ಶಾಲೆಗೆ ತೆರಳಿ ಅಲ್ಲಿನ ಮಕ್ಕಳೊಂದಿಗೆ ಬೆರೆತರು. ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿ, ಮರ-ಗಿಡಗಳ ಬಗ್ಗೆ ಜಾಗೃತಿ ಮೂಡಿಸುವ ಮಾತನ್ನಾಡಿದ ತುಳಸಿ ಗೌಡ ಆನಂತರ ಅಲ್ಲಿಂದಲೇ ತನ್ನೂರು ಅಂಕೋಲಾಕ್ಕೆ ಪ್ರಯಾಣ ಬೆಳೆಸಿದರು.
Padma Shri awardee Tulsi Gowda Meets Harekala Hajabba Orange seller in Mangalore.
07-09-26 01:33 pm
HK News Staffer
ಜೆನ್ ಜೀಗಳಿಗೆ ಕಾಂಗ್ರೆಸ್ ಸಿದ್ಧಾಂತ, ಜಾತ್ಯತೀತ ಭಾವ...
05-09-26 04:53 pm
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
07-09-26 09:57 pm
HK News Staffer
ಬಿಜೆಪಿಯವರೇ ಭ್ರಷ್ಟಾಚಾರದಲ್ಲಿ ಕಂಠಪೂರ್ತಿ ಮುಳುಗಿದ್...
07-09-26 01:22 pm
Ujre Wild Elephant: ಉಜಿರೆ ಎಸ್ ಡಿಎಂ ಕಾಲೇಜು ಬಳಿ...
06-09-26 08:09 pm
Ujre Wild Elephant: ಉಜಿರೆ ಎಸ್ಡಿಎಂ ಎಂಜಿನಿಯರಿಂ...
06-09-26 01:14 pm
ಸುಬ್ರಹ್ಮಣ್ಯ ಬಳಿ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್...
06-09-26 12:47 pm
07-09-26 08:56 pm
HK News Staffer
ದೆಹಲಿಯಲ್ಲಿ ಕಟ್ಟಡ ಕುಸಿತಕ್ಕೆ ಏಳು ಬಲಿ ; ನೆಲಮಹಡಿಯ...
07-09-26 07:44 pm
ಮಂಜೇಶ್ವರ ; ಹೊಸಂಗಡಿ ಬಳಿ ಕೂಲಿ ಕಾರ್ಮಿಕನ ಹತ್ಯೆಗೈದ...
07-09-26 04:09 pm
ಹೂ ಕಟಾವಿಗೆ ಹೊರಟಿದ್ದ ಕೂಲಿ ಕಾರ್ಮಿಕರ ದುರಂತ ಅಂತ್ಯ...
07-09-26 03:42 pm
ತಿರುಪತಿ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಕುಟುಂಬ...
07-09-26 02:06 pm