ಮಂಗಳೂರು- ಬೆಂಗಳೂರು ರೈಲಿನಲ್ಲಿ ದರೋಡೆ ; ಎಂಟು ಲಕ್ಷದ ಚಿನ್ನಾಭರಣಗಳಿದ್ದ ಮಹಿಳೆಯ ಬ್ಯಾಗ್ ಕಿತ್ತು ಪುತ್ತೂರಿನಲ್ಲಿ ಪರಾರಿ

30-08-22 06:06 pm       Mangalore Correspondent   ಕ್ರೈಂ

ಬೆಂಗಳೂರಿನಿಂದ ಕಾರವಾರಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬರ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಇದ್ದ ವ್ಯಾನಿಟಿ ಬ್ಯಾಗನ್ನು ಕಳವುಗೈದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಪುತ್ತೂರು, ಆಗಸ್ಟ್ 30: ಬೆಂಗಳೂರಿನಿಂದ ಕಾರವಾರಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬರ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಇದ್ದ ವ್ಯಾನಿಟಿ ಬ್ಯಾಗನ್ನು ಕಳವುಗೈದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಸೋಮವಾರ ರಾತ್ರಿ 8 ಗಂಟೆಗೆ ಬೆಂಗಳೂರಿನಿಂದ ಹೊರಟಿದ್ದ ರೈಲು ಮಧ್ಯರಾತ್ರಿ 2.30ರ ಸುಮಾರಿಗೆ ಪುತ್ತೂರು ರೈಲು ನಿಲ್ದಾಣಕ್ಕೆ ತಲುಪಿತ್ತು. ರೈಲು ಇನ್ನೇನು ಹೊರಡಿ ಸ್ವಲ್ಪ ಮುಂದೆ ಸಾಗುವಷ್ಟರಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಕೈಯಲ್ಲಿದ್ದ ವ್ಯಾನಿಟಿ ಬ್ಯಾಗನ್ನು ಕಿತ್ತುಕೊಂಡು ಓಡಿದ್ದಾನೆ.

ಬೆಂಗಳೂರಿನಲ್ಲಿ ವಾಸವಿರುವ ಕಾರವಾರ ಮೂಲದ ಶಿಕ್ಷಕ ದಂಪತಿ ರಮೇಶ್ ಮತ್ತು ನಿರ್ಮಲಾ ಚಿನ್ನಾಭರಣ ಕಳಕೊಂಡವರು. ನಿರ್ಮಲಾ ಅವರು ತಾನು ಮಲಗಿದ್ದ ತಲೆದಿಂಬಿನ ಅಡಿಯಲ್ಲಿ ಬ್ಯಾಗನ್ನು ಇರಿಸಿಕೊಂಡಿದ್ದರು. ಇದನ್ನು ಮೊದಲೇ ಗಮನಿಸಿದ್ದ ವ್ಯಕ್ತಿಯೊಬ್ಬ ವ್ಯಾನಿಟಿ ಬ್ಯಾಗನ್ನು ಹಿಡಿದೆಳೆದಿದ್ದಾನೆ. ಇಷ್ಟರಲ್ಲಿ ರೈಲು ಪುತ್ತೂರು – ಹಾರಾಡಿ ಬ್ರಿಡ್ಜ್ ದಾಟಿ ಮುಂದೆ ಸಿಟಿ ಗುಡ್ಡೆ ತಲುಪಿತ್ತು. ಮಹಿಳೆ ಗಾಬರಿಗೊಂಡು ಆತನನ್ನು ಬೆನ್ನತ್ತಿದ್ದು ಆಗಂತುಕ ರೈಲಿನಿಂದ ಹೊರಕ್ಕೆ ಹಾರಲು ಯತ್ನಿಸಿದ್ದಾನೆ. ಇದೇ ವೇಳೆ, ಮಹಿಳೆ ಬೊಬ್ಬೆ ಹೊಡೆಯುತ್ತಾ ರೈಲಿನ ಚೈನ್ ಎಳೆದಿದ್ದಾರೆ.

ರೈಲು ನಿಧಾನವಾಗುತ್ತಲೇ ವ್ಯಕ್ತಿ ಹೊರಕ್ಕೆ ಹಾರಿದ್ದು, ಕತ್ತಲೆಯಲ್ಲಿ ಪರಾರಿಯಾಗಿದ್ದಾನೆ. ಇದೇ ಮಹಿಳೆಯೂ ಆತನ ಜೊತೆಗೆ ರೈಲಿನಿಂದ ಹಾರಿದ್ದು, ಹಳಿಯ ಮೇಲೆ ಬಿದ್ದು ಗಾಯಗೊಂಡಿದ್ದಾರೆ. ವ್ಯಕ್ತಿ ಕತ್ತಲಲ್ಲಿ ದೂರಕ್ಕೆ ಓಡಿ ಪರಾರಿಯಾಗಿದ್ದ. ಗಾಯಗೊಂಡ ಮಹಿಳೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ದಂಪತಿ ದೂರಿನಂತೆ, 40 ಸಾವಿರ ರೂ. ನಗದು ಮತ್ತು ಚಿನ್ನಾಭರಣ ಸೇರಿ ಒಟ್ಟು 8 ಲಕ್ಷ ಮೌಲ್ಯದ ಸೊತ್ತು ಕಳವುಗೈದ ಬಗ್ಗೆ ಮಂಗಳೂರು ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Robbery in mangalore bangalore train, Vanity bag and gold ornaments worth lakhs stolen near Puttur