ತಲವಾರು ಹಿಡಿದು ಕಾಲೇಜು ಆವರಣದಲ್ಲಿ ದಾಂಧಲೆ ; ಹುಡುಗರ ಗುಂಪಿನ ಅತಿರೇಕದ ವಿಡಿಯೋ ವೈರಲ್

01-02-22 08:58 pm       Mangalore Correspondent   ಕರಾವಳಿ

ನಗರದ ಬಳ್ಳಾಲ್ ಬಾಗ್ ನಲ್ಲಿರುವ ಶ್ರೀದೇವಿ ಕಾಲೇಜು ಆವರಣದಲ್ಲಿ ಹುಡುಗರ ತಂಡವೊಂದು ಕ್ಯಾಂಪಸ್ ಒಳನುಗ್ಗಿ ತಲವಾರು ಹಿಡಿದು ದಾಂಧಲೆ ನಡೆಸಿದ ಘಟನೆ ನಡೆದಿದ್ದು, ಪ್ರಕರಣ ಬರ್ಕೆ ಠಾಣೆ ಮೆಟ್ಟಿಲೇರಿದೆ.

Photo credits : Headline Karnataka

ಮಂಗಳೂರು, ಫೆ.1 : ನಗರದ ಬಳ್ಳಾಲ್ ಬಾಗ್ ನಲ್ಲಿರುವ ಶ್ರೀದೇವಿ ಕಾಲೇಜು ಆವರಣದಲ್ಲಿ ಹುಡುಗರ ತಂಡವೊಂದು ಕ್ಯಾಂಪಸ್ ಒಳನುಗ್ಗಿ ತಲವಾರು ಹಿಡಿದು ದಾಂಧಲೆ ನಡೆಸಿದ ಘಟನೆ ನಡೆದಿದ್ದು, ಪ್ರಕರಣ ಬರ್ಕೆ ಠಾಣೆ ಮೆಟ್ಟಿಲೇರಿದೆ.

ಇಂದು ಮಧ್ಯಾಹ್ನ 3 ಗಂಟೆ ವೇಳೆಗೆ ಘಟನೆ ನಡೆದಿದೆ. ಹುಡುಗರ ಗುಂಪೊಂದು ಕಾಲೇಜು ಮುಂಭಾಗದ ರಸ್ತೆಯಲ್ಲಿ ಸ್ಕೂಟರಿನಲ್ಲಿ ಬಂದಿದ್ದು ಈ ವೇಳೆ ಕೇರಳ ಮೂಲದ ವಿದ್ಯಾರ್ಥಿಗಳಿಗೆ ವಾಹನ ತಾಗಿತ್ತು. ಇದರ ಬಗ್ಗೆ ಹುಡುಗರ ಗುಂಪು ಮತ್ತು ಮಲಯಾಳಿ ವಿದ್ಯಾರ್ಥಿಗಳ ನಡುವೆ ಮಾತಿಗೆ ಮಾತು ಬೆಳೆದಿತ್ತು. ಆದರೆ ಎರಡೂ ಕಡೆಯವರಿಗೆ ಭಾಷೆ ತಿಳಿಯದ ಕಾರಣ ಏನೇನೋ ಮಾತಾಡಿಕೊಂಡಿದ್ದರು. ಆನಂತರ ಅದೇ ಕಾಲೇಜಿನಲ್ಲಿ ಮಲಯಾಳಿ ವಿದ್ಯಾರ್ಥಿಗಳ ಸಹಪಾಠಿಯಾಗಿರುವ, ಮಂಗಳೂರಿನ ವಿದ್ಯಾರ್ಥಿಯೊಬ್ಬ ಅಲ್ಲಿಗೆ ಬಂದಿದ್ದು ಎರಡೂ ಗುಂಪಿನವರಿಗೆ ಬುದ್ಧಿಮಾತು ಹೇಳಿದ್ದಾನೆ. ಮಲಯಾಳ ಬಾರದ ಹುಡುಗರನ್ನು ಅಲ್ಲಿಂದ ಹೋಗುವಂತೆ ಹೇಳಿದ್ದ.

ಆದರೆ ಇದನ್ನೇ ನೆಪವಾಗಿರಿಸಿದ ಕಿಡಿಗೇಡಿ ಹುಡುಗರ ಗುಂಪು ಅಲ್ಲಿಂದ ಹಿಂತಿರುಗಿದ್ದು ಸ್ವಲ್ಪ ಹೊತ್ತಿನಲ್ಲಿ ಸ್ಥಳಕ್ಕೆ ತಲವಾರು ಹಿಡಿದು ಬಂದಿತ್ತು. ಐದಾರು ಮಂದಿ ಕಾಲೇಜು ಆವರಣಕ್ಕೆ ಬಂದು ಮಲಯಾಳಿಗಳು ಮತ್ತು ಇನ್ನೊಬ್ಬ ವಿದ್ಯಾರ್ಥಿಯನ್ನು ಹುಡುಕಾಟ ನಡೆಸಿದೆ. ತಲವಾರು ಹಿಡಿದು ಅತ್ತಿತ್ತ ಹೋಗಿದ್ದು, ಅಲ್ಲಿ ಮಲಯಾಳಿ ಹುಡುಗರಾಗಲೀ, ಬುದ್ಧಿಮಾತು ಹೇಳಿದ ವಿದ್ಯಾರ್ಥಿಯಾಗಲೀ ಸಿಕ್ಕಿರಲಿಲ್ಲ. ಹುಡುಗರು ಹೊರಗಿನವರಾಗಿದ್ದು, ಕಾಲೇಜಿಗೆ ಸಂಬಂಧಪಟ್ಟವರಲ್ಲ.   

ಕಾಲೇಜು ಆವರಣದಲ್ಲಿ ತಲವಾರು ಹಿಡಿದು ಠಳಾಯಿಸಿದ ಹುಡುಗರ ವಿಡಿಯೋವನ್ನು ಕಾಲೇಜಿನ ವಿದ್ಯಾರ್ಥಿಗಳು ಮೊಬೈಲಿನಲ್ಲಿ ರೆಕಾರ್ಡ್ ಮಾಡಿದ್ದು, ಅದೀಗ ವೈರಲ್ ಆಗಿದೆ. ಬರ್ಕೆ ಠಾಣೆಯಲ್ಲಿ ಸ್ಥಳೀಯ ವಿದ್ಯಾರ್ಥಿ ದೂರು ನೀಡಿದ್ದು, ತಲವಾರು ಹಿಡಿದು ಬಂದವರ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾನೆ. ಎರಡೂ ಕಡೆಯ ಗುಂಪನ್ನು ಠಾಣೆಗೆ ಕರೆಸಿ, ಪೊಲೀಸರು ಮಾತುಕತೆ ನಡೆಸುತ್ತಿದ್ದಾರೆ.

Youths enter with Talwar to college Sridevi campus in Ballabagh, Mangalore. The video of this has gone goes viral on social media.