ನೈಟ್ ಕರ್ಫ್ಯೂ ತೆರವು ; ಮತ್ತೆ ಕರಾವಳಿಯಲ್ಲಿ ಕಂಬಳ ಸೀಸನ್ ಆರಂಭ, ಫೆ.5ರಿಂದಲೇ ಮೊಳಗಲಿದೆ ಅಲೆ ಬುಡಿಯೆರ್ ! 

02-02-22 12:31 pm       Mangalore Correspondent   ಕರಾವಳಿ

ನೈಟ್ ಕರ್ಪ್ಯೂ ಜಾರಿಯಿಂದಾಗಿ ರದ್ದುಗೊಂಡಿದ್ದ ತುಳುನಾಡಿನ ಜನಪದ ಕ್ರೀಡೆ ಕಂಬಳವನ್ನು ಮತ್ತೆ ಆರಂಭಿಸಲು ಪ್ರಯತ್ನ ನಡೆದಿದೆ. ಈ ಬಗ್ಗೆ ಕಂಬಳ ಸಮಿತಿಯ ಪ್ರಮುಖರು ಸಭೆ ನಡೆಸಿದ್ದು ಉಳಿದಿರುವ ಕಂಬಳದ ವೇಳಾಪಟ್ಟಿಯನ್ನು ಮರು ನಿಗದಿಗೊಳಿಸಿದ್ದಾರೆ.

ಮಂಗಳೂರು, ಫೆ.2 : ನೈಟ್ ಕರ್ಪ್ಯೂ ಜಾರಿಯಿಂದಾಗಿ ರದ್ದುಗೊಂಡಿದ್ದ ತುಳುನಾಡಿನ ಜನಪದ ಕ್ರೀಡೆ ಕಂಬಳವನ್ನು ಮತ್ತೆ ಆರಂಭಿಸಲು ಪ್ರಯತ್ನ ನಡೆದಿದೆ. ಈ ಬಗ್ಗೆ ಕಂಬಳ ಸಮಿತಿಯ ಪ್ರಮುಖರು ಸಭೆ ನಡೆಸಿದ್ದು ಉಳಿದಿರುವ ಕಂಬಳದ ವೇಳಾಪಟ್ಟಿಯನ್ನು ಮರು ನಿಗದಿಗೊಳಿಸಿದ್ದಾರೆ. 
 
ಕೋವಿಡ್ ಮಾರ್ಗಸೂಚಿ ಹಿನ್ನೆಲೆಯಲ್ಲಿ 2021-22ರ ಸಾಲಿನ ಕಂಬಳವನ್ನು ಕಳೆದ ಜನವರಿಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಈಗ ಕೊರೋನಾ ಕರ್ಫ್ಯೂ ತೆರವುಗೊಂಡ ಕಾರಣ ಕಂಬಳವನ್ನು ಮತ್ತೆ ಆರಂಭಿಸಲು ನಿರ್ಧರಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಸಭೆ ನಡೆಸಿ ಕಂಬಳದ ಪರಿಷ್ಕೃತ ದಿನಾಂಕಗಳನ್ನು ನಿಗದಿಪಡಿಸಿದೆ ಎಂದು ಸಮಿತಿ ಅಧ್ಯಕ್ಷ ಎರ್ಮಾಳ್ ರೋಹಿತ್ ಹೆಗ್ಡೆ ತಿಳಿಸಿದ್ದಾರೆ. 

ಕಳೆದ ಡಿ.5ರಂದು ಕಂಬಳ ಸೀಸನ್ ಆರಂಭಗೊಂಡಿತ್ತು. ಹಳೆ ವೇಳಾಪಟ್ಟಿಯಂತೆ ಹೊಕ್ಕಾಡಿಗೋಳಿ, ಮೂಡುಬಿದಿರೆ, ಮಿಯ್ಯಾರ್, ಕಕ್ಕೆಪದವು, ಮುಲ್ಕಿಯಲ್ಲಿ ಕಂಬಳ ಈಗಾಗಲೇ ನಡೆದಿದ್ದು ಉಳಿದ ಕಡೆಯ ಕಂಬಳಗಳು ಬಾಕಿಯಾಗಿದ್ದವು. ಇದೀಗ ಜಿಲ್ಲಾಡಳಿತದ ಅನುಮತಿ ಪಡೆದು ಫೆಬ್ರವರಿ 5ರಿಂದ ಕಂಬಳ ಸೀಸನ್ ಆರಂಭಿಸಿದ್ದು ಮೊದಲ ಕಂಬಳ ಬಾರಾಡಿ ಬೀಡುವಿನಲ್ಲಿ ನಡೆಯಲಿದೆ. ಫೆ.13 ರಂದು ಅಡ್ವೆ ನಂದಿಕೂರು, 19ರಂದು ವಾಮಂಜೂರು ತಿರುವೈಲ್ ಕಂಬಳ, 26ಕ್ಕೆ ಐಕಳ ಬಾವ, ಮಾರ್ಚ್ 5ರಂದು ಪೈವಳಿಕೆ ಕಂಬಳ, 12 ರಂದು ಕಟಪಾಡಿ, 19 ರಂದು ಪುತ್ತೂರು ಕಂಬಳ, 26 ರಂದು ಮಂಗಳೂರಿನ ಬಂಗ್ರಕುಳೂರು, ಎಪ್ರಿಲ್ 2ರಂದು ಉಪ್ಪಿನಂಗಡಿ, 9 ರಂದು ಬಂಗಾಡಿ, ಎಪ್ರಿಲ್ 16 ರಂದು ವೇಣೂರು ಕಂಬಳದೊಂದಿಗೆ ಮುಕ್ತಾಯಗೊಳ್ಳಲಿದೆ.‌

ಕೊರೊನಾದಿಂದಾಗಿ ಈ ಬಾರಿ ಕಂಬಳ ಸೀಸನ್ ಮುಗಿದೇ ಹೋಯ್ತು ಎಂಬ ಮಾತುಗಳು ಕೇಳಿಬಂದಿದ್ದವು. ಕಂಬಳ ಅಭಿಮಾನಿಗಳು, ಕಂಬಳದ ಕೆಲಸಗಾರರು, ಮೂರು ಜಿಲ್ಲೆಗಳಲ್ಲಿ ಹರಡಿರುವ ನೂರಕ್ಕೂ ಹೆಚ್ಚು ಜೋಡಿ ಕೋಣಗಳ ಮಾಲೀಕರು ಮತ್ತು ಸಾವಿರಾರು ಕಾರ್ಮಿಕರು ನಿರಾಶೆಗೊಂಡಿದ್ದರು. ಆದರೆ ಕರ್ಫ್ಯೂ ತೆರವಾದೊಡನೆ ಕಂಬಳ ಸಮಿತಿ ಸಭೆ ಸೇರಿದ್ದು ವಿಳಂಬ ಮಾಡದೆ ಹಳೆಯ ರೀತಿಯಲ್ಲೇ ಶನಿವಾರ, ಭಾನುವಾರದ ಕಂಬಳವನ್ನು ಮತ್ತೆ ಆರಂಭಿಸಿದೆ.‌

With the lifting of the night curfew in the district, preparations are afoot to hold the remaining Kambalas. The Kambala Samithi has brought out the revised schedule for holding the remaining Kambalas.