ಸುರತ್ಕಲ್ ಟೋಲ್ ಗೇಟನ್ನು ಎನ್ಎಂಪಿಟಿ ಬಂದರು ಒಳಗೆ ಸ್ಥಳಾಂತರಕ್ಕೆ ಸಚಿವ ಗಡ್ಕರಿ ಸೂಚನೆ, ಮಾ.22ಕ್ಕೆ ಟೋಲ್ ಗೇಟ್ ವಿರೋಧಿ ಹೋರಾಟ !

15-03-22 09:54 pm       Mangalore Correspondent   ಕರಾವಳಿ

ಸುರತ್ಕಲ್ ಟೋಲ್ ಗೇಟ್ ತೆರವುಗೊಳಿಸುವ ಸಂಬಂಧಿಸಿ ದೆಹಲಿಯಲ್ಲಿ ಇಂದು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅಧ್ಯಕ್ಷತೆಯಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಎನ್ಎಂಪಿಟಿ ಬಂದರು ಅಧಿಕಾರಿಗಳ ಜೊತೆಗೆ ಸಭೆ ನಡೆಸಲಾಗಿದೆ.

ಮಂಗಳೂರು, ಮಾ.15 : ಸುರತ್ಕಲ್ ಟೋಲ್ ಗೇಟ್ ತೆರವುಗೊಳಿಸುವ ಸಂಬಂಧಿಸಿ ದೆಹಲಿಯಲ್ಲಿ ಇಂದು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅಧ್ಯಕ್ಷತೆಯಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಎನ್ಎಂಪಿಟಿ ಬಂದರು ಅಧಿಕಾರಿಗಳ ಜೊತೆಗೆ ಸಭೆ ನಡೆಸಲಾಗಿದೆ. ಸಭೆಯಲ್ಲಿ ಕಾನೂನು ಪ್ರಕಾರ, ಟೋಲ್ ಗೇಟ್ ತೆರವುಗೊಳಿಸಲು ಸಚಿವ ಗಡ್ಕರಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.‌ 

ಅಲ್ಲದೆ, ಸದ್ರಿ ರಸ್ತೆಯನ್ನು ಬಂದರು ರಸ್ತೆ ಅಭಿವೃದ್ಧಿ ಹೆಸರಲ್ಲಿ ಮಾಡಿರುವುದರಿಂದ ಹೆದ್ದಾರಿ ಪ್ರಾಧಿಕಾರದ ಬಾಕಿಯಿರುವ ಹಣ ವಸೂಲಿಗಾಗಿ ಟೋಲ್ ಗೇಟನ್ನು ಎನ್ಎಂಪಿಟಿ ಬಂದರಿಗೆ ಬರುವ ವಾಹನಗಳಿಗೆ ಮಾತ್ರ ಸೀಮಿತಗೊಳಿಸಲು ಸೂಚನೆ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಎನ್ಐಟಿಕೆ ಬಳಿಯ ಟೋಲ್ ಗೇಟನ್ನು ಬಂದರಿನ ಒಳಗೆ ಸ್ಥಳಾಂತರಿಸಬೇಕಿದೆ. ಈ ಬಗ್ಗೆ ಪ್ರಕ್ರಿಯೆ ನಡೆಯಬೇಕಿದ್ದು ಅದನ್ನು ಸಂಸದ ನಳಿನ್ ಕುಮಾರ್ ಗೆ ಸಚಿವ ಗಡ್ಕರಿ ವಹಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಮೌಖಿಕ ಮಾಹಿತಿ ರವಾನೆ ಆಗಿದೆ ವಿನಃ ಸಚಿವರು ಯಾವುದೇ ಆದೇಶ ಹೊರಡಿಸಿಲ್ಲ. ಸಭೆಯಲ್ಲಿ ಸಂಸದ ನಳಿನ್ ಕುಮಾರ್, ಹೆದ್ದಾರಿ ಪ್ರಾಧಿಕಾರದ ಸದಸ್ಯ ಆರ್.ಕೆ. ಪಾಂಡೆ, ಹೆಚ್ಚುವರಿ ಕಾರ್ಯದರ್ಶಿ ಗೋ ಸಾಹೇಲ್, ಮಹಾವೀರ್ ಸಿಂಗ್, ಶಿಕ್ಷಣ ಸಚಿವ ಬಿಸಿ ನಾಗೇಶ್, ಸಂಸದ ಪ್ರತಾಪಸಿಂಹ, ಕೋಲಾರ ಸಂಸದ ಮುನಿಸ್ವಾಮಿ ಇದ್ದರು. 

ಮೊದಲು ಟೋಲ್ ಗೇಟ್ ತೆರವುಗೊಳಿಸಿ, ಹೋರಾಟ ನಿಲ್ಲಲ್ಲ..! 

ದೆಹಲಿಯಲ್ಲಿ ನಿತಿನ್ ಗಡ್ಕರಿ ನಡೆಸಿರುವ ಸಭೆಯಲ್ಲಿ ಸುರತ್ಕಲ್ ಟೋಲ್ ತೆರವು ಕುರಿತು ನಿರ್ಣಾಯಕ ತೀರ್ಮಾನಗಳು ಆಗಿಲ್ಲ. ಇದು ನಿರಾಶದಾಯಕ. ನವ ಮಂಗಳೂರು ಬಂದರಿನ ಒಳಗಡೆಗೆ ಸುರತ್ಕಲ್ ಟೋಲ್ ಗೇಟ್ ಸ್ಥಳಾಂತರ ಮಾಡುವ ಕುರಿತು ಸಚಿವರು ವಿಷಯ ಪ್ರಸ್ತಾಪ ಮಾಡಿದ್ದರೂ ಇದನ್ನು ಕಾರ್ಯರೂಪಕ್ಕೆ ತರುವುದು ಯಾರು ? ಬಂದರು ಅಡಳಿತವನ್ನು ಒಪ್ಪಿಸುವುದು ಯಾರು  ? ಇದಕ್ಕೆ ಕಾಲಮಿತಿ ಎಷ್ಟು ? ಈ ಹಿಂದೆ ಹೆಜಮಾಡಿ ನವಯುಗ ಟೋಲ್ ಕೇಂದ್ರದೊಂದಿಗೆ ವಿಲೀನಗೊಳಿಸುವ ನಿರ್ಣಯ ಜಾರಿಗೊಳಿಸಲು ಸಾಧ್ಯವಾಗದಿರುವ ನಿದರ್ಶನ ನಮ್ಮ ಕಣ್ಣ ಮುಂದಿದೆ.  ಸಂಬಂಧಪಟ್ಟ ಸಂಸದರಿಗೆ ಇಚ್ಚಾಶಕ್ತಿ ಇಲ್ಲದಿದ್ದಲ್ಲಿ ಇಂತಹ ತೀರ್ಮಾನಗಳು ಕಾಗದದಲ್ಲಷ್ಟೆ ಉಳಿಯುತ್ತವೆ. ಮೊದಲು ಅನಧಿಕೃತ ಸುರತ್ಕಲ್ ಟೋಲ್ ಗೇಟ್ ತೆರವುಗೊಳಿಸಲಿ. ನಂತರ ಬಂದರಿಗೋ, ಮತ್ತೆಲ್ಲಿಗಾದರೂ ಹಾಕಿಕೊಳ್ಳಲಿ. ಟೋಲ್ ಗೇಟ್ ತೆರವಿಗೆ ಅಧಿಕೃತ ಆದೇಶ ಆಗುವ ವರೆಗೆ  ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಟೋಲ್ ಗೇಟ್ ವಿರೋಧಿ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ. 

ಮಾ.22 ರಂದು ಟೋಲ್ ಚಲೋ ಕಾಲ್ನಡಿಗೆ ಜಾಥಾ 

ಸುರತ್ಕಲ್ ಟೋಲ್ ಗೇಟ್ ವಿರೋಧಿಸಿ ಹಮ್ಮಿಕೊಂಡಿದ್ದ ಟೋಲ್ ಚಲೋ ಕಾಲ್ನಡಿಗೆ ಜಾಥಾವನ್ನು ಮಾ.22 ರಂದು ನಡೆಸಲು ಟೋಲ್ ವಿರೋಧಿ ಹೋರಾಟ ಸಮಿತಿ ನಿರ್ಧರಿಸಿದೆ.  ಹಿಜಾಬ್ ತೀರ್ಪಿನ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸೆಕ್ಷನ್ ಹೇರಿದ್ದರಿಂದ ಇಂದು ನಡೆಯಬೇಕಿದ್ದ ಕಾಲ್ನಡಿಗೆ ಜಾಥಾವನ್ನು ಕೊನೆಕ್ಷಣದಲ್ಲಿ ರದ್ದುಪಡಿಸಲಾಗಿತ್ತು. ಬದಲಿಗೆ, ಹೆಜಮಾಡಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸೇರಿ ಸಭೆ ನಡೆಸಿದ್ದಾರೆ. 

ಸಭೆಯಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಮೊಯ್ದೀನ್ ಬಾವ, ಹರಿಕೃಷ್ಣ ಪುನರೂರು, ಹರೀಶ್ ಎನ್.ಪುತ್ರನ್, ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ, ಕಂಕಣಗುತ್ತು ಕೃಷ್ಣ ಶೆಟ್ಟಿ, ಸಿಪಿಎಂ ಮುಖಂಡ ಕೆ ಯಾದವ ಶೆಟ್ಟಿ, ಜೀವನ್ ಕೆ. ಶೆಟ್ಟಿ, ಸುಧಾಕರ ಕರ್ಕೇರ, ಗೋಪಿನಾಥ ಪಡಂಗ, ಮಧು ಆಚಾರ್ಯ ಮೂಲ್ಕಿ, ಸದಾಶಿವ ಹೊಸದುರ್ಗ, ರಾಘವೇಂದ್ರ ರಾವ್, ರಮೇಶ್ ಟಿ ಎನ್ ಸುರತ್ಕಲ್, ಟ್ಯಾಕ್ಸಿಮೆನ್ ಸಂಘದ ರಮೇಶ್ ಕೆ. ಕೋಟ್ಯಾನ್, ದಿನೇಶ್ ಕುಂಪಲ, ನವೀನ್ಚಂದ್ರ ಜೆ. ಶೆಟ್ಟಿ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಮಾ.22 ರಂದು ಮತ್ತೆ ಕಾಲ್ನಡಿಗೆ ಹೋರಾಟ ನಡೆಸುವುದಾಗಿ ತೀರ್ಮಾನಿಸಲಾಯಿತು.

Minister Nitin Gadkari orders for transfer of Surathkal toll gate of Mangalore into NMPT gate. The toll gate on the National Highway 66 at Surathkal will be shifted to the New Mangalore Port and the toll will be collected only from those vehicles that enter and exit from the port, stated a press release from the office of Dakshina Kannada MP Nalin Kumar Kateel. Union minister of road transport and highways Nitin Gadkari convened a meeting to discuss about the toll gate at Surathkal with MP Nalin Kumar Kateel and officials at the Transport Bhavan in New Delhi today (Tuesday). The meeting mainly discussed about the shifting/ merger of the Surathkal toll gate.