ಅಂದು ಅವಮಾನ, ಇಂದು ಸನ್ಮಾನ; ತಲೆ ಎತ್ತಿದ ಮೊಹಮ್ಮದ್ ಸಿರಾಜ್ ಕಟ್ಔಟ್!

21-08-21 01:59 pm       Mykhel: Srinivas   ಕ್ರೀಡೆ

ಮೊಹಮ್ಮದ್ ಸಿರಾಜ್ ತುಟಿಗಳ ಮೇಲೆ ಬೆರಳಿಟ್ಟು ಸಂಭ್ರಮಾಚರಣೆ ಮಾಡುತ್ತಿರುವ ಕಟೌಟ್ ನಿಲ್ಲಿಸುವ ಮೂಲಕ ಸಿರಾಜ್ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಪೈಕಿ 2 ಪಂದ್ಯಗಳು ಮುಗಿದಿದ್ದು ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲನೇ ಪಂದ್ಯ ಮಳೆಗೆ ಆಹುತಿಯಾಗುವ ವುದರ ಮೂಲಕ ಯಾವುದೇ ಫಲಿತಾಂಶ ಸಿಗದೇ ಡ್ರಾನಲ್ಲಿ ಅಂತ್ಯಗೊಂಡಿತು. ಹಾಗೂ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಐತಿಹಾಸಿಕ ಹಿನ್ನೆಲೆ ಇರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಭಾರತ 151 ರನ್‌ಗಳ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆಯನ್ನು ಸಾಧಿಸಿದೆ.

ಲಾರ್ಡ್ಸ್ ಅಂಗಳದಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಗೆದ್ದು ಬೀಗಲು ಕಾರಣರಾದ ಆಟಗಾರರಲ್ಲಿ ಮೊಹಮ್ಮದ್ ಸಿರಾಜ್ ಕೂಡ ಒಬ್ಬರು. ಎರಡನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದ ಮೊಹಮ್ಮದ್ ಸಿರಾಜ್, ಎರಡನೇ ಇನ್ನಿಂಗ್ಸ್‌ನಲ್ಲಿಯೂ 4 ವಿಕೆಟ್‍ಗಳನ್ನು ಪಡೆದು ಮಿಂಚಿದರು. ಹೀಗೆ ಲಾರ್ಡ್ಸ್ ಅಂಗಳದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಒಟ್ಟು 8 ವಿಕೆಟ್‍ಗಳನ್ನು ಪಡೆದ ಮೊಹಮ್ಮದ್ ಸಿರಾಜ್ ಎಲ್ಲೆಡೆ ದೊಡ್ಡಮಟ್ಟದ ಪ್ರಶಂಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.



ಮೊಹಮ್ಮದ್ ಸಿರಾಜ್ ಕ್ರಿಕೆಟ್ ಜರ್ನಿ ಆರಂಭಿಸಿದಾಗ ಕೆಲ ನೆಟ್ಟಿಗರು ಮತ್ತು ಕ್ರಿಕೆಟ್ ಪಂಡಿತರು ಯಾವ ರೀತಿ ಕಾಲೆಳೆದರು ಮತ್ತು ಎಷ್ಟರ ಮಟ್ಟಿಗೆ ಟೀಕೆಗಳನ್ನು ಸಿರಾಜ್ ವಿರುದ್ಧ ಮಾಡಿದರು ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಷಯವೇ. ಅದರಲ್ಲಿಯೂ ಐಪಿಎಲ್ ವೇಳೆ ಮೊಹಮ್ಮದ್ ಸಿರಾಜ್ ತಮ್ಮ ಕೆಟ್ಟ ಬೌಲಿಂಗ್ ಪ್ರದರ್ಶನದಿಂದ ಸಾಕಷ್ಟು ಬಾರಿ ಟೀಕೆಗಳಿಗೆ ಒಳಗಾಗಿದ್ದರು. ನಿರಂತರವಾಗಿ ಮೊಹಮ್ಮದ್ ಸಿರಾಜ್ ಪ್ರದರ್ಶನವನ್ನು ಕಾಲೆಳೆಯುತ್ತಿದ್ದವರಿಗೆ ಮೊಹಮ್ಮದ್ ಸಿರಾಜ್ ಟೆಸ್ಟ್ ಪಂದ್ಯಗಳಲ್ಲಿ ತಮ್ಮ ಅತ್ಯದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಉತ್ತರ ನೀಡಿದ್ದಾರೆ. ತಮ್ಮ ಸಾಮರ್ಥ್ಯವನ್ನು ಅಳೆಯುತ್ತಿದ್ದವರಿಗೆ ತಮ್ಮ ಬೌಲಿಂಗ್‌ನ ನಿಜವಾದ ಸಾಮರ್ಥ್ಯವೇನು ಎಂಬುದನ್ನು ಮನವರಿಕೆ ಮಾಡಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಪಡೆದು ಮಿಂಚಿದ ಮೊಹಮ್ಮದ್ ಸಿರಾಜ್ ವಿಕೆಟ್ ಪಡೆದ ನಂತರ ತುಟಿಗಳ ಮೇಲೆ ಬೆರಳಿಟ್ಟು 'ಶ್..' ಎನ್ನುತ್ತಾ ವಿಭಿನ್ನವಾಗಿ ಸಂಭ್ರಮಾಚರಣೆಯನ್ನು ಮಾಡಿದ್ದರು. ಮೊಹಮ್ಮದ್ ಸಿರಾಜ್ ಮಾಡಿದ ಈ ಸಂಭ್ರಮಾಚರಣೆಯ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿದ್ದವು. ಇದೀಗ ಎರಡನೇ ಟೆಸ್ಟ್ ಪಂದ್ಯದ ನಂತರ ಮಾತನಾಡಿದ್ದ ಮೊಹಮ್ಮದ್ ಸಿರಾಜ್ ತಮ್ಮ ವಿಭಿನ್ನವಾದ ಸಂಭ್ರಮಾಚರಣೆಗೆ ಕಾರಣ ತಮ್ಮನ್ನು ದ್ವೇಷಿಸುವ ವಿರೋಧಿಗಳು ಎಂದಿದ್ದಾರೆ. ಈ ಹಿಂದೆ ತಮ್ಮ ಕಾಲೆಳೆದ ದ್ವೇಷಿಗಳಿಗೆ ಈ ರೀತಿಯ ಸಂಭ್ರಮಾಚರಣೆಯ ಮೂಲಕ ಉತ್ತರ ನೀಡುತ್ತೇನೆಂದು ಮೊಹಮ್ಮದ್ ಸಿರಾಜ್ ಹೇಳಿದ್ದರು.



ಇನ್ನು ಮೊಹಮ್ಮದ್ ಸಿರಾಜ್ ಈ ರೀತಿ ತುಟಿಗಳ ಮೇಲೆ ಬೆರಳಿಟ್ಟು ಮಾಡಿದ್ದ ಸಂಭ್ರಮಾಚರಣೆ ಸಖತ್ ವೈರಲ್ ಆಗಿದ್ದು ಹೈದರಾಬಾದ್ ನಗರದಲ್ಲಿ ಮೊಹಮ್ಮದ್ ಸಿರಾಜ್ ತುಟಿಗಳ ಮೇಲೆ ಬೆರಳಿಟ್ಟು ಸಂಭ್ರಮಾಚರಣೆ ಮಾಡುತ್ತಿರುವ ಕಟೌಟ್ ನಿಲ್ಲಿಸುವ ಮೂಲಕ ಸಿರಾಜ್ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಮೊಹಮ್ಮದ್ ಸಿರಾಜ್ ಅವರ ಈ ವಿಶಿಷ್ಟ ಕಟೌಟ್ ನಿಲ್ಲಿಸಿ ಅದಕ್ಕೆ ಹಾರ ಹಾಕಿ ಸಿರಾಜ್ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ಹೈದರಾಬಾದ್ ನಗರದಲ್ಲಿ ನಿಲ್ಲಿಸಲಾಗಿರುವ ಮೊಹಮ್ಮದ್ ಸಿರಾಜ್ ಅವರ ಕಟೌಟ್ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

(Kannada Copy of Mykhel Kannada)