ಬೀಚ್ ಪ್ರವೇಶಕ್ಕೂ ನಿರ್ಬಂಧ, ಪಾರ್ಟಿನೂ ಮಾಡಂಗಿಲ್ಲ ; ವರ್ಷದ ಕೊನೆಗೆ ಖಾಲಿ ಹೊಡೆದ ಸಮುದ್ರ ತೀರ, ಪೊಲೀಸ್ ಹದ್ದಿನ ಕಣ್ಣು !

31-12-21 03:01 pm       Mangalore Correspondent   ಕರಾವಳಿ

ಹೊಸ ವರ್ಷಕ್ಕೆ ಬೆಂಗಳೂರು, ಮೈಸೂರಿನ ಜನರು ಕರಾವಳಿಯ ಸಮುದ್ರ ತೀರಗಳಿಗೆ ಬರುವುದು ಸಾಮಾನ್ಯ. ಪಣಂಬೂರು, ತಣ್ಣೀರುಬಾವಿ, ಮಲ್ಪೆ ಸೇರಿದಂತೆ ಮಂಗಳೂರು, ಉಡುಪಿಯ ಬೀಚ್ ಗಳಲ್ಲಿ ಪ್ರವಾಸಿಗರು ಗುಂಪು ಕಟ್ಟಿಕೊಂಡು ಬರುತ್ತಾರೆ. ಬೀಚ್ ನಲ್ಲೇ ಗಡದ್ದು ಪಾರ್ಟಿಯನ್ನೂ ಮಾಡುತ್ತಿದ್ದರು. ಆದರೆ, ಈ ಬಾರಿ ಇವೆಲ್ಲದಕ್ಕೂ ಪೊಲೀಸರು ಬ್ರೇಕ್ ಹಾಕಿದ್ದಾರೆ.

ಮಂಗಳೂರು, ಡಿ.31 : ಹೊಸ ವರ್ಷಕ್ಕೆ ಬೆಂಗಳೂರು, ಮೈಸೂರಿನ ಜನರು ಕರಾವಳಿಯ ಸಮುದ್ರ ತೀರಗಳಿಗೆ ಬರುವುದು ಸಾಮಾನ್ಯ. ಪಣಂಬೂರು, ತಣ್ಣೀರುಬಾವಿ, ಮಲ್ಪೆ ಸೇರಿದಂತೆ ಮಂಗಳೂರು, ಉಡುಪಿಯ ಬೀಚ್ ಗಳಲ್ಲಿ ಪ್ರವಾಸಿಗರು ಗುಂಪು ಕಟ್ಟಿಕೊಂಡು ಬರುತ್ತಾರೆ. ಬೀಚ್ ನಲ್ಲೇ ಗಡದ್ದು ಪಾರ್ಟಿಯನ್ನೂ ಮಾಡುತ್ತಿದ್ದರು. ಆದರೆ, ಈ ಬಾರಿ ಇವೆಲ್ಲದಕ್ಕೂ ಪೊಲೀಸರು ಬ್ರೇಕ್ ಹಾಕಿದ್ದಾರೆ.

ಸಂಜೆ ಏಳು ಗಂಟೆಯಿಂದ ಸಮುದ್ರ ತೀರಗಳಿಗೆ ಹೋಗುವುದನ್ನು ನಿಷೇಧ ಮಾಡಲಾಗಿದೆ. ಮಂಗಳೂರು ಆಸುಪಾಸಿನ ಪಣಂಬೂರು, ತಣ್ಣೀರುಬಾವಿ, ಉಳ್ಳಾಲ ಸೇರಿದಂತೆ ಎಲ್ಲ ಸಮುದ್ರ ತೀರಗಳಿಗೂ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಆದೇಶ ಮಾಡಿದ್ದಾರೆ. ಡಿ.31ರ ಸಂಜೆ ಏಳು ಗಂಟೆಯಿಂದ ಜನವರಿ 1ರ ಬೆಳಗ್ಗೆ 5ರ ವರೆಗೆ ಸಾರ್ವಜನಿಕರು ಬೀಚ್ ಪ್ರವೇಶ ಮಾಡುವುದನ್ನು ನಿರ್ಬಂಧಿಸಿದ್ದಾರೆ.

ಇದೇ ವೇಳೆ, ಮಂಗಳೂರಿನಲ್ಲಿ ಹೊಸ ವರ್ಷಕ್ಕೆ ಇನ್ನಿತರ ಪಾರ್ಟಿ ನಡೆಸುವುದಕ್ಕೂ ನಿರ್ಬಂಧ ಹಾಕಲಾಗಿದೆ. ಹೊಸ ವರ್ಷದ ನೆಪದಲ್ಲಿ ಡಿಜೆ ಹಾಕಿ ಕುಣಿಯುವುದು, ಸಾರ್ವಜನಿಕವಾಗಿ ಪಾರ್ಟಿ ನಡೆಸುವುದಕ್ಕೆ ನಿರ್ಬಂಧ ಇದೆ. ಪಬ್, ಬಾರ್ ಗಳಲ್ಲಿ ಕೂಡ ಜನರಿಗೆ ರಾತ್ರಿ ಹತ್ತು ಗಂಟೆ ವರೆಗೆ ಮಾತ್ರ ಅವಕಾಶ ಇರಲಿದೆ. ಕೊರೊನಾ ನಿರ್ಬಂಧ ಕಾರಣ 50 ಶೇಕಡಾ ಗ್ರಾಹಕರಿಗೆ ಮಾತ್ರ ಅವಕಾಶ ನೀಡುವಂತೆ ಸರಕಾರ ಸೂಚನೆ ನೀಡಿದೆ.

ಈ ಹಿನ್ನೆಲೆಯಲ್ಲಿ ಸಂಜೆಯಾಗುತ್ತಲೇ ಆಯಾ ಭಾಗದ ಪೊಲೀಸರು ಪೆಟ್ರೋಲಿಂಗ್ ನಡೆಸಲು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಸೂಚನೆ ನೀಡಿದ್ದಾರೆ. ಅದರಂತೆ, ಸಂಜೆ ಆರೂವರೆ ಗಂಟೆ ವೇಳೆಗೆ ಬೀಚ್ ನಲ್ಲಿ ಜನರನ್ನು ಖಾಲಿ ಮಾಡಲು ಪೊಲೀಸರು ಮುಂದಾಗಲಿದ್ದಾರೆ. ಬೆಂಗ್ರೆ, ಪಣಂಬೂರು, ತಣ್ಣೀರುಬಾವಿಯಲ್ಲಿ ಪಣಂಬೂರು ಪೊಲೀಸರು, ಸಸಿಹಿತ್ಲು, ಮೀನಕಳಿಯ, ಚಿತ್ರಾಪುರ ಬೀಚ್ ಗಳಲ್ಲಿ ಸುರತ್ಕಲ್ ಪೊಲೀಸರು ಗಸ್ತು ತಿರುಗಲಿದ್ದಾರೆ. ಉಳ್ಳಾಲದ ಸೋಮೇಶ್ವರ, ಸಮ್ಮರ್ ಸ್ಯಾಂಡ್, ಕೋಟೆಪುರ ಬೀಚ್ ಗಳಲ್ಲಿ ಅಲ್ಲಿನ ಪೊಲೀಸರು ಜನರನ್ನು ಖಾಲಿ ಮಾಡಿಸಲಿದ್ದಾರೆ.

ಹೊಸ ವರ್ಷಕ್ಕೆ ಬ್ರೇಕ್ ಹಾಕಿದ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಿದ್ದು, ಹಗಲಿನಲ್ಲೂ ಬೀಚ್ ಗಳಲ್ಲಿ ಜನರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಕೆಲವೊಂದಷ್ಟು ಕಾಲೇಜು ವಿದ್ಯಾರ್ಥಿಗಳು ಮಾತ್ರ ಬೀಚ್ ನಲ್ಲಿ ಕಂಡುಬಂದಿದ್ದಾರೆ.

Beach entry restricted in Mangalore after 7 due to new year curfew in Karnataka. Police have been deployed all over the city as well as Beaches to avoid gathering and parties in Beaches.