ಟಿಪ್ಪು ಸ್ತಬ್ಧಚಿತ್ರಕ್ಕೆ ಅವಕಾಶ ಕೊಟ್ಟವರು ನಾರಾಯಣ ಗುರುಗಳಿಗೆ ಅಪಮಾನ ಮಾಡಿದ್ದಾರೆ ; ಕಾಂಗ್ರೆಸಿನಿಂದ ಪ್ರತ್ಯೇಕ ಸ್ತಬ್ಧಚಿತ್ರ ಜಾಥಾ

24-01-22 07:10 pm       Mangalore Correspondent   ಕರಾವಳಿ

ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಯಾಕೆ ಅವಕಾಶ ನಿರಾಕರಣೆ ಮಾಡಿದ್ದಾರೆ ಎಂಬ ಬಗ್ಗೆ ಕೇಂದ್ರ ಸರಕಾರ ಸ್ಪಷ್ಟನೆ ಕೊಡಬೇಕು. ಕರ್ನಾಟಕದ ಮುಖ್ಯಮಂತ್ರಿ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಸ್ಪಷ್ಟನೆ ನೀಡಬೇಕು. ಬಿಜೆಪಿಯವರಿಗೆ ತಮ್ಮ ವಿಶ್ವಗುರು ಎಂದು ಹೇಳಿಕೊಳ್ಳುವ ಮೋದಿ ಮಾತ್ರ ಗುರುವಾಗಿದ್ದಾರೆ.

Photo credits : Headline Karnataka

ಮಂಗಳೂರು, ಜ.24 : ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಯಾಕೆ ಅವಕಾಶ ನಿರಾಕರಣೆ ಮಾಡಿದ್ದಾರೆ ಎಂಬ ಬಗ್ಗೆ ಕೇಂದ್ರ ಸರಕಾರ ಸ್ಪಷ್ಟನೆ ಕೊಡಬೇಕು. ಕರ್ನಾಟಕದ ಮುಖ್ಯಮಂತ್ರಿ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಸ್ಪಷ್ಟನೆ ನೀಡಬೇಕು. ಬಿಜೆಪಿಯವರಿಗೆ ತಮ್ಮ ವಿಶ್ವಗುರು ಎಂದು ಹೇಳಿಕೊಳ್ಳುವ ಮೋದಿ ಮಾತ್ರ ಗುರುವಾಗಿದ್ದಾರೆ. ಉಳಿದವರೆಲ್ಲ ಗುರುಗಳಲ್ಲ. ನಾರಾಯಣ ಗುರುಗಳಿಗೆ ಅವಕಾಶ ನಿರಾಕರಿಸಿ ಅಪಮಾನ ಮಾಡಿದವರು ಈ ಹಿಂದೆ ಕರ್ನಾಟಕದಿಂದ ಕಳಿಸಿಕೊಟ್ಟಿದ್ದ ಟಿಪ್ಪು ಸ್ತಬ್ಧಚಿತ್ರಕ್ಕೆ ಅವಕಾಶ ಕೊಟ್ಟಿದ್ದರು. ಟಿಪ್ಪು ವಿರೋಧಿಗಳು ಎಂದು ಹೇಳಿಕೊಳ್ಳುವ ಇವರು ಟಿಪ್ಪು ಸ್ತಬ್ಧಚಿತ್ರ ಒಪ್ಪಿದ್ದರು. ಆದರೆ ನಾರಾಯಣ ಗುರುಗಳದ್ದು ಹೀನಾಯ ಅಂತ ತೋರಿದ್ದು ಯಾಕೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಹರಿಪ್ರಸಾದ್, ನಾರಾಯಣ ಗುರುಗಳನ್ನು ನಿರಾಕರಿಸುವ ಮೂಲಕ ಅವರು ಬೋಧಿಸಿತ ತತ್ವ, ಮಂತ್ರವನ್ನು ಅವಹೇಳನ ಮಾಡಿದ್ದಾರೆ. ದೇಶದಲ್ಲಿ ವನ್ ನೇಶನ್, ವನ್ ರೇಶನ್, ವನ್ ಎಜುಕೇಶನ್, ವನ್ ಲ್ಯಾಂಗ್ವೇಜ್, ವನ್ ಲೀಡರ್ ಎಂದು ಹೇಳುವ ಮಂದಿ, ಗುರುಗಳ ಮೂಲಮಂತ್ರ ಒಂದೇ ದೇಶ, ಒಂದೇ ಜಾತಿ, ಒಂದೇ ಧರ್ಮ ಎಂಬುದನ್ನು ಒಪ್ಪುವುದಿಲ್ಲ. ಕೇರಳದಲ್ಲಿ ನಾರಾಯಣ ಗುರುಗಳ ಪರವಾದ ಪ್ರಬಲ ಸಂಘಟನೆ ಎಸ್ಎನ್ ಡಿಪಿಯನ್ನು ವಿಭಜಿಸುವ ಷಡ್ಯಂತ್ರದ ಭಾಗವಾಗಿ ಈ ರೀತಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.  

ಕಳೆದ ಬಾರಿಯ ಚುನಾವಣೆಯ ವೇಳೆ ಬಿಜೆಪಿ, ಕೇರಳದಲ್ಲಿ ಎಸ್ಎನ್ ಡಿಪಿಯನ್ನು ವಿಭಜಿಸಿ ತಳವೂರಲು ಪ್ರಯತ್ನ ಪಟ್ಟಿತ್ತು. ಆದರೆ ಅಲ್ಲಿನ ಜನ ಬಿಜೆಪಿ ಕುತಂತ್ರಕ್ಕೆ ಮತ ನೀಡಲಿಲ್ಲ. ಕರ್ನಾಟಕದ ಕರಾವಳಿ ಸೇರಿ ನಾಲ್ಕೈದು ಜಿಲ್ಲೆಗಳಲ್ಲಿ ನಾರಾಯಣ ಗುರುಗಳ ಪರವಾದ ಬಿಲ್ಲವರು ಪ್ರಬಲವಾಗಿದ್ದಾರೆ. ಅವರಿಗಾದ ಅಪಮಾನ, ಅನ್ಯಾಯಕ್ಕಾದರೂ ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಸ್ಪಷ್ಟನೆ ನೀಡಬೇಕಿತ್ತು. ಡಬಲ್ ಇಂಜಿನ್ ಸರಕಾರ ಎಂದು ಹೇಳುವ ಮಂದಿ ಯಾಕೆ ಸ್ಪಷ್ಟನೆ ನೀಡಿಲ್ಲ. ಅದೇ ಬಿಲ್ಲವ ಸಮುದಾಯದ ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್ ನಾರಾಯಣ ಗುರುಗಳಿಗಾದ ಅವಮಾನದ ಬಗ್ಗೆ ಖಂಡನೆ ವ್ಯಕ್ತ ಮಾಡಬೇಕಿತ್ತು. ಆದರೆ ಅವರು ಈ ಕೆಲಸ ಮಾಡಲಿಲ್ಲ. ತಮ್ಮ ಪಕ್ಷ , ಆರೆಸ್ಸೆಸ್ ನಿಯಂತ್ರಿತ ಸರಕಾರ ಮಾಡಿದ ತಪ್ಪನ್ನು ಬೆಂಬಲಿಸಿದ್ದಾರೆ ಎಂದು ಹೇಳಿದರು.

ನಾರಾಯಣ ಗುರುಗಳ ತತ್ವ, ಸಿದ್ಧಾಂತ ಬೆಂಬಲಿಸಿ ಜನರಿ 26ರಂದು ವಿಚಾರ ವೇದಿಕೆಯವರು ಕರೆ ನೀಡಿರುವ ಪ್ರತಿಭಟನಾ ಜಾಥಾಗೆ ಕಾಂಗ್ರೆಸ್ ಬೆಂಬಲ ನೀಡುತ್ತದೆ ಎಂದು ಹೇಳಿದ ಬಿ.ಕೆ.ಹರಿಪ್ರಸಾದ್, ಜಾಥಾದಲ್ಲಿ ಕಾಂಗ್ರೆಸ್ ಬಾವುಟ ಹಿಡಿಯಬಾರದು ಎಂಬ ಬಿಜೆಪಿ ಹೇಳಿಕೆಗೆ, ಕಾಂಗ್ರೆಸ್ ಬಾವುಟ ಹಿಡಿಯುತ್ತದೋ, ಏನು ಮಾಡುತ್ತದೋ ಅದನ್ನು ಬಿಜೆಪಿಯಿಂದ ಕೇಳಿಸಿಕೊಳ್ಳಬೇಕಿಲ್ಲ. ನಾರಾಯಣ ಗುರುಗಳ ಪರವಾದ ಜಾಥಾವನ್ನು ಕಾಂಗ್ರೆಸ್ ಬೆಂಬಲಿಸುತ್ತದೆ. ನಮ್ಮ ಕಾರ್ಯಕರ್ತರು ಜಾಥಾದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಹೇಳಿದರು.

ಕಾಂಗ್ರೆಸ್ ನಿಂದ ಪ್ರತ್ಯೇಕ ವಾಹನ ಜಾಥಾ

ಇದೇ ವೇಳೆ, ನಾರಾಯಣ ಗುರುಗಳಿಗಾದ ಅವಮಾನ ಖಂಡಿಸಿ ಕಾಂಗ್ರೆಸ್ ಕೂಡ ಜನವರಿ 26ರಂದು ಪ್ರತ್ಯೇಕ ಪ್ರತಿಭಟನಾ ಜಾಥಾ ಹಮ್ಮಿಕೊಂಡಿದ್ದು, ಬೆಳಗ್ಗೆ 8 ಗಂಟೆಗೆ ಕಂಕನಾಡಿ ಗರೋಡಿ ಕ್ಷೇತ್ರದಲ್ಲಿ ಪ್ರಾರ್ಥನೆ ನೆರವೇರಿಸಿ ಸ್ತಬ್ಧಚಿತ್ರದ ಜಾಥಾ ಹೊರಡಲಿದ್ದಾರೆ. ಪಂಪ್ವೆಲ್, ನಂತೂರು, ಕುಲಶೇಖರ, ನೀರುಮಾರ್ಗ, ಬಜ್ಪೆ, ಸುರತ್ಕಲ್, ಪಣಂಬೂರು, ಕೊಟ್ಟಾರ, ಪಿವಿಎಸ್, ಎಂಜಿ ರೋಡ್ ಆಗಿ ಸಂಜೆ ನಾಲ್ಕು ಗಂಟೆಗೆ ಮತ್ತೆ ಉರ್ವಾ ಸ್ಟೋರಿಗೆ ಬಂದು ಅಲ್ಲಿಂದ ಕಾಲ್ನಡಿಗೆಯಲ್ಲಿ ಕುದ್ರೋಳಿ ದೇವಸ್ಥಾನದತ್ತ ತೆರಳಲು ಪ್ಲಾನ್ ಹಾಕಲಾಗಿದೆ.

Mangalore Congress to hold separate Narayana Guru procession carrying Narayana Guru's photo on R Day says B K Hariprasad. He also added that the govt has given permission to Tableau of Tippu Sulthan.