ಮಾಜಿ ಸಾರಿಗೆ ಅಧಿಕಾರಿ ಮನೆಯಲ್ಲಿ ಕುಬೇರನ ಖಜಾನೆ ! ಗೋಡೆಯೊಳಗಿನ ರಹಸ್ಯ ಲಾಕರ್‌ಗಳಲ್ಲಿ 13 ಕೆಜಿ ಬಂಗಾರ, 1.62 ಕೋಟಿ ಹಣ ಪತ್ತೆ, ಬೆಚ್ಚಿಬಿದ್ದ ಭ್ರಷ್ಟಾಚಾರ ನಿಗ್ರಹ ಪಡೆ

10-07-26 10:14 pm       HK News Staffer   ಕ್ರೈಂ

ಉತ್ತರ ಪ್ರದೇಶದ ಭ್ರಷ್ಟಾಚಾರ ನಿಗ್ರಹ ದಳ ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ ಮಾಜಿ RTO ಅಧಿಕಾರಿ ಲಲಿತ್ ಕುಮಾರ್ ನಿವಾಸದಲ್ಲಿ ಬರೋಬ್ಬರಿ 13 ಕೆಜಿ ಚಿನ್ನ ಹಾಗೂ ₹1.62 ಕೋಟಿ ನಗದು ಪತ್ತೆಯಾಗಿದೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ನಡೆದ ದಾಳಿಯಲ್ಲಿ ಅಧಿಕಾರಿಗಳು ಗೋಡೆಗಳೊಳಗೆ ನಿರ್ಮಿಸಲಾಗಿದ್ದ ರಹಸ್ಯ ಲಾಕರ್‌ಗಳನ್ನು ಪತ್ತೆಹಚ್ಚಿದ್ದು, ಪ್ರಕರಣ ಸಂಚಲನಕ್ಕೆ ಕಾರಣವಾಗಿದೆ.

ಲಕ್ನೋ, ಜು. 10: ಉತ್ತರ ಪ್ರದೇಶದ ಭ್ರಷ್ಟಾಚಾರ ನಿಗ್ರಹ ದಳ ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ ಮಾಜಿ RTO ಅಧಿಕಾರಿ ಲಲಿತ್ ಕುಮಾರ್ ನಿವಾಸದಲ್ಲಿ ಬರೋಬ್ಬರಿ 13 ಕೆಜಿ ಚಿನ್ನ ಹಾಗೂ ₹1.62 ಕೋಟಿ ನಗದು ಪತ್ತೆಯಾಗಿದೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ನಡೆದ ದಾಳಿಯಲ್ಲಿ ಅಧಿಕಾರಿಗಳು ಗೋಡೆಗಳೊಳಗೆ ನಿರ್ಮಿಸಲಾಗಿದ್ದ ರಹಸ್ಯ ಲಾಕರ್‌ಗಳನ್ನು ಪತ್ತೆಹಚ್ಚಿದ್ದು, ಪ್ರಕರಣ ಸಂಚಲನಕ್ಕೆ ಕಾರಣವಾಗಿದೆ.

ಅಕ್ರಮ ಆಸ್ತಿ ಗಳಿಕೆ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ನ್ಯಾಯಾಲಯದ ವಾರಂಟ್ ಪಡೆದು ವಿಜಿಲೆನ್ಸ್ ಅಧಿಕಾರಿಗಳು ಲಲಿತ್ ಕುಮಾರ್ ಅವರಿಗೆ ಸೇರಿದ ವಿವಿಧ ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧ ನಡೆಸಿದರು. ಮನೆಯ ಪ್ರತಿಯೊಂದು ಕೊಠಡಿ, ಫಾಲ್ಸ್ ಸೀಲಿಂಗ್, ಹಾಸಿಗೆ ಹಾಗೂ ಪೀಠೋಪಕರಣಗಳನ್ನು ಪರಿಶೀಲಿಸಿದ ವೇಳೆ ಗೋಡೆಗಳೊಳಗೆ ಅಡಗಿಸಲಾಗಿದ್ದ ರಹಸ್ಯ ಲಾಕರ್‌ಗಳು ಪತ್ತೆಯಾಗಿವೆ. ಈ ಲಾಕರ್‌ಗಳ ಬಗ್ಗೆ ಕುಟುಂಬ ಸದಸ್ಯರಿಗೂ ಮಾಹಿತಿ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿಜಿಟಲ್ ಲಾಕರ್ ತೆರೆಯಲು ಎರಡು ಗಂಟೆ ನಾಟಕ;

ಶೋಧದ ವೇಳೆ ಹೈಟೆಕ್ ಡಿಜಿಟಲ್ ಲಾಕರ್‌ವೊಂದು ಪತ್ತೆಯಾಗಿದ್ದು, ಅದರ ಪಾಸ್‌ವರ್ಡ್ ಕೇಳಿದಾಗ "ಮರೆತುಹೋಗಿದೆ" ಎಂದು ಲಲಿತ್ ಕುಮಾರ್ ಹೇಳಿ ಸುಮಾರು ಎರಡು ಗಂಟೆಗಳ ಕಾಲ ಅಧಿಕಾರಿಗಳನ್ನು ವಿಳಂಬಗೊಳಿಸಲು ಯತ್ನಿಸಿದ್ದರೆಂದು ತಿಳಿದುಬಂದಿದೆ. ಬಳಿಕ ತಾಂತ್ರಿಕ ತಜ್ಞರ ನೆರವಿನಿಂದ ಲಾಕರ್ ತೆರೆಯಲಾಗಿದ್ದು, ಅದರೊಳಗೆ ನಗದು ಮತ್ತು ಚಿನ್ನಾಭರಣಗಳು ಪತ್ತೆಯಾಗಿವೆ.

ಇಷ್ಟೊಂದು ಪ್ರಮಾಣದ ಆಸ್ತಿ ಒಬ್ಬ ವ್ಯಕ್ತಿಯಿಂದ ಮಾತ್ರ ಸಂಗ್ರಹವಾಗಿರುವ ಸಾಧ್ಯತೆ ಕಡಿಮೆ ಎಂದು ವಿಜಿಲೆನ್ಸ್  ಶಂಕಿಸಿದ್ದು, ಇದರ ಹಿಂದೆ ದೊಡ್ಡ ಅಧಿಕಾರಿಗಳ ಜಾಲ ಅಥವಾ ಮಧ್ಯವರ್ತಿಗಳ ಕೈವಾಡವಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದೆ. ಬ್ಯಾಂಕ್ ವ್ಯವಹಾರಗಳು, ಹೂಡಿಕೆ ದಾಖಲೆಗಳು ಹಾಗೂ ಆಸ್ತಿ ಮೂಲಗಳ ಪರಿಶೀಲನೆ ಮುಂದುವರಿದಿದೆ.

ತನಿಖೆ ಪೂರ್ಣಗೊಂಡ ಬಳಿಕ ಲಲಿತ್ ಕುಮಾರ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಜಿ ಸಾರಿಗೆ ಅಧಿಕಾರಿಯ ನಿವಾಸದಲ್ಲಿ ಪತ್ತೆಯಾದ ಈ ಭಾರಿ ಪ್ರಮಾಣದ ಅಕ್ರಮ ಸಂಪತ್ತು ಉತ್ತರ ಪ್ರದೇಶ ಮಾತ್ರವಲ್ಲದೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.