ಗುರುಗಳ ಹೆಸರಲ್ಲಿ ನೂರು ಟ್ಯಾಬ್ಲೋ, ಹಳದಿ ಶಾಲು, ಧ್ವಜ ಮಾತ್ರ ; ಪೂಜಾರಿಯವರನ್ನು ನಡುನೀರಲ್ಲಿ ಕೈಬಿಟ್ಟವರಿಂದ ಎಲುಬಿಲ್ಲದ ನಾಲಗೆ !  

24-01-22 10:30 pm       Mangalore Correspondent   ಕರಾವಳಿ

ಕೇಂದ್ರ ಸರಕಾರ ನಾರಾಯಣ ಗುರುಗಳ ಟ್ಯಾಬ್ಲೋ ನಿರಾಕರಿಸುವ ಮೂಲಕ ಗುರುಗಳ ತತ್ವ, ಸಿದ್ಧಾಂತಗಳಿಗೆ ಅವಮಾನ ಮಾಡಿದೆ. ಅದಕ್ಕಾಗಿ ಒಂದು ಟ್ಯಾಬ್ಲೋ ಅಲ್ಲ, ಎರಡು ಜಿಲ್ಲೆಗಳಿಂದ ಕನಿಷ್ಠ ನೂರು ಟ್ಯಾಬ್ಲೋಗಳನ್ನು ಸೇರಿಸುತ್ತೇವೆ.

ಮಂಗಳೂರು, ಜ.24 : ಕೇಂದ್ರ ಸರಕಾರ ನಾರಾಯಣ ಗುರುಗಳ ಟ್ಯಾಬ್ಲೋ ನಿರಾಕರಿಸುವ ಮೂಲಕ ಗುರುಗಳ ತತ್ವ, ಸಿದ್ಧಾಂತಗಳಿಗೆ ಅವಮಾನ ಮಾಡಿದೆ. ಅದಕ್ಕಾಗಿ ಒಂದು ಟ್ಯಾಬ್ಲೋ ಅಲ್ಲ, ಎರಡು ಜಿಲ್ಲೆಗಳಿಂದ ಕನಿಷ್ಠ ನೂರು ಟ್ಯಾಬ್ಲೋಗಳನ್ನು ಸೇರಿಸುತ್ತೇವೆ. ಇದು ಯಾವುದೇ ಪಕ್ಷದ ವಿರುದ್ಧ ಅಲ್ಲ. ಆದರೆ, ಸಮುದಾಯದ ಸ್ವಾಭಿಮಾನದ ಪ್ರತೀಕವಾಗಿ ಗುರುಗಳ ಹೆಸರಿನಲ್ಲಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.

ಕುದ್ರೋಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸತ್ಯಜಿತ್ ಸುರತ್ಕಲ್ ಮತ್ತು ಕುದ್ರೋಳಿ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್., ಗುರುಗಳಿಗಾದ ಅವಮಾನವನ್ನು ಖಂಡಿಸುವುದಕ್ಕಾಗಿ ಮತ್ತು ಅಸಮಾನತೆಯ ವಿರುದ್ಧ ಏಕ ಪ್ರಕಾರದ ಜಾಥಾ ನಡೆಯಲಿದೆ. ಅವಿಭಜಿತ ಜಿಲ್ಲೆಯ ಬೈಂದೂರಿನಿಂದ ತೊಡಗಿ, ಸುಳ್ಯ, ಪುತ್ತೂರು, ಬೆಳ್ತಂಗಡಿ, ಕಾರ್ಕಳ ಎಲ್ಲ ಕಡೆಯಿಂದಲೂ ಬಿಲ್ಲವ ವೇದಿಕೆಯಿಂದ ಜಾಥಾ ಬರಲಿದೆ. ಪಕ್ಷ ಭೇದ ಮರೆತು ಕೇವಲ ಹಳದಿ ಶಾಲು, ಹಳದಿ ಧ್ವಜದೊಂದಿಗೆ ಪಾಲ್ಗೊಳ್ಳಬೇಕು. ಗುರುಗಳ ಸ್ಮರಣೆ ಬಿಟ್ಟು ಯಾವುದೇ ಘೋಷಣೆಗಳಿಗೂ ಅವಕಾಶ ಇಲ್ಲ ಎಂದು ಹೇಳಿದರು.

ನಾರಾಯಣ ಗುರುಗಳ ಹೆಸರು, ಗೌರವ ಹಾಳು ಮಾಡುವ ಯತ್ನ ನಡೆದಿದೆ. ಆದರೆ ಈ ವಿವಾದವನ್ನು ಸಮರ್ಥಿಸುವ ನೆಪದಲ್ಲಿ ಕೆಲವು ನಾಯಕರು ಹಿಂದುತ್ವ ನಾಶದ ಮಾತು ಹೇಳುತ್ತಿದ್ದಾರೆ. ಹಿಂದುಳಿದ ವರ್ಗ ಇಲ್ಲದೆ ಹಿಂದುತ್ವ ಇರುವುದಿಲ್ಲ. ಗುರುಗಳ ಚಿಂತನೆ ಬದಿಗಿಟ್ಟು ಹಿಂದು ಸಮಾಜವೂ ಇರುವುದಿಲ್ಲ. ಗುರುಗಳ ಚಿಂತನೆ ಇಲ್ಲದೆ ಹಿಂದು ದೇಶ ಆಗಿ ಉಳಿಯಲ್ಲ ಎಂದ ಸತ್ಯಜಿತ್ ಸುರತ್ಕಲ್, ವಿಶ್ವ ಹಿಂದು ಪರಿಷತ್ ನಿಮ್ಮ ಹೋರಾಟಕ್ಕೆ ಬೆಂಬಲ ನೀಡಿದೆಯಲ್ಲಾ ಎಂಬ ಪ್ರಶ್ನೆಗೆ, ಕೆಲವರು ಪ್ರವಾಹದಲ್ಲಿ ಕೊಚ್ಚಿ ಹೋಗುವ ಭಯದಲ್ಲಿ ಬೆಂಬಲ ನೀಡುತ್ತಿದ್ದಾರೆ. ಆದರೆ, ಯಾರೇ ಬಂದರೂ ಹಳದಿ ಶಾಲು ಮಾತ್ರ ಹಾಕಬೇಕು. ಗೊಂದಲಕ್ಕೆ ಈಡು ಮಾಡಬಾರದು ಎಂದು ಹೇಳಿದರು.

ಪೂಜಾರಿಯನ್ನು ನಡುನೀರಿನಲ್ಲಿ ಕೈಬಿಟ್ಟ ವ್ಯಕ್ತಿ  

ಜನಾರ್ದನ ಪೂಜಾರಿಯವರೊಂದಿಗೆ ಸುದೀರ್ಘ 40 ವರ್ಷಗಳ ಕಾಲ ಜೊತೆಗಿದ್ದು ಈಗ ಪೂಜಾರಿಯವರನ್ನೇ ಒಬ್ಬರು ಪ್ರಶ್ನೆ ಮಾಡುತ್ತಿದ್ದಾರೆ. ಪೂಜಾರಿಯವರಿಗೆ ವಯಸ್ಸಾಯ್ತೆಂದು ನಡು ನೀರಿನಲ್ಲಿ ಕೈಬಿಟ್ಟು ಎಲುಬಿಲ್ಲದ ನಾಲಗೆಯನ್ನು ಹರಿಯಬಿಡುತ್ತಿದ್ದಾರೆ. ಪೂಜಾರಿಯವರನ್ನು ಪದೇ ಪದೇ ಸೋಲಿಸಿದವರು ಯಾರೆಂದರೆ ಅವರ ಹೆಸರನ್ನೇ ಹಲವರು ಹೇಳುತ್ತಾರೆ. ಪಕ್ಕದಲ್ಲೇ ಕುಳಿತು ಪೂಜಾರಿಯನ್ನು ಸೋಲಿಸಿದರು ಎನ್ನುತ್ತಾರೆ. ಅಂಥ ವ್ಯಕ್ತಿ ಈಗ ಪಕ್ಷದ ವೇದಿಕೆಯಲ್ಲಿ ನಿಂತು ಪೂಜಾರಿಗೆ ಪ್ರಶ್ನೆ ಮಾಡುತ್ತಾರೆ. ಇಂದು ಕೋಟ ಶ್ರೀನಿವಾಸ ಪೂಜಾರಿಯವರನ್ನು ಪೂಜಾರಿ ಬಳಿಗೆ ಕರೆದೊಯ್ದು ಯಾತ್ರೆ ಕೈಬಿಡಬೇಕು ಎಂದು ಒತ್ತಡ ಹಾಕುತ್ತಿದ್ದಾರೆ. ಆದರೆ, ಪೂಜಾರಿಯವರು ಇವರ ಮುಖಕ್ಕೆ ಮಸಿ ಬಳಿದು ಕಳಿಸಿಕೊಟ್ಟಿದ್ದಾರೆ ಎಂದು ಹರಿಕೃಷ್ಣ ಬಂಟ್ವಾಳ್ ಹೆಸರೆತ್ತದೆ ಚಾಟಿ ಬೀಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕುದ್ರೋಳಿ ಕ್ಷೇತ್ರ ಸಮಿತಿಯ ಟ್ರಸ್ಟಿಗಳು, ವಿವಿಧ ಬಿಲ್ಲವ ವೇದಿಕೆಯ ಸದಸ್ಯರು ಇದ್ದರು.

Several organizations joined hands for a procession under the aegis of Senior Congress leader B Janardhana Poojary on January 26, titled ‘Swabimana’ condemning the rejection of Bhramashree Narayana Guru tableau for Republic Day parade.