ವೀರರಾಣಿ ಅಬ್ಬಕ್ಕ ಉತ್ಸವ ರಜತ ಸಂಭ್ರಮ ; ಅಬ್ಬಕ್ಕ ಪ್ರಶಸ್ತಿಗೆ ಚಂದ್ರಕಲಾ ನಂದಾವರ, ಅಬ್ಬಕ್ಕ ಪುರಸ್ಕಾರಕ್ಕೆ ಕೆ.ಎ.ರೋಹಿಣಿ ಆಯ್ಕೆ 

14-12-21 05:26 pm       HK Desk news   ಕರಾವಳಿ

ಡಿಸೆಂಬರ್ 21 ರಂದು ಉಳ್ಳಾಲದಲ್ಲಿ ವೀರರಾಣಿ ಅಬ್ಬಕ್ಕ ಉತ್ಸವ - 2021 ರಜತ ಸಂಭ್ರಮ ನಡೆಯಲಿದ್ದು, ವೀರರಾಣಿ ಅಬ್ಬಕ್ಕ ಪ್ರಶಸ್ತಿಗೆ ಸಾಹಿತಿ ಚಂದ್ರಕಲಾ ನಂದಾವರ, ವೀರರಾಣಿ ಅಬ್ಬಕ್ಕ ಪುರಸ್ಕಾರಕ್ಕೆ ಕೆ.ಎ.ರೋಹಿಣಿ ಆಯ್ಕೆಯಾಗಿದ್ದಾರೆ. 

Photo credits : Headline Karnataka

ಉಳ್ಳಾಲ, ಡಿ.14 : ಡಿಸೆಂಬರ್ 21 ರಂದು ಉಳ್ಳಾಲದಲ್ಲಿ ವೀರರಾಣಿ ಅಬ್ಬಕ್ಕ ಉತ್ಸವ - 2021 ರಜತ ಸಂಭ್ರಮ ನಡೆಯಲಿದ್ದು, ವೀರರಾಣಿ ಅಬ್ಬಕ್ಕ ಪ್ರಶಸ್ತಿಗೆ ಸಾಹಿತಿ ಚಂದ್ರಕಲಾ ನಂದಾವರ, ವೀರರಾಣಿ ಅಬ್ಬಕ್ಕ ಪುರಸ್ಕಾರಕ್ಕೆ ಕೆ.ಎ.ರೋಹಿಣಿ ಆಯ್ಕೆಯಾಗಿದ್ದಾರೆ. 

ಕುತ್ತಾರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಸ್ವಾಗತಾಧ್ಯಕ್ಷ ಕೆ.ಜಯರಾಮ ಶೆಟ್ಟಿ ಮಾತನಾಡಿ ಕಳೆದ ಎರಡು ವರ್ಷಗಳಿಂದ ಕೊರೊನಾದಿಂದಾಗಿ ಉತ್ಸವ ಆಯೋಜನೆ ಸಾಧ್ಯವಾಗಿರಲಿಲ್ಲ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಉಳ್ಳಾಲ ನಗರಸಭೆಯ ಸಹಯೋಗದೊಂದಿಗೆ ಇದೇ ಡಿಸೆಂಬರ್ 21 ರಂದು ಉಳ್ಳಾಲ ನಗರಸಭೆ ಆವರಣದಲ್ಲಿರುವ ಮಹಾತ್ಮ ಗಾಂಧಿ ರಂಗಮಂದಿರದಲ್ಲಿ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ "ವೀರರಾಣಿ ಅಬ್ಬಕ್ಕ ಉತ್ಸವ 2021" ರಜತ ಸಂಭ್ರಮವನ್ನ ಆಯೋಜಿಸಲಾಗಿದೆ. ಪ್ರಶಸ್ತಿಗೆ ಬಹಳಷ್ಟು ಅರ್ಜಿ ಸಲ್ಲಿಕೆಯಾಗಿದ್ದು, ಅಬ್ಬಕ್ಕ ಉತ್ಸವ ಸಮಿತಿಯ ಹಿರಿಯ ಸಲಹೆಗಾರ ಜನಪದ ವಿದ್ವಾಂಸ ಪ್ರೊ. ಅಮೃತ ಸೋಮೇಶ್ವರ ಅವರ ಸಲಹೆ ಮೇರೆಗೆ ಇಬ್ಬರು ಸಾಧಕರನ್ನು ಆಯ್ಕೆ ಮಾಡಲಾಗಿದೆ. ಇದು ರಾಷ್ಟ್ರ ಮಟ್ಟದಲ್ಲಿ ಅಬ್ಬಕ್ಕಳ ಹೆಸರನ್ನು ಪಸರಿಸಲು ಕಾರಣವಾಗುತ್ತದೆ ಎಂದರು. 

ಪ್ರತಿಷ್ಠಿತ "ವೀರರಾಣಿ ಅಬ್ಬಕ್ಕ ಪ್ರಶಸ್ತಿ" ಗೆ ಮಂಗಳೂರು ಗಣಪತಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಸಾಹಿತಿ ಚಂದ್ರಕಲಾ ನಂದಾವರ, "ವೀರರಾಣಿ ಅಬ್ಬಕ್ಕ ಪುರಸ್ಕಾರ"ಕ್ಕೆ ಮಂಗಳೂರು ಅಶೋಕ ನಗರದ ನಿವಾಸಿ ನಿವೃತ್ತ ಶಿಕ್ಷಕಿ ಹಿರಿಯ ಚಿಂತಕಿ ಕೆ.ಎ.ರೋಹಿಣಿ ಅವರನ್ನು ಆಯ್ಕೆ ಮಾಡಲಾಗಿದ್ದು ಡಿ.21 ರಂದು ನಡೆಯಲಿರುವ ಅಬ್ಬಕ್ಕ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದರು. 

ಉತ್ಸವ ಸಮಿತಿ ಅಧ್ಯಕ್ಷ ದಿನಕರ ಉಳ್ಳಾಲ್ ಮಾತನಾಡಿ ನಮ್ಮ ಹಲವು ವರ್ಷಗಳ ಬೇಡಿಕೆಯಾಗಿದ್ದ ಅಬ್ಬಕ್ಕ ಭವನ ನಿರ್ಮಾಣಕ್ಕೆ ಈಗಾಗಲೇ ಐದು ಕೋಟಿ ರೂ. ಗಳನ್ನು ಸರಕಾರ ಮಂಜೂರು ಮಾಡಿದ್ದರೂ ಎರಡು ವರ್ಷ ಕಳೆದ ಬಳಿಕ ನಿರ್ಮಿತಿ ಕೇಂದ್ರ, ನಿರ್ಮಾಣ ವೆಚ್ಚ ಹೆಚ್ಚಾಗುತ್ತದೆ ಎಂಬ ಕಾರಣವೊಡ್ಡಿ ಹಿಂದೆ ಸರಿದಿದೆ. ಇದೀಗ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ತಾಂತ್ರಿಕ ತೊಂದರೆಯಿಂದ ಭವನ ನಿರ್ಮಾಣ ಕಾಮಗಾರಿ ಸ್ವಲ್ಪ ವಿಳಂಬವಾಗುತ್ತಿದೆ. ಮುಂದಿನ ತಿಂಗಳ ಅಂತ್ಯದಲ್ಲಿ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ ಎಂದರು. 

ಹಂಪಿ ಸೇರಿದಂತೆ ಬಹಳಷ್ಟು ರಾಜ್ಯ ಮಟ್ಟದ ಉತ್ಸವಗಳು ಕೊರೊನಾ ಕಾರಣದಿಂದ ಎರಡು ವರ್ಷ ನಡೆದಿಲ್ಲ. ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ನಡೆಸಿಕೊಂಡು ಬಂದ ಉತ್ಸವಕ್ಕೆ ಸರಕಾರ ಅನುದಾನ ಕೊಡುತ್ತಿರುವಾಗ ಉತ್ಸವ ವಿಜೃಂಭಣೆಯಿಂದ ನಡೆಯುತ್ತಿತ್ತು. ಆದರೆ ಜಿಲ್ಲಾಡಳಿತದ ವತಿಯಿಂದ ನಡೆದ ಅಬ್ಬಕ್ಕ ಉತ್ಸವ ಯಾವ ರೀತಿ ಇತ್ತು ಎಂಬುದು ಅಲ್ಲಿ ಸೇರಿದ್ದ ಬೆರಳೆಣಿಕೆಯ ಜನರಿಗೆ ಅನುಭವಕ್ಕೆ ಬಂದಿದೆ. ಹಾಗಾಗಿ ಉಳ್ಳಾಲ ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿಗೆ ಉತ್ಸವ ಆಚರಣೆಗೆ ಸರಕಾರ ದೊಡ್ಡ ಅನುದಾನ ನೀಡಿದರೆ ಉತ್ಸವ ಕೂಡಾ ವಿಜೃಂಭಣೆಯಿಂದ ನಡೆಸಲು ಸಹಕರಿಸಿದಂತಾಗುತ್ತದೆ ಎಂದರು.
ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಪ್ರದಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ, ಗೌರವ ಉಪಾಧ್ಯಕ್ಷರಾದ ಸದಾನಂದ ಬಂಗೇರ, ಕೋಶಾಧಿಕಾರಿ ಆನಂದ ಕೆ.ಅಸೈಗೋಳಿ, ಉಪಾಧ್ಯಕ್ಷರಾದ ಯು.ಪಿ ಆಲಿಯಬ್ಬ, ದೇವಕಿ ಆರ್.ಉಳ್ಳಾಲ್, ಸಂಚಾಲಕರಾದ ಅಬ್ದುಲ್ ಅಜೀಜ್ ಹಕ್, ಕಾರ್ಯದರ್ಶಿಗಳಾದ ಶಶಿಕಾಂತಿ ಉಳ್ಳಾಲ್, ಸುಷ್ಮಾ ಜನಾರ್ಧನ್ ಮೊದಲಾದವರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Mangalore Chandrakala and Rohini to receive Abbakka award 2021 which will be held on December 21st in Ullal Town Municipal compound.