ಹಸುಗಳ ಸಂತತಿ ಉಳಿಸಲು ಪಣ ; ಪುಣ್ಯಕೋಟಿ ನಗರದ ಅಮೃತಧಾರಾ ಗೋಶಾಲೆಯಲ್ಲಿ ಗೋಸೇವಾ ಮಾಸಾಚರಣೆ 

15-01-22 06:14 pm       Mangalore Correspondent   ಕರಾವಳಿ

ಹಸುಗಳ ಸಂತತಿಯನ್ನು ಉಳಿಸುವುದೇ ಇಂದು ದೊಡ್ಡ ಸವಾಲಾಗಿ ಪರಿಣಮಿಸಿದ್ದು ಗೋರಕ್ಷಣೆಗೆ ಜನಸಾಮಾನ್ಯರು ಕೂಡ ತಮ್ಮ, ತಮ್ಮ ಕೊಡುಗೆ ಸೇವೆಯನ್ನ ನೀಡುವ ನಿಟ್ಟಿನಲ್ಲಿ ಕೈರಂಗಳ ಪುಣ್ಯಕೋಟಿ ನಗರದ ಅಮೃತಧಾರ ಗೋಶಾಲೆಯಲ್ಲಿ ಇಂದಿನಿಂದ ಒಂದು ತಿಂಗಳ ಕಾಲ ಗೋಸೇವಾ ಮಾಸಾಚರಣೆಯನ್ನ ಹಮ್ಮಿಕೊಳ್ಳಲಾಗಿದೆ. 

Photo credits : Headline Karnataka

ಉಳ್ಳಾಲ, ಜ.15 : ಹಸುಗಳ ಸಂತತಿಯನ್ನು ಉಳಿಸುವುದೇ ಇಂದು ದೊಡ್ಡ ಸವಾಲಾಗಿ ಪರಿಣಮಿಸಿದ್ದು ಗೋರಕ್ಷಣೆಗೆ ಜನಸಾಮಾನ್ಯರು ಕೂಡ ತಮ್ಮ, ತಮ್ಮ ಕೊಡುಗೆ ಸೇವೆಯನ್ನ ನೀಡುವ ನಿಟ್ಟಿನಲ್ಲಿ ಕೈರಂಗಳ ಪುಣ್ಯಕೋಟಿ ನಗರದ ಅಮೃತಧಾರ ಗೋಶಾಲೆಯಲ್ಲಿ ಇಂದಿನಿಂದ ಒಂದು ತಿಂಗಳ ಕಾಲ ಗೋಸೇವಾ ಮಾಸಾಚರಣೆಯನ್ನ ಹಮ್ಮಿಕೊಳ್ಳಲಾಗಿದೆ. 

ಪುಣ್ಯಕೋಟಿ ನಗರದ ಅಮೃತಧಾರಾ ಗೋಶಾಲೆಯಲ್ಲಿ ಮಕರ ಸಂಕ್ರಮಣದಂದು ಸಂಜೆ ಗೋಸೇವಾ ಮಾಸಾಚರಣೆಯನ್ನು ಶ್ರೀ ಕ್ಷೇತ್ರ ಕಣಂತೂರಿನ ಆಡಳಿತ ಮೊಕ್ತೇಸರ ತಿಮ್ಮಪ್ಪ ಕೊಂಡೆ ಯಾನೆ ಮಂಜು ಭಂಡಾರಿ ಅವರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ಜನ್ಮ‌ ಜನ್ಮಾಂತರದಲ್ಲಿ ಮಾಡಿರುವ ಪಂಚ ಮಹಾಪಾತಕ ನಿವಾರಿಸಲು ಗೋಸೇವೆಯಿಂದ ಮಾತ್ರ ಸಾಧ್ಯವಿದ್ದು, ಸಾರ್ವಜನಿಕರು ಗೋಸೇವೆ ಮಾಡುವ ನಿಟ್ಟಿನಲ್ಲಿ ಗೋಸೇವಾ ಮಾಸಾಚರಣೆ ಹಮ್ಮಿ ಕೊಂಡಿರುವುದು ಪುಣ್ಯದ ಕಾರ್ಯ ಎಂದರು. 

ಕೈರಂಗಳ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಮಹೇಶ್ ಚೌಟ ಮಾತನಾಡಿ ನಲ್ವತ್ತು ವರ್ಷಗಳ ಹಿಂದೆ ಗುಡ್ಡಗಳಲ್ಲಿ ಹಸುಗಳು ಮೇಯುತ್ತಿರುವ ದೃಶ್ಯಗಳು ಕಾಣುತ್ತಿತ್ತು. ಆದರೆ ಇವತ್ತು ಹಟ್ಟಿಗಳಲ್ಲೇ ಹಸುಗಳು ಇಲ್ಲದ ಪರಿಸ್ಥಿತಿ ಬಂದೊದಗಿದೆ. ಹಸುಗಳ ಸಂತತಿಯನ್ನ ಉಳಿಸುವುದೇ ಇಂದು ದೊಡ್ಡ ಸವಾಲಾಗಿದೆ. ಹಸುಗಳನ್ನ ಸಾಕುವುದು ಕಷ್ಟ ಸಾಧ್ಯ ನಿಜ, ಆದರೆ ಹಸುಗಳಿದ್ದಲ್ಲಿ ಮನೋ ನೆಮ್ಮದಿ ಖಂಡಿತ ನೆಲೆಸಿರುತ್ತದೆ ಎಂಬುದಕ್ಕೆ ನಾನೇ ಸಾಕ್ಷಿ ಎಂದರು. 

ಅಮೃತಧಾರಾ ಗೋಶಾಲೆ ಸಂಚಾಲಕ ಟಿ.ಜಿ. ರಾಜಾರಾಮ್ ಭಟ್ ಮಾತನಾಡಿ ಗೋ ಸಂತತಿ ಇಂದು ಅಳಿವಿನಂಚಿನಲ್ಲಿದ್ದು ಅದನ್ನ ಉಳಿಸೋದು ನಮ್ಮೆಲ್ಲರ ಕರ್ತವ್ಯವಾಗಿದೆ. ಜ. 14ರಿಂದ ಫೆ.12ರ ತನಕ  ನಡೆಯಲಿರುವ ಗೋಸೇವಾ ಮಾಸಾಚರಣೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಇಡೀ ದಿವಸ ಗೋವಿನ ಸೇವೆ ಮಾಡಲು ಅವಕಾಶ ಕಲ್ಪಿಸಿ ಕೊಡಲಾಗಿದೆ ಎಂದರು. 

ಹವ್ಯಕ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್, ಬೆಂಗಳೂರಿನ ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ.ನ ಚೇರ್ ಮೆನ್ ಸಂತೋಷ್ ಕುಮಾರ್ ರೈ ಬೋಳಿಯಾರ್, ಹವ್ಯಕ ಸಮಾಜದ ಮುಡಿಪು ವಲಯ ಅಧ್ಯಕ್ಷ ಪೆರಡೆ ತಿರುಮಲೇಶ್ವರ ಭಟ್, ಹವ್ಯಕ ಸಮಾಜ ಮುಖಂಡ ಕೊಣಾಜೆ ಶಂಕರ್ ಭಟ್ , ಬಿಜೆಪಿ ಮಂಗಳೂರು ಮಂಡಲ ಪ್ರಧಾನ‌ ಕಾರ್ಯದರ್ಶಿ ನವೀನ್ ಪಾದಲ್ಪಾಡಿ, ಹಿಂದು ಜಾಗರಣ ವೇದಿಕೆಯ ಪ್ರಮುಖ ಹರೀಶ್ ಕನ್ನಿಗುಳಿ, ಅಮ್ಮೆಂಬಳ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ಜಯರಾಮ‌ ಶೆಟ್ಟಿ ಹಾಗೂ ಮುಡಿಪು ಲಯನ್ಸ್ ಕ್ಲಬ್ ಅಧ್ಯಕ್ಷ ರವಿ ಉಪಸ್ಥಿತರಿದ್ದರು.

Ullal Pooja held at Amrutadara Go Ashram. The Ashram also intends to increase the family of cows.