ತಲಪಾಡಿ ದೇವಿಪುರ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ನೂತನ ಬ್ರಹ್ಮರಥ ಸಮರ್ಪಣೆ ; ಮಾ.10 ರಂದು ಬ್ರಹ್ಮರಥ ಕಲಶಾಭಿಷೇಕ 

06-03-22 12:58 pm       Mangalore Correspondent   ಕರಾವಳಿ

ತಲಪಾಡಿ ದೇವಿಪುರ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಇಂದು ನೂತನ ಬ್ರಹ್ಮರಥ ಸಮರ್ಪಣೆಯಾಗಲಿದ್ದು, ಮಾ. 10 ರಂದು ಬ್ರಹ್ಮರಥ ಕಲಶಾಭಿಷೇಕ ನಡೆಯಲಿದೆ. 

ಉಳ್ಳಾಲ, ಮಾ.6: ತಲಪಾಡಿ ದೇವಿಪುರ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಇಂದು ನೂತನ ಬ್ರಹ್ಮರಥ ಸಮರ್ಪಣೆಯಾಗಲಿದ್ದು, ಮಾ. 10 ರಂದು ಬ್ರಹ್ಮರಥ ಕಲಶಾಭಿಷೇಕ ನಡೆಯಲಿದೆ. 

ಕರ್ನಾಟಕ ಮತ್ತು ಕೇರಳ ಗಡಿ ಪ್ರದೇಶ ತಲಪಾಡಿ ಗ್ರಾಮದ ದೇವಿಪುರ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರವು ಪುರಾಣ ಪ್ರಸಿದ್ಧವಾಗಿದ್ದು , ಸಹಸ್ರಾರು ಭಕ್ತಾದಿಗಳ ಶ್ರದ್ಧಾಕೇಂದ್ರವಾಗಿರುತ್ತದೆ. ಈ ಕ್ಷೇತ್ರವು ತಲಪಾಡಿ, ಕಿನ್ಯಾ, ಕೋಟೆಕಾರು ಗಾಮಕ್ಕೊಳಪಟ್ಟ ಗ್ರಾಮ ದೇವಸ್ಥಾನವಾಗಿದ್ದು ಇಲ್ಲಿ ಕಳೆದ 2015 ರಲ್ಲಿ ಪೂರ್ಣ ಪ್ರಮಾಣದಲ್ಲಿ ಜೀರ್ಣೋದ್ಧಾರ, ವೈಭವದ ಬ್ರಹ್ಮಕಲಶೋತ್ಸವ ನಡೆದಿರುತ್ತದೆ. ಸುಮಾರು ಐದಾರು ಶತಮಾನಗಳ ಹಿಂದಿನ ರಥವು ಶಿಥಿಲಗೊಂಡಿದ್ದು , ಕಳೆದ ಜೀರ್ಣೋದ್ದಾರ ಸಂದರ್ಭದಲ್ಲಿ ಅದರ ಪುನರ್ ನಿರ್ಮಾಣ ಕಾರ್ಯಕ್ಕೆ ಸಮಯಾವಕಾಶದ ಕೊರತೆಯಿಂದಾಗಿ ನಿರ್ಮಿಸಲು ಅಸಾಧ್ಯವಾಗಿತ್ತು.

ಕ್ಷೇತ್ರದ ಭಕ್ತಾದಿಗಳು ಸೇರಿ ರಾಮ್ ಮನೋಹರ ರೈ ಅವರ ನೇತೃತ್ವದಲ್ಲಿ ಬ್ರಹ್ಮರಥ ನಿರ್ಮಾಣ ಸಮಿತಿಯನ್ನು ರಚಿಸಿ, ಬ್ರಹ್ಮರಥ ನಿರ್ಮಾಣದ ಸಂಕಲ್ಪ ಮಾಡಲಾಗಿ 2023 ಮಾರ್ಚ್ ತಿಂಗಳಲ್ಲಿ ನಡೆಯುವ ವಾರ್ಷಿಕ ಜಾತ್ರೆಯ ಮೊದಲು ಸಮರ್ಪಿಸುವುದೆಂದು ತೀರ್ಮಾನಿಸಲಾಗಿತ್ತು. ಆದರೆ ಶ್ರೀ ದೇವಿಯ ಸಂಕಲ್ಪದಂತೆ ದೇವರ ಅನುಗ್ರಹದಿಂದ ಈ ವರ್ಷವೇ ಬ್ರಹ್ಮರಥ ನಿರ್ಮಿಸಿ ದೇವರಿಗೆ ಸಮರ್ಪಣೆ ಮಾಡುವ ಅವಕಾಶ ದೊರಕಿರುವುದು ಶ್ರೀ ಕ್ಷೇತ್ರದ ಭಕ್ತಾದಿಗಳ ಸೌಭಾಗ್ಯವೆಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಮೋಹನ್‌ದಾಸ್ ಶೆಟ್ಟಿ ನೆತ್ತಿಲಬಾಳಿಕೆ ಹೇಳಿದರು. 

ಕ್ಷೇತ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬ್ರಹ್ಮರಥ ನಿರ್ಮಾಣ ಕಾರ್ಯವು ಕೋಟೇಶ್ವರ ವಿಶ್ವಕರ್ಮ ಶಿಲ್ಪಕಲಾ ಶಾಲೆಯ ಶ್ರೀ ಲಕ್ಷ್ಮಿ ನಾರಾಯಣ ಆಚಾರ್ಯ ಕೋಟೇಶ್ವರ ಇವರ ನೇತೃತ್ವದಲ್ಲಿ ಅಂತಿಮ ಹಂತದಲ್ಲಿದೆ. ಬ್ರಹ್ಮರಥ ಇಂದು ಸಂಜೆ 3 ಗಂಟೆಗೆ ಕೋಟೆಕಾರು ಬೀರಿ ಶ್ರೀ ಗಣೇಶ ಮಂದಿರದಿಂದ ವೈಭವದ ಶೋಭಾಯಾತ್ರೆಯೊಂದಿಗೆ ಹೊರಡಲಿದ್ದು , ಸಂಜೆ 6 ಗಂಟೆಗೆ ಶ್ರೀ ಕ್ಷೇತ್ರಕ್ಕೆ ತಲುಪಿ ಸಮರ್ಪಣಾ ಕಾರ್ಯ ನಡೆಯಲಿದೆ. ಸಂಜೆ ಉಡುಪಿ ಪೇಜಾವರ ಅಧೋಕ್ಷಜ ಮಠದ ಯತಿಗಳಾದ ಶ್ರೀ ವಿಶ್ವಪ್ರಸನ್ನ ಮತ್ತು ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 9 ರಂದು ರಾತ್ರಿ ವಾಸ್ತು ಪೂಜೆ ಮತ್ತು ಇನ್ನಿತರ ಧಾರ್ಮಿಕ ವಿಧಿ ವಿಧಾನಗಳು ನಡೆದು ಮರುದಿನ ಬೆಳಗ್ಗೆ 9.45 ರಿಂದ ಚಂಡಿಕಾಯಾಗ ಮತ್ತು ಬ್ರಹ್ಮರಥ ಕಲಶಾಭಿಷೇಕ ನಡೆಯಲಿದೆ. ಅದೇ ದಿನ ಬೆಳಗ್ಗೆ 10 ಗಂಟೆಗೆ ದೇವಿಪುರದ ಬಳಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿದ್ದ ತಲಪಾಡಿ ದೊಡ್ಡಮನೆ ದಿವಂಗತ ಟಿ. ಐತಪ್ಪ ರೈಯವರ ಪತ್ನಿ ಶ್ರೀಮತಿ ಜಯಂತಿ ರೈ ಮತ್ತು ಮಕ್ಕಳು ನಿರ್ಮಿಸಿಕೊಟ್ಟಿರುವ ದೇವಸ್ಥಾನದ ಮಹಾದ್ವಾರದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. 

ಬ್ರಹ್ಮರಥ ಸಮಿತಿ ಅಧ್ಯಕ್ಷ ರಾಮಮನೋಹರ್ ರೈ , ಕಾರ್ಯದರ್ಶಿ ವಸಂತ ದೇವಾಡಿಗ, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಪ್ರದೀಪ್ ಕಿಲ್ಲೆ, ಸಭಾ ಕಾರ್ಯಕ್ರಮ ಸಂಚಾಲಕ ಗೋಪಾಲಕೃಷ್ಣ ಮೇಲಾಂಟ, ತಲಪಾಡಿ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಪ್ರಚಾರ ಸಮಿತಿ ಸಂಚಾಲಕ ಸುರೇಶ್ ಆಳ್ವ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Mangalore Bhramararatha at Durga Parameshwari Temple  at Ullal. On March at 10th Bhramararatha abisheka to be held.