ತ್ರಿಕೋನ ಪ್ರೇಮ ; ಸೋಮೇಶ್ವರ ಕಡಲಿಗೆ ಹಾರಿದ ಪ್ರಿಯತಮೆಯ ರಕ್ಷಣೆಗೆ ಹೋದ ಯುವಕ ದಾರುಣ ಸಾವು ! 

28-01-22 11:08 pm       Mangalore Correspondent   ಕರಾವಳಿ

ಯುವಕನೊಬ್ಬ ಇಬ್ಬರು ಯುವತಿಯರನ್ನು ಪ್ರೀತಿಸಿ ಸೋಮೇಶ್ವರ ಬೀಚ್ ನಲ್ಲಿ ಮಾತುಕತೆ ನಡೆಸಲು ಮುಂದಾಗಿ ದುರಂತ ಅಂತ್ಯವಾದ ಘಟನೆ ಶುಕ್ರವಾರ ಸಂಜೆ ನಡೆದಿದೆ. 

Photo credits : Headline Karnataka

ಉಳ್ಳಾಲ, ಜ.28 : ಯುವಕನೊಬ್ಬ ಇಬ್ಬರು ಯುವತಿಯರನ್ನು ಪ್ರೀತಿಸಿ ಸೋಮೇಶ್ವರ ಬೀಚ್ ನಲ್ಲಿ ಮಾತುಕತೆ ನಡೆಸಲು ಮುಂದಾಗಿ ದುರಂತ ಅಂತ್ಯವಾದ ಘಟನೆ ಶುಕ್ರವಾರ ಸಂಜೆ ನಡೆದಿದೆ. 

ಮುನ್ನೂರು ಗ್ರಾಮದ ಸೋಮನಾಥ ಉಳಿಯ ನಿವಾಸಿ ಲಾಯ್ಡ್ ಡಿಸೋಜ (28) ಮೃತಪಟ್ಟ ಯುವಕ. ಕೋಟೆಕಾರು ಪಾನೀರು ನಿವಾಸಿ ಅಶ್ವಿತ ಫೆರಾವೊ(22) ಆತ್ಮಹತ್ಯೆಗೆ ಯತ್ನಿಸಿ ಸಾವಿನ ದವಡೆಯಿಂದ ಪಾರಾಗಿದ್ದಾಳೆ. 

ಲಾಯ್ಡ್ ಡಿಸೋಜ ಮತ್ತು ಅಶ್ವಿತ ಅವರು ಕಳೆದ ಎಂಟು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಈ ನಡುವೆ ಲಾಯ್ಡ್ ಗೆ ತೊಕ್ಕೊಟ್ಟು ಚೆಂಬುಗುಡ್ಡೆಯ ಇನ್ನೊಬ್ಬ ಕ್ರೈಸ್ತ ಯುವತಿಯ ಜೊತೆ ಸಂಪರ್ಕ ಆಗಿದ್ದು ಪ್ರೀತಿ - ಪ್ರೇಮ ಅಂಕುರಿಸಿತ್ತು. ಈ ವಿಚಾರ ತಿಳಿದ ಮೊದಲ ಪ್ರೇಯಸಿ ಅಶ್ವಿತಾ, ಲಾಯ್ಡ್ ಬಳಿ ಆಕ್ಷೇಪ ತೆಗೆದಿದ್ದಳು. 

ಇಂದು ಸಂಜೆ ಈ ಬಗ್ಗೆ ಮಾತುಕತೆ ನಡೆಸಲೆಂದು ಯುವಕ ಮತ್ತು ಇಬ್ಬರು ಯುವತಿಯರು ಸೋಮೇಶ್ವರ ಕಡಲ ಕಿನಾರೆಗೆ ತೆರಳಿದ್ದರು. ಈ ವೇಳೆ, ಲಾಯ್ಡ್ ಮಾತಿನಿಂದ ಬೇಸರಗೊಂಡ ಅಶ್ವಿತಾ ಏಕಾಏಕಿ‌ ರುದ್ರಪಾದೆಯಿಂದ ಸಮುದ್ರಕ್ಕೆ ಜಿಗಿದಿದ್ದಾಳೆ. ಪ್ರೇಯಸಿ ಸಮುದ್ರಕ್ಕೆ ಹಾರಿದ್ದನ್ನು ನೋಡಿ ಪ್ರಿಯಕರ ಲಾಯ್ಡ್ ಆಕೆಯ ರಕ್ಷಣೆಗಾಗಿ ನೀರಿಗೆ ಹಾರಿದ್ದಾನೆ. ಇದೇ ವೇಳೆ, ಕಾವಲು ಪಡೆಯ ಸಿಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು ಅಶ್ವಿತಾ ಸಾವಿನ ದವಡೆಯಿಂದ ಪಾರಾಗಿದ್ದಾಳೆ.‌ ಪ್ರಿಯತಮೆಯ ರಕ್ಷಣೆಗೆ ಹೋಗಿದ್ದ ಲಾಯ್ಡ್ ಸಮುದ್ರಪಾಲಾಗಿ ಅಸುನೀಗಿದ್ದಾನೆ. 

ಆತ್ಮಹತ್ಯೆಗೆ ಪ್ರಯತ್ನಿಸಿದ ಅಶ್ವಿತಾ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾಳೆ.
ಕರಾವಳಿ ಕಾವಲು ಪಡೆಯ ಮೋಹನ್ ಚಂದ್ರ, ಸುಜಿತ್ , ಅಶೋಕ್ ಸೋಮೇಶ್ವರ, ಮೀನುಗಾರರಾದ ಕಲ್ಪೇಶ್ ಹಾಗೂ ಗಿರೀಶ್ ಇಬ್ಬರನ್ನೂ ಸಮುದ್ರದಿಂದ ಹರಸಾಹಸ ಪಟ್ಟು ಮೇಲಕ್ಕೆತ್ತಿದ್ದು ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆ ಸೇರಿಸಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Mangalore 22 year old Lloyd Dsouza drowns at Someshwar Beach in order to save his girlfriend, dies. His girlfriend was in love with another boy and hence the came to settle the matter at the beach after which the girl went into the sea and was drowning. Lloyd dsouza who rushed to the spot to save her had to loose his life.