ಹರ್ಷನ ಕುಟುಂಬಕ್ಕೆ ಟಿಕೆಟ್ ಕೇಳುವುದಕ್ಕೆ ಕಾಂಗ್ರೆಸಿಗರು ಯಾರು ? ಪಕ್ಷ ಇದೆ, ಅದನ್ನು ನೋಡಿಕೊಳ್ಳುತ್ತೆ.. ಇವ್ರ ಕಾಲದಲ್ಲಿ 23 ಕೊಲೆಯಾಗಿತ್ತು.. ಏನು ಮಾಡಿದ್ದರು ? 

02-03-22 02:24 pm       Udupi Correspondent   ಕರಾವಳಿ

ಕೊಲೆಯಾದ ಹರ್ಷನ‌ ಕುಟುಂಬಕ್ಕೆ ಟಿಕೆಟ್ ಕೊಟ್ಟರೆ ಅಭ್ಯರ್ಥಿ ನಿಲ್ಲಿಸಲ್ಲ ಎಂದು ಕಾಂಗ್ರೆಸ್ ನಾಯಕರು ಟಾಂಗ್ ನೀಡಿರುವುದಕ್ಕೆ ಗರಂ ಆಗಿರುವ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಟಿಕೆಟ್ ಬಗ್ಗೆ ಹೇಳುವುದಕ್ಕೆ ಕಾಂಗ್ರೆಸಿಗರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ. 

ಉಡುಪಿ, ಮಾ.2: ಕೊಲೆಯಾದ ಹರ್ಷನ‌ ಕುಟುಂಬಕ್ಕೆ ಟಿಕೆಟ್ ಕೊಟ್ಟರೆ ಅಭ್ಯರ್ಥಿ ನಿಲ್ಲಿಸಲ್ಲ ಎಂದು ಕಾಂಗ್ರೆಸ್ ನಾಯಕರು ಟಾಂಗ್ ನೀಡಿರುವುದಕ್ಕೆ ಗರಂ ಆಗಿರುವ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಟಿಕೆಟ್ ಬಗ್ಗೆ ಹೇಳುವುದಕ್ಕೆ ಕಾಂಗ್ರೆಸಿಗರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ. 

ಯಾವುದೇ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್ ಕೊಡಬೇಕು ಎಂದು ನಿರ್ಧರಿಸಲು ನಮ್ಮ ಹೈಕಮಾಂಡ್ ಇದೆ. ಅದರ ಬಗ್ಗೆ ನಮ್ಮ ಪಾರ್ಟಿ, ಹೈಕಮಾಂಡ್ ನಾಯಕರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಕಾಂಗ್ರೆಸ್ ನವರು ನಮ್ಮ ವ್ಯವಸ್ಥೆ ಬಗ್ಗೆ ಹೇಳಬೇಕಾಗಿಲ್ಲ. ಹರ್ಷನ ಕುಟುಂಬದ ಪೂರ್ತಿ ಜವಾಬ್ದಾರಿಯನ್ನು ಪಕ್ಷ ಮತ್ತು ನಮ್ಮ ಸರಕಾರ ತೆಗೆದುಕೊಂಡಿದೆ. ಕೊಲೆ ಆರೋಪಿಗಳನ್ನು ಬಂಧಿಸಿದ್ದು ಇನ್ನೆಂದೂ ಈ ರೀತಿಯ ಕೊಲೆಗಳು ಆಗದಂತೆ ನೋಡಿಕೊಳ್ಳುವ ಕೆಲಸವನ್ನು ನಮ್ಮ ಸರಕಾರ ಮಾಡುತ್ತದೆ.‌ 

ಕಾಂಗ್ರೆಸ್ ಸರಕಾರದ ಅವಧಿಯಲ್ಲಿ 23 ಹಿಂದು ಕಾರ್ಯಕರ್ತರ ಹತ್ಯೆಗಳಾಗಿದ್ದವು. ಇವರು ಎಷ್ಟು ಮಂದಿಗೆ ಸಾಂತ್ವನ ಹೇಳಿದ್ದಾರೆ. ಎಷ್ಟು ಪರಿಹಾರ ಕೊಟ್ಟಿದ್ದಾರೆ, ಆ ಮನೆಯವರಿಗೆ ಏನು ವ್ಯವಸ್ಥೆ ಮಾಡಿದ್ದಾರೆ ಅನ್ನೋದು ರಾಜ್ಯದ ಜನರಿಗೆ ಗೊತ್ತಿದೆ. ಆಗ ಕಾಂಗ್ರೆಸಿಗರ ಹೇಳಿಕೆ ಏನಿತ್ತು ಎಂಬುದನ್ನು ನೆನಪಿಸಿಕೊಳ್ಳಬೇಕು. ಸರಣಿ ಹತ್ಯೆಗಳು ಆಗಿದ್ದರೂ ನೀವು ಮೂಲಭೂತವಾದಿ ಸಂಘಟನೆಯವರಿಗೆ ಬೆಂಬಲ ನೀಡಿದ್ದೀರಿ. ನೀವು ಅವರ ಕೇಸ್ ವಾಪಾಸು ಪಡೆಯದೇ ಇರುತ್ತಿದ್ದರೆ, ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡದೇ ಇರುತ್ತಿದ್ದರೆ ಇವತ್ತು ಹರ್ಷನ ಕೊಲೆ ಕೃತ್ಯ ನಡೆಯುತ್ತಿರಲಿಲ್ಲ ಎಂದು ಸಚಿವ ಕೋಟ ವಾಗ್ದಾಳಿ ನಡೆಸಿದರು. 

ನಮ್ಮ ಸರಕಾರ ಹರ್ಷನ ಕುಟುಂಬಕ್ಕೆ ಸಂಪೂರ್ಣ ನೆರವು ನೀಡಿದೆ. ಹರ್ಷ ಪ್ರಕರಣದಲ್ಲಿ ಏನೇನು ಮಾಡಬೇಕೋ ಅದನ್ನು ಮಾಡುತ್ತೇವೆ. ಕೊಲೆ ಕೃತ್ಯದ ಹಿಂದಿನ ಷಡ್ಯಂತ್ರವನ್ನು ಹೊರಗೆ ತರುತ್ತೇವೆ. ಯಾವತ್ತೂ ಅವರು ಕೈ ಎತ್ತದಂತೆ ಮಾಡುತ್ತೇವೆ. ಆರೋಪಿಗಳಿಗೆ ರಿಯಾಯಿತಿ ಕೊಡುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಕೋಟ ಹೇಳಿದರು.‌

Who are congress leaders to plead for ticket for Harsha family slams Kota poojary in Udupi.