ಟೀಮ್ ಇಂಡಿಯಾ ಮಾಡಿದ ಸಾಲು ಸಾಲು ಎಡವಟ್ಟುಗಳನ್ನು ಬೊಟ್ಟು ಮಾಡಿದ ಹರ್ಭಜನ್ ಸಿಂಗ್‌!

07-09-22 12:44 pm       Source: Vijayakarnataka   ಕ್ರೀಡೆ

ಏಷ್ಯಾ ಕಪ್‌ 2022 ಟೂರ್ನಿಯಲ್ಲಿ ಟೀಮ್ ಇಂಡಿಯಾ ಬ್ಯಾಕ್‌ ಟು ಬ್ಯಾಕ್‌ ಸೋಲಿನೊಂದಿಗೆ ಸ್ಪರ್ಧೆಯಿಂದ...

ದುಬೈ: ಏಷ್ಯಾ ಕಪ್ 2022 ಟೂರ್ನಿಯ ಸೂಪರ್‌-4 ಹಂತದಲ್ಲಿ ಟೀಮ್ ಇಂಡಿಯಾ ಬ್ಯಾಕ್‌ ಟು ಬ್ಯಾಕ್‌ ಸೋಲುಂಡಿದೆ. ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬಲಿಷ್ಠ ಭಾರತ ತಂಡದ ಎದುರು 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದ ಶ್ರೀಲಂಕಾ ತಂಡ ಟೂರ್ನಿಯಲ್ಲಿ ಫೈನಲ್‌ ತಲುಪಿದ ಮೊದಲ ತಂಡ ಎನಿಸಿಕೊಂಡಿತು. ಮತ್ತೊಂದೆಡೆ ರೋಹಿತ್ ಶರ್ಮಾ ಬಳಗ ಸ್ಪರ್ಧೆಯಿಂದ ಹೊರಬೀಳುವ ಹೊಸ್ತಿಲಿಗೆ ಬಂದು ನಿಂತಿದೆ.

ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಆಫ್‌ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌, ಟೀಮ್ ಇಂಡಿಯಾ ಪ್ರದರ್ಶನದ ಬಗ್ಗೆ ಬೇಸರ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್‌ ಮಾಡಿರುವ ಹಲವು ಎಡವಟ್ಟುಗಳ ವಿರುದ್ಧ ಗುಡುಗಿದ್ದು, ಕೆಲ ಮಹತ್ವದ ಪ್ರಶ್ನೆಗಳನ್ನೂ ಕೂಡ ಮುಂದಿಟ್ಟಿದ್ದಾರೆ. ಫಿನಿಷರ್‌ ಆಗಿ ತಂಡದಲ್ಲಿ ರಿವ ದಿನೇಶ್‌ ಕಾರ್ತಿಕ್‌ಗೆ ಅವಕಾಶ ನೀಡದೇ ಇರುವುದನ್ನು ಕೂಡ ಪ್ರಶ್ನೆ ಮಾಡಿದ್ದಾರೆ. ಟ್ವಿಟರ್‌ ಮೂಲಕ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಎದುರು ಮೂರು ಮುಖ್ಯ ಪ್ರಶ್ನೆಗಳನ್ನು ಇಟ್ಟಿದ್ದಾರೆ.

"ಗಂಟೆಗೆ 150 ಕಿ.ಮೀ ವೇಗದಲ್ಲಿ ಬೌಲಿಂಗ್‌ ಮಾಡುತ್ತಿದ್ದ ಉಮ್ರಾನ್‌ ಮಲಿಕ್ ಎಲ್ಲಿ? ಗುಣಮಟ್ಟದ ಸ್ವಿಂಗ್‌ ಬೌಲರ್‌ ದೀಪಕ್ ಚಹರ್‌ ಎಲ್ಲಿ? ಇವರು ಅವಕಾಶಕ್ಕೆ ಯೋಗ್ಯರಲ್ಲ ಎಂದು ಹೇಳಿ ನೋಡೋಣ? ದಿನೇಶ್ ಕಾರ್ತಿಕ್‌ಗೆ ಸತತ ಅವಕಾಶಗಳನ್ನು ಕೊಡುತ್ತಿಲ್ಲವವೇಕೆ? ಬಹಳಾ ಬೇಸರವಾಗಿದೆ," ಎಂದು ಟರ್ಬನೇಟರ್‌ ಖ್ಯಾತಿಯ ಮಾಜಿ ಸ್ಪಿನ್ನರ್‌ ಟೀಮ್ ಇಂಡಿಯಾದ ತಪ್ಪುಗಳ ಕಡೆಗೆ ಬೊಟ್ಟು ಮಾಡಿದ್ದಾರೆ.

Where is Umran malik (150km speed) ? Why Deepak chahar (top quality swing bowler )wasn’t there ? Tell me if these guys don’t deserve the chances ?? Why Dinesh Karthik don’t get chances consistently?? Disappointing

— Harbhajan Turbanator (@harbhajan_singh) September 6, 2022

"ಟೀಮ್ ಇಂಡಿಯಾ ಈ ರೀತಿ ಶ್ರೀಲಂಕಾ ಎದುರು ಸೋಲನುಭವಿಸಿದೆ ಎಂಬುದನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ವಾಸ್ತವದಲ್ಲಿ ಅತ್ಯುತ್ತಮ ಆಟವಾಡಿದ ಶ್ರೀಲಂಕಾ ತಂಡ ಭಾರತಕ್ಕಿಂತಲೂ ಉತ್ತಮ ತಂಡ ಎಂದು ಈ ದಿನ ಸಾಬೀತು ಪಡಿಸಿದೆ. ಈ ಫಲಿತಾಂಶ ಬಹಳಾ ಬೇಸರ ತಂದಿದೆ," ಎಂದು ಭಜ್ಜಿ ಅಸಮಾಧಾನ ಹೊರಹಾಕಿದ್ದಾರೆ.

Tough one to accept that India lost against @OfficialSLC but fact is that Sri Lanka played some brilliant cricket to show they were a better side tonight.. disappointed with our result .. Hmmmmmmm #AsiaCup #INDvsSL @BCCI

— Harbhajan Turbanator (@harbhajan_singh) September 6, 2022

ಅಂದಹಾಗೆ ಭಾರತ ತಂಡ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆಡುತ್ತಿದ್ದ ವೇಳೆ ಅನಾರೋಗ್ಯದಿಂದ ಬಳಲಿರುವ ಅವೇಶ್ ಖಾನ್‌ ಬದಲು ದೀಪಕ್ ಚಹರ್‌ ಅವರನ್ನು ಭಾರತ ತಂಡಕ್ಕೆ ಸೇರಿಸಲಾಗಿದೆ ಎಂಬ ಸುದ್ದಿ ಹೊರಬಂದಿತು. ಇನ್ನು ದಿನೇಶ್‌ ಕಾರ್ತಿಕ್‌ ಅವರನ್ನು ಲಯದ ಕಾರಣ ಹೊರಗಿಡಲಾಗಿದೆ ಎನ್ನುವುದು ತಪ್ಪು ಎಂದು ಕ್ಯಾಪ್ಟನ್ ರೋಹಿತ್ ಖಾತ್ರಿ ಪಡಿಸಿದರು. ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ಎಡಗೈ ಬ್ಯಾಟ್ಸ್‌ಮನ್‌ ಹೊಂದುವ ಸಲುವಾಗಿ ಕಾರ್ತಿಕ್ ಬದಲು ಪಂತ್‌ ಅವರನ್ನು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್‌ ಆಯ್ಕೆ ಮಾಡಿಕೊಂಡಿದೆ.

ಭಾರತ ತಂಡ ಫೈನಲ್‌ ತಲುಪಬೇಕಾದರೆ, ತನ್ನ ಕೊನೆಯ ಪಂದ್ಯದಲ್ಲಿ ಅಫಘಾನಿಸ್ತಾನ ಎದುರು ಭರ್ಜರಿ ಜಯ ದಾಖಲಿಸಬೇಕಿದೆ. ಇದಕ್ಕೂ ಮುನ್ನ ಅಫಘಾನಿಸ್ತಾನ ತಂಡವು ಪಾಕಿಸ್ತಾನವನ್ನು ಹೀನಾಯವಾಗಿ ಸೋಲಿಸಬೇಕು. ಜೊತೆಗೆ ಪಾಕಿಸ್ತಾನ ತಂಡ ತನ್ನ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ಎದುರು ಸೋಲಬೇಕಿದೆ. ಆಗಷ್ಟೇ ಭಾರತ ತಂಡಕ್ಕೆ ಶ್ರೀಲಂಕಾ ವಿರುದ್ಧ ಫೈನಲ್‌ ಆಡುವ ಅಲ್ಪ ಅವಕಾಶ ಸಿಗಲಿದೆ.

ಭಾರತ: 20 ಓವರ್‌ಗಳಲ್ಲಿ 173/8 (ರೋಹಿತ್‌ ಶರ್ಮಾ 72, ಸೂರ್ಯಕುಮಾರ್‌ ಯಾದವ್‌ 34; ದಿಲ್ಷಾನ್‌ ಮದುಶಂಕ 24ಕ್ಕೆ 3, ದಸುನ್ ಶನಕ 26ಕ್ಕೆ 2).
ಶ್ರೀಲಂಕಾ: 19.5 ಓವರ್‌ಗಳಲ್ಲಿ 174/4 (ಕುಶಲ್ ಮೆಂಡಿಸ್ 57, ಪತುಮ್ ನಿಸಂಕ 52, ದಸುನ್‌ ಶನಕ 33*; ಯುಜ್ವೇಂದ್ರ ಚಹಲ್ 34ಕ್ಕೆ 3).

Ind Vs Sl Harbhajan Singh Poses 3 Questions To Team India After Defeat Against Sri Lanka.