ಎಂಜಲು ಕಾಸಿಗೆ ಅಡ್ಡಮತ ; ಸುಳ್ಯದಲ್ಲಿ ಛಾಟಿ ಬೀಸಿದವರಿಗೆ ಬಂಟ್ವಾಳ, ಪುತ್ತೂರಿನಲ್ಲಿ ಛಾಟಿ ಎತ್ತುವ ಛಾತಿ ಇದೆಯೇ..?!

03-03-21 05:32 pm       Mangalore Correspondent   ನ್ಯೂಸ್ View

ಬಿಜೆಪಿಯ ಅಧಿಕೃತ ಅಭ್ಯರ್ಥಿಗಳ ವಿರುದ್ಧವೇ ಸ್ವಾಭಿಮಾನಿ ಬಳಗ ಹೆಸರಲ್ಲಿ ಸ್ಪರ್ಧಿಸಿದ್ದ ಮತ್ತೊಂದು ಬಣ ನಾಲ್ಕು ಪಂಚಾಯತ್ ಗಳಲ್ಲಿ ಅಧಿಕಾರ ಗಿಟ್ಟಿಸುವಷ್ಟರ ಮಟ್ಟಿಗೆ ಬೆಳೆದಿದೆ.

ಮಂಗಳೂರು, ಮಾ.3: ಸಹಕಾರಿಗಳು ಸ್ವಾಹಕಾರಿಗಳಾಗಿ ಕೆಲವು ಕಾಲ ಆಗಿಹೋಯ್ತು. ಕಳೆದ ಬಾರಿ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕಿನ ಚುನಾವಣೆಯಲ್ಲಂತೂ ಸಹಕಾರಿಗಳು ಸ್ವಾಹಾಕಾರಕ್ಕೆ ಹೊಸ ಭಾಷ್ಯವನ್ನೇ ಬರೆದಿದ್ದರು. ಸಂಘ ಪರಿವಾರದ ಭದ್ರನೆಲೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿಯ ಕೆಲವು ಸದಸ್ಯರು ತಮ್ಮನ್ನೇ ಮಾರಿಕೊಂಡು ವಿರೋಧಿ ಪಡೆಯ ಗೆಲುವಿಗೆ ಕಾರಣವಾಗಿದ್ದರು. ಸಂಘಟನೆಯ ಬುಡಕ್ಕೇ ಕೊಳ್ಳಿ ಇಟ್ಟು ಮೆರೆದಾಡಿದ್ದರು. ಡಿಸಿಸಿ ಬ್ಯಾಂಕಿನ ಪ್ರಕರಣವಂತೂ ಸಂಘದ ನಾಯಕರಲ್ಲೇ ಎರಡು ಬಣಗಳಾಗಿ ಪರಸ್ಪರ ಕಚ್ಚಾಡುವಂತೆ ಮಾಡಿತ್ತು.

ಈ ರೀತಿಯ ಬೆಳವಣಿಗೆ ದ.ಕ. ಜಿಲ್ಲೆಯ ಸಂಘ ಪರಿವಾರ ಮತ್ತು ಅದರ ಮುಖಂಡರ ಪಾಲಿಗೆ ಭಾರೀ ಮುಖಭಂಗವೂ ಆಗಿತ್ತು. ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದ್ದಲ್ಲದೆ, ಅಡ್ಡ ಮತ ಹಾಕಿದ್ದವರನ್ನು ಸಂಘಟನೆಯಿಂದಲೇ ಉಚ್ಚಾಟಿಸಬೇಕೆಂಬ ಆಗ್ರಹವೂ ಕೇಳಿಬಂದಿತ್ತು. ಸುಳ್ಯದಲ್ಲಂತೂ ಭಿನ್ನಮತ ಏರ್ಪಟ್ಟು ಕಾನತ್ತೂರಿನಲ್ಲಿ ಆಣೆ ಪ್ರಮಾಣಕ್ಕೂ ಸಾಕ್ಷಿಯಾಗಿತ್ತು. ಬಿಜೆಪಿ ಮತ್ತು ಸಂಘ ಪರಿವಾರದಲ್ಲಿ ಎರಡು ಬಣಗಳೆದ್ದು ಬಹಿರಂಗವಾಗೇ ಕಾದಾಟಕ್ಕೆ ವೇದಿಕೆ ಸೃಷ್ಟಿಯಾಗಿತ್ತು. ಇದರ ಮೊದಲ ಪರಿಣಾಮ, ಕಳೆದ ಪಂಚಾಯತ್ ಚುನಾವಣೆಯಲ್ಲಿ ಸ್ಪಷ್ಟವಾಗಿ ಕಂಡಿತ್ತು. ಬಿಜೆಪಿಯ ಅಧಿಕೃತ ಅಭ್ಯರ್ಥಿಗಳ ವಿರುದ್ಧವೇ ಸ್ವಾಭಿಮಾನಿ ಬಳಗ ಹೆಸರಲ್ಲಿ ಸ್ಪರ್ಧಿಸಿದ್ದ ಮತ್ತೊಂದು ಬಣ ನಾಲ್ಕು ಪಂಚಾಯತ್ ಗಳಲ್ಲಿ ಅಧಿಕಾರ ಗಿಟ್ಟಿಸುವಷ್ಟರ ಮಟ್ಟಿಗೆ ಬೆಳೆದಿದೆ.

ತಮ್ಮದೇ ಒರಿಜಿನಲ್ ಎನ್ನುತ್ತಲೇ ಬಹಿರಂಗ ಸಮರ ಸಾರಿದ್ದ ಬೆಳವಣಿಗೆ ಭದ್ರಕೋಟೆ ಎಂದು ಹೆಸರಾಗಿದ್ದ ಸುಳ್ಯದ ಸಂಘಟನೆಯನ್ನು ಛಿದ್ರವಾಗಿಸಿದ ಸಂಕೇತ. ಇಂಥ ಬೆಳವಣಿಗೆಯ ಮಧ್ಯೆಯೇ ಸುಳ್ಯ ತಾಲೂಕಿನಲ್ಲಿ ನಾಲ್ವರು ಪ್ರಮುಖರನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿದೆ. ಆದರೆ, ಅಂದು ಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ಬಹಿರಂಗವಾಗೇ ಸಮರ ಸಾರಿದ್ದಲ್ಲದೆ, ಸಹಕಾರ ಭಾರತಿ ಅಭ್ಯರ್ಥಿಗಳ ವಿರುದ್ಧವೇ ಸ್ಪರ್ಧಿಸಿದ್ದ ಬಿಜೆಪಿ ನಾಯಕರಿದ್ದಾರೆ. ಬಂಟ್ವಾಳ ಮತ್ತು ಪುತ್ತೂರಿನಲ್ಲಿ ಬಿಜೆಪಿಯಲ್ಲಿ ಗುರುತಿಸಿಕೊಂಡು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸಿನ ರಾಜೇಂದ್ರ ಕುಮಾರ್ ಬಳಗಕ್ಕೆ ಮತ ನೀಡಿ, ನಾಯಕ ಮಣಿಗಳಿಗೇ ಸಡ್ಡು ಹೊಡೆದಿದ್ದ ಅನೇಕರಿದ್ದಾರೆ. ಅಂಥವರ ವಿರುದ್ಧ ಯಾಕೆ ಸಂಘದ ನಾಯಕರು ಚಾಟಿ ಬೀಸಿಲ್ಲ. ಬ್ಯಾಂಕ್ ಅಧ್ಯಕ್ಷನ ಎಂಜಲು ಕಾಸಿಗೆ ಕೈಯೊಡ್ಡಿದ ಪರಿವಾರದ ನಾಯಕರನ್ನು ಹಾಗೇ ಬಿಟ್ಟಿದ್ದು ಏನನ್ನು ಸೂಚಿಸುತ್ತದೆ ಎಂಬ ಮಾತನ್ನು ಕಾರ್ಯಕರ್ತರು ಕೇಳುತ್ತಿದ್ದಾರೆ.

ಸುಳ್ಯ, ಪುತ್ತೂರು ಹೇಗೊ, ಬಂಟ್ವಾಳ ಕೂಡ ಸಂಘ ಪರಿವಾರದ ಶಕ್ತಿಕೇಂದ್ರ. ಕಳೆದ ಬಾರಿ ಡಿಸಿಸಿ ಬ್ಯಾಂಕ್ ಚುನಾವಣೆ ಸಂದರ್ಭದಲ್ಲಿ ಬಂಟ್ವಾಳ ತಾಲೂಕಿನ ಮಟ್ಟಿಗೆ ಸಹಕಾರ ಭಾರತಿಗೆ ಸ್ಪಷ್ಟ ಬಹುಮತ ಇತ್ತು. ಒಟ್ಟು 27 ಸ್ಥಾನಗಳಲ್ಲಿ 21 ಕಡೆ ಸಹಕಾರ ಭಾರತಿಗೆ ಸೇರಿದ ವಿವಿಧ ಸೊಸೈಟಿಗಳ ಅಧ್ಯಕ್ಷರಿದ್ದರು. ಸ್ಪಷ್ಟ ಬಹುಮತ ಇದ್ದರೂ, 13-17 ಮತಗಳ ಅಂತರದಲ್ಲಿ ಸಹಕಾರ ಭಾರತಿ ಅಭ್ಯರ್ಥಿಗಳಿಗೆ ಬಂಟ್ವಾಳದಲ್ಲಿ ಸೋಲಾಗಿತ್ತು. ಉಲ್ಟಾ ಹೊಡೆದಿದ್ದ ಏಳೆಂಟು ಮಂದಿ ಯಾರೆನ್ನುವ ಬಗ್ಗೆ ಸಂಘದ ನಾಯಕರಿಗೂ ಗೊತ್ತಾಗಿತ್ತು. ಕೆಲವರು ತಮಗೆ ಎರಡರಿಂದ ನಾಲ್ಕು ಲಕ್ಷ ರೂ. ಸಿಕ್ಕಿದ್ದ ಬಗ್ಗೆ ಬಹಿರಂಗವಾಗೇ ಹೇಳ್ಕೊಂಡು ತಿರುಗಾಡಿದ್ದೂ ಕೇಳಿಬಂದಿತ್ತು. ವಿಚಿತ್ರ ಎಂದರೆ, ಹೀಗೆ ಸಂಘ ಪರಿವಾರಕ್ಕೇ ಉಲ್ಟಾ ಹೊಡೆದ ಒಬ್ಬರಿಗಂತೂ ಮತ್ತೊಂದು ಗಿಫ್ಟ್ ಸಿಕ್ಕಿದೆ. ಕೈರಂಗಳ ಮೂಲದ ಒಬ್ಬರು ಈ ಬಾರಿ ಕ್ಯಾಂಪ್ಕೋ ನಿರ್ದೇಶಕ ಸ್ಥಾನಕ್ಕೆ ಭಡ್ತಿ ಹೊಂದಿದ್ದಾರೆ.

ಈ ರೀತಿ ಆರೋಪಕ್ಕೊಳಗಾದವರಲ್ಲಿ ಪುದು ಭಾಗದಲ್ಲಿ ಕಂಬಳಿ ಹೊದ್ದು ಕಣ್ಣು ಮುಚ್ಚಿ ಹಾಲುಂಡವರಿದ್ದಾರೆ. ಬಿಜೆಪಿ ಜಿಲ್ಲಾ ಉಪಾಧ್ಯಕ್ಷನ ಸ್ಥಾನದಲ್ಲಿದ್ದವರೂ ಇದ್ದಾರೆ. ಆರೆಸ್ಸೆಸ್ ಜಿಲ್ಲಾ ಜವಾಬ್ದಾರಿ ಹೊತ್ತ ಮೀಸೆ ಮಾಮನೂ ಇದ್ದಾರೆ. ಹೆಸರಿನ ಜೊತೆ ಪೊಳಲಿ ಕ್ಷೇತ್ರದ ಹೆಸರನ್ನೇ ಇಟ್ಟುಕೊಂಡವರಿದ್ದಾರೆ. ಬಂಟ್ವಾಳ ಶಾಸಕರ ಆಪ್ತ ಬೆಳ್ಳೂರಿನವರಿದ್ದಾರೆ. ಪಿಲಾತಬೆಟ್ಟು, ವಾಮದಪದವು, ಪಾಣೆಮಂಗಳೂರಿನವರಿದ್ದಾರೆ. ಇವರೆಲ್ಲ ತಮ್ಮ ಅಭ್ಯರ್ಥಿಗಳ ವಿರುದ್ಧ ಅಡ್ಡಮತ ಹಾಕಿ, ಪ್ರತಿಸ್ಪರ್ಧಿಯ ಗೆಲುವಿಗೆ ಕಾರಣವಾಗಿದ್ದರೆಂಬ ಆರೋಪ ಹೊತ್ತಿದ್ದಾರೆ.

ಪುತ್ತೂರು ತಾಲೂಕಿನಲ್ಲೂ ಅಷ್ಟೇ. ಒಟ್ಟು 18 ಸ್ಥಾನಗಳಲ್ಲಿ 13ರಷ್ಟು ಸಹಕಾರ ಭಾರತಿಯವರಿದ್ದರು. ರಾಜೇಂದ್ರ ಬಳಗದ ಕಾಂಗ್ರೆಸ್ ಪಾಲಿಗಿದ್ದದ್ದು 5 ಸ್ಥಾನಗಳಷ್ಟೇ. ಐದು ಮಂದಿ ಕ್ರಾಸ್ ಮಾಡಿ ವಿರೋಧಿಗಳನ್ನು ಗೆಲ್ಲಿಸಿದ್ದರು. ಬಿಜೆಪಿ ಕ್ಷೇತ್ರ ಸಮಿತಿ ಸದಸ್ಯರಾಗಿರುವ ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಹಿರಂಗವಾಗೇ ರಾಜೇಂದ್ರ ಕುಮಾರ್ ಬಳಗದಲ್ಲಿ ಸ್ಪರ್ಧಿಸಿ, ಸಂಘ ಪರಿವಾರಕ್ಕೆ ಸಡ್ಡು ಹೊಡೆದಿದ್ದರು. ಇದೇ ರೀತಿ, ಬಂಟ್ವಾಳದ ಮಂಗಳೂರು ವಲಯದ ಮುಡಿಪಿನಲ್ಲಿ ಬಿಜೆಪಿ ಕ್ಷೇತ್ರ ಸಮಿತಿ ಉಪಾಧ್ಯಕ್ಷನಾಗಿರುವ ರಾಜಾರಾಮ ಭಟ್ ಕೂಡ ಬಹಿರಂಗವಾಗೇ ರಾಜೇಂದ್ರ ಬಳಗದ ಪರವಾಗಿ ಸ್ಪರ್ಧಿಸಿದ್ದರು. ಇದೆಲ್ಲ ನಡೆದಿದ್ದರೂ, ಬಿಜೆಪಿ ಮತ್ತು ಸಂಘ ಪರಿವಾರದಲ್ಲಿ ಗುರುತಿಸಿಕೊಂಡಿರುವ ಅಷ್ಟೂ ಮಂದಿಯ ವಿರುದ್ಧ ಯಾವುದೇ ಕ್ರಮ ಆಗಿಲ್ಲ. ಅಲ್ಲದೆ, ಹೀಗೆ ಅಡ್ಡ ಮತ ಹಾಕಿದ್ದಾರೆ ಎನ್ನಲಾದವರೇ ಮತ್ತಷ್ಟು ಪ್ರಭಾವಿಗಳಾಗುತ್ತಿದ್ದಾರೆ.

ಸುಳ್ಯದಲ್ಲಿ ರಾಜೇಂದ್ರ ಕುಮಾರ್ ಬಳಗಕ್ಕೆ ಮತ ಹಾಕಿದ್ದಾರೆ ಎನ್ನಲಾಗಿದ್ದ ನಾಲ್ವರನ್ನು ಈಗ ಉಚ್ಚಾಟಿಸಲಾಗಿದೆ. ಬಿಜೆಪಿ ಶಕ್ತಿಕೇಂದ್ರ ಆಗಿರುವ ಬಂಟ್ವಾಳ, ಪುತ್ತೂರಿನಲ್ಲೂ ಇದೇ ರೀತಿಯ ಛಾಟಿ ಬೀಸುವ ಧೈರ್ಯ ಸಂಘ ಪರಿವಾರದ ನಾಯಕರಿಗಿದೆಯೇ ಎನ್ನುವ ಪ್ರಶ್ನೆಯನ್ನು ಕಾರ್ಯಕರ್ತರು ಮುಂದಿಡುತ್ತಿದ್ದಾರೆ. ಬಿಜೆಪಿ, ಸಂಘ ಪರಿವಾರದಲ್ಲಿ ಜವಾಬ್ದಾರಿ ಇದ್ದುಕೊಂಡು ಹಣಕ್ಕಾಗಿ ಮಾರಿಕೊಂಡಿದ್ದು ಗೊತ್ತಿದ್ದರೂ, ಕ್ರಮ ತೆಗೆದುಕೊಳ್ಳದ ಸ್ಥಿತಿಯಲ್ಲಿ ನಾಯಕರಿದ್ದಾರೆ. ಇದರೊಳಗಿನ ಗುಟ್ಟು ಏನೆನ್ನುವುದು ಸುಲಭದಲ್ಲಿ ಹೊರಗೆ ಬರದು.. ಆದರೆ, ಈ ರೀತಿಯ ಬೆಳವಣಿಗೆ ಮಾತ್ರ ಜವಾಬ್ದಾರಿ ಹೊತ್ತ ನಾಯಕರ ವೈಫಲ್ಯಕ್ಕೆ ಕನ್ನಡಿ ಅಷ್ಟೇ..

An internal clash has erupted inside the BJP party of Mangalore after knowing that many of the members are supporting Congress leaders behind the scene.