ಶ್ರೇಷ್ಠ ಟಿ20-ಐ ತಂಡ ಕಟ್ಟಿ ಕೊಹ್ಲಿ ಮತ್ತು ಸೂರ್ಯಕುಮಾರ್‌ನ ಹೊರಗಿಟ್ಟ ರಿಷಭ್ ಪಂತ್‌!

11-11-22 02:30 pm       Source: Vijayakarnataka   ಕ್ರೀಡೆ

ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್‌ ಹಂತದಲ್ಲಿ ತನ್ನ ಹೋರಾಟ ಕೊನೆಗೊಳಿಸಿದೆ. ನವೆಂಬರ್‌ 10ರಂದು ನಡೆದ ಉಪಾಂತ್ಯದ ಪಂದ್ಯದಲ್ಲಿ ಹೀನಾಯ ಪ್ರದರ್ಶನ ನೀಡಿದ ಭಾರತ ತಂಡ ಇಂಗ್ಲೆಂಡ್‌ ಎದುರು 10 ವಿಕೆಟ್‌ಗಳ ಸೋಲಿನ ಮರ್ಮಾಘಾತಕ್ಕೀಡಾಯಿತು.

ಟೆಸ್ಟ್‌ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಮೊದಲ ಆಯ್ಕೆಯ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಆಗಿರುವ ರಿಷಭ್ ಪಂತ್‌ ಅವರಿಗೆ ಭಾರತದ ಟಿ20-ಐ ತಂಡದಲ್ಲಿ ಸ್ಥಾನ ಈವರೆಗೆ ಭದ್ರವಾಗಿಲ್ಲ. ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯುತ್ತಿರುವ 2022ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ರಿಷಭ್ ಪಂತ್‌ ಆಡಿದ್ದು ಕೇವಲ ಎರಡು ಪಂದ್ಯವನ್ನು ಮಾತ್ರ. ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್‌ ಪಂತ್‌ಗಿಂತಲೂ ಅನುಭವಿ ದಿನೇಶ್‌ ಕಾರ್ತಿಕ್‌ಗೆ ಮಣೆ ಹಾಕಿತ್ತು.

ಸೂಪರ್‌-12 ಹಂತದಲ್ಲಿ ಜಿಂಬಾಬ್ವೆ ಎದುರು ಆಡಿದ್ದ ರಿಷಭ್ ಪಂತ್‌ಗೆ ಸೆಮಿಫೈನಲ್ಸ್‌ನಲ್ಲಿ ಇಂಗ್ಲೆಂಡ್ ಎದುರು ಆಡುವ ಅವಕಾಶ ಸಿಕ್ಕಿತ್ತು. ಆದರೆ, ಇನಿಂಗ್ಸ್‌ನ ಕೊನೇ ಎರಡು ಓವರ್‌ಗಳಲ್ಲಿ ಬ್ಯಾಟ್‌ ಮಾಡುವಂತಾದ ಕಾರಣ ಕೇವಲ 6 ರನ್‌ ಕೊಡುಗೆ ಕೊಡಲಷ್ಟೇ ಸೀಮಿತರಾದರು. ಸೆಮಿಫನಲ್‌ ಹಣಾಹಣಿಯಲ್ಲಿ ಬೌಲಿಂಗ್ ವೈಫಲ್ಯಕ್ಕೆ ಭಾರಿ ಬೆಲೆ ತೆತ್ತ ಭಾರತ ತಂಡ 10 ವಿಕೆಟ್‌ಗಳ ಹೀನಾಯ ಸೋಲುಂಡು ಸ್ಪರ್ಧೆಯಿಂದ ಹೊರಬಿದ್ದಿತು.

IND vs ENG: Rishabh Pant Names His T20I Dream Team

ಇದೇ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಬಿಡುಗಡೆ ಮಾಡಿರುವ ವಿಡಿಯೋ ಒಂದರಲ್ಲಿ ಮಾತನಾಡಿರುವ ರಿಷಭ್ ಪಂತ್‌, ತಮ್ಮ ಆಯ್ಕೆಯ ಶ್ರೇಷ್ಠ ಟಿ20-ಐ ತಂಡವನ್ನು ಕಟ್ಟಿದ್ದಾರೆ. ಅಚ್ಚರಿ ಎಂಬಂತೆ ಪಂತ್‌ ಆಯ್ಕೆಯ ನೆಚ್ಚಿನ ತಂಡದಲ್ಲಿ ಭಾರತ ತಂಡದ ಸ್ಟಾರ್‌ಗಳಾದ ವಿರಾಟ್‌ ಕೊಹ್ಲಿ ಮತ್ತು ಸೂರ್ಯಕುಮಾರ್‌ ಯಾದವ್‌ ಅವರಿಗೆ ಸ್ಥಾನ ಸಿಕ್ಕಿಲ್ಲ. ಅಲ್ಲದೆ ತಮ್ಮ ಮೊದಲ ಆಯ್ಕೆಯಾಗಿ ಇಂಗ್ಲೆಂಡ್‌ ತಂಡದ ನಾಯಕ ಜೋಸ್‌ ಬಟ್ಲರ್‌ ಅವರನ್ನು ತೆಗೆದುಕೊಂಡಿದ್ದಾರೆ.

"ನನ್ನ ತಂಡಕ್ಕೆ ತೆಗೆದುಕೊಳ್ಳುವ ಮೊದಲ ಐದು ಆಟಗಾರರು ಯಾರೆಂದು ಅಷ್ಟೇ ಈಗ ಹೇಳುತ್ತೇನೆ.. ಜೋಸ್‌ ಬಟ್ಲರ್‌, ಅವರು ಬ್ಯಾಟ್‌ ಮಾಡುವಾಗ ಅದರಲ್ಲೂ ಟಿ20 ಕ್ರಿಕೆಟ್‌ನಲ್ಲಿ ವಿಶ್ವದ ಯಾವುದೇ ಭಾಗದಲ್ಲಿ ಚೆಂಡನ್ನು ಬೌಂಡರಿಗೆ ಬಡಿದಟ್ಟುತ್ತಾರೆ ಎಂಬ ಭಾವನೆ ಮೂಡಿಬರುತ್ತದೆ," ಎಂದು ಹೇಳಿದ್ದಾರೆ.

Jasprit Bumrah Makes It To Mark Waugh's Top Five Picks For T20 World Cup  2022

ಪಂತ್‌, ಇದೇ ವೇಳೆ ಇಂಗ್ಲೆಂಡ್‌ ಆಲ್‌ರೌಂಡ್‌ ಲಿಯಾಮ್‌ ಲಿವಿಂಗ್‌ಸ್ಟೋನ್‌ ಅವರನ್ನು ತೆಗೆದುಕೊಂಡಿದ್ದು, ಬೌಲರ್‌ಗಳ ಪೈಕಿ ಟಿ20 ಸ್ಪೆಷಲಿಸ್ಟ್‌ಗಳಾದ ರಶೀದ್‌ ಖಾನ್ ಮತ್ತು ಜಸ್‌ಪ್ರೀತ್‌ ಬುಮ್ರಾ ಅವರನ್ನು ತೆಗೆದುಕೊಂಡಿದ್ದಾರೆ.

"ಬುಮ್ರಾ ಆಯ್ಕೆಯಲ್ಲಿ ಯಾವುದೇ ಅನುಮಾನವಿಲ್ಲ. ಅವರತಂತಹ ಫಾಸ್ಟ್‌ ಬೌಲರ್‌ ತಂಡದಲ್ಲಿ ಇರಲೇ ಬೇಕು. ಕಳೆದ ಆರು ವರ್ಷಗಳಿಂದ ರಶೀದ್‌ ಖಾನ್‌ ಶ್ರೇಷ್ಠ ಸ್ಪಿನ್ನರ್‌ ಆಗಿದ್ದಾರೆ. ಜೊತೆಗೆ ಬ್ಯಾಟಿಂಗ್‌ನಲ್ಲೂ ರಶೀದ್‌ ಕೊಡುಗೆ ಸಲ್ಲಿಸುತ್ತಾರೆ," ಎಂದು ಹೇಳಿದ್ದಾರೆ. ಪಂತ್‌ ತಮ್ಮ ಆಯ್ಕೆಯ ತಂಡದಲ್ಲಿ ಮೊದಲ ಐದು ಆಟಗಾರರಲ್ಲಿ ತಮ್ಮನ್ನು ಒಳಗೊಂಡಂತೆ ಜೋಸ್‌ ಬಟ್ಲರ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌, ಜಸ್‌ಪ್ರೀತ್‌ ಬುಮ್ರಾ ಮತ್ತು ರಶೀದ್‌ ಖಾನ್‌ ಅವರನ್ನು ತೆಗೆದುಕೊಂಡಿದ್ದಾರೆ.

ಭಾರತ ತಂಡಕ್ಕೆ 10 ವಿಕೆಟ್‌ ಸೋಲು
ಸೆಮಿಫೈನಲ್‌ ಪಂದ್ಯದಲ್ಲಿ ಹೀನಾಯ ಪ್ರದರ್ಶನ ನೀಡಿದ ಟೀಮ್ ಇಂಡಿಯಾ 10 ವಿಕೆಟ್‌ಗಳ ಸೋಲಿನ ಮಾರ್ಮಾಘಾತಕ್ಕೀಡಾಯಿತು. ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ರೋಹಿತ್‌ ಶರ್ಮಾ ಸಾರಥ್ಯದ ಟೀಮ್ ಇಂಡಿಯಾ, ತನ್ನ 20 ಓವರ್‌ಗಳಲ್ಲಿ 168/6 ರನ್‌ಗಳ ಸವಾಲಿನ ಮೊತ್ತ ದಾಖಲಿಸಿತು. ವಿರಾಟ್‌ ಕೊಹ್ಲಿ (50) ಮತ್ತು ಹಾರ್ದಿಕ್‌ ಪಾಂಡ್ಯ (63) ಅರ್ಧಶತಕಗಳನ್ನು ಬಾರಿಸಿ ಭಾರತ ತಂಡವನ್ನು 160ರ ಗಡಿ ದಾಟಿಸಿದರು.

ಗುರಿ ಬೆನ್ನತ್ತಿದ ಇಂಗ್ಲೆಂಡ್‌ ಆಕ್ರಮಣಕಾರಿ ಆಟವಾಡಿತು. ಮೊದಲ ಓವರ್‌ನಿಂದಲೇ ಭಾರತದ ಬೌಲರ್‌ಗಳನ್ನು ಬಡಿದು ಬೆಂಡೆತ್ತಿದ ಇಂಗ್ಲೆಂಡ್‌ ಓಪನರ್‌ಗಳಾದ ಜೋಸ್‌ ಬಟ್ಲರ್‌ (80*) ಮತ್ತು ಅಲೆಕ್ಸ್‌ ಹೇಲ್ಸ್‌ (86*) ಮೊದಲ ವಿಕೆಟ್‌ಗೆ ಮುರಿಯದ 170 ರನ್‌ಗಳ ದಾಖಲೆಯ ಜೊತೆಯಾಟವಾಡಿ ಭರ್ಜರಿ ಜಯ ತಂದರು. ಇದೀಗ ನವೆಂಬರ್‌ 13ರಂದು ಎಂ.ಸಿ.ಜಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಇಂಗ್ಲೆಂಡ್‌ ತಂಡ ಪಾಕಿಸ್ತಾನ ವಿರುದ್ಧ ಟ್ರೋಫಿಗಾಗಿ ಪೈಪೋಟಿ ನಡೆಸಲಿದೆ.

ಟೀಮ್ ಇಂಡಿಯಾ: 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 168 (ರೋಹಿತ್‌ ಶರ್ಮಾ 27, ವಿರಾಟ್‌ ಕೊಹ್ಲಿ 50, ಹಾರ್ದಿಕ್‌ ಪಾಂಡ್ಯ 63*; ಕ್ರಿಸ್‌ ಜಾರ್ಡನ್‌ 43ಕ್ಕೆ 3).
ಇಂಗ್ಲೆಂಡ್‌: 16 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 170 ರನ್‌ (ಜೋಸ್‌ ಬಟ್ಲರ್‌ ಅಜೇಯ 80, ಅಲೆಕ್ಸ್‌ ಹೇಲ್ಸ್‌ ಅಜೇಯ 86).
ಪಂದ್ಯಶ್ರೇಷ್ಠ: ಅಲೆಕ್ಸ್‌ ಹೇಲ್ಸ್‌

Ind Vs Eng No Virat Kohli And Suryakumar Yadav, As Rishabh Pant Names His Dream T20i Team.