ಫ್ರೀ ಫೈರ್ ಗೇಮ್ ಚಟ ; ಅಕ್ಕನ ಮಗನ ಕೊಂದಿದ್ದ ಮಾವ, ಪ್ರಾಯಶ್ಚಿತ್ತಕ್ಕೆ ಪುಣ್ಯಕ್ಷೇತ್ರ ದರ್ಶನ, ಬಿಹಾರ ತೆರಳಿದ್ದ ಬೆಂಗಳೂರಿನ ನಾಲ್ವರ ಕುಟುಂಬ ಆತ್ಮಹತ್ಯೆ! 

07-02-26 10:48 pm       HK News Desk   ಕ್ರೈಂ

ನಗರದ ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯ ಒಂದೇ ಕುಟುಂಬದ ನಾಲ್ಕು ಮಂದಿ ಬಿಹಾರದ ನಲಂದಾ ಜಿಲ್ಲೆಯ ಧರ್ಮಶಾಲೆಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರು, ಫೆ.7: ನಗರದ ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯ ಒಂದೇ ಕುಟುಂಬದ ನಾಲ್ಕು ಮಂದಿ ಬಿಹಾರದ ನಲಂದಾ ಜಿಲ್ಲೆಯ ಧರ್ಮಶಾಲೆಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೆಲವು ತಿಂಗಳ ಹಿಂದೆ ಫ್ರೀಫೈರ್ ವಿಡಿಯೋ ಗೇಮ್ ಅಡಿಕ್ಟ್ ಆಗಿದ್ದ ತನ್ನ ಅಕ್ಕನ ಮಗನನ್ನು ಕೊಲೆ ಮಾಡಿ ಜೈಲು ಸೇರಿದ್ದ ನಾಗಪ್ರಸಾದ್ ಸೇರಿ ನಾಲ್ವರು ಸಾವಿಗೆ ಶರಣಾಗಿದ್ದಾರೆ. 

ಮೃತರನ್ನು ಸುಮಂಗಲ (78), ಅವರ ಪುತ್ರಿಯರಾದ ಶಿಲ್ಪಾ (48) ಮತ್ತು ಶ್ರುತಾ ಜಿ.ಬಿ. (43) ಮತ್ತು ಮಗ ನಾಗಪ್ರಸಾದ್ (50) ಎಂದು ಗುರುತಿಸಲಾಗಿದೆ. ಇವರು ತುಮಕೂರು ಜಿಲ್ಲೆಯ ಗುಬ್ಬಿ ಮೂಲದ ಜೈನ ಸಂಪ್ರದಾಯದ ನಿವಾಸಿಗಳಾಗಿದ್ದು, ಕೆಲವು ವರ್ಷಗಳಿಂದ ಬೆಂಗಳೂರಿನ ಸೋಲದೇವನಹಳ್ಳಿ ವ್ಯಾಪ್ತಿಯಲ್ಲಿ ವಾಸವಾಗಿದ್ದರು. 

ಫ್ರೀಫೈರ್​ ಗೇಮ್​​ ಚಟಕ್ಕೆ ಬಿದ್ದು ಹಣಕ್ಕಾಗಿ ಪೀಡಿಸುತ್ತಿದ್ದ ಅಕ್ಕನ ಮಗ ಅಮೋಘ ಕೀರ್ತಿಯನ್ನು ಮಾವ ನಾಗಪ್ರಸಾದ್​​​ ಕಳೆದ ವರ್ಷ ಆಗಸ್ಟ್​ 8ರಂದು ಕತ್ತು ಸೀಳಿ ಕೊಲೆ ಮಾಡಿದ್ದ ಘಟನೆ ನಡೆದಿತ್ತು. ಬಾಲಕನ ಮೃತದೇಹ‌ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಘಟನೆಯ ಬಳಿಕ ಮೆಜೆಸ್ಟಿಕ್‌ನಲ್ಲಿ ಮೂರು ದಿನ ತಂಗಿದ್ದ ನಾಗಪ್ರಸಾದ್, ನಂತರ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ಸರೆಂಡರ್ ಆಗಿದ್ದ. ಪೊಲೀಸರು ಆತನ ಮೇಲೆ ಎಫ್​ಐಆರ್ ದಾಖಲಿಸಿ ಜೈಲಿಗಟ್ಟಿದ್ದರು. ಬಳಿಕ ಆತನ ತಂಗಿ ಶಿಲ್ಪಾನೇ ಮಗ ಹೇಗೂ ಹೋದ, ಅಣ್ಣನಾದ್ರೂ ಜೊತೆಗಿರಲಿ ಎಂದು ಜಾಮೀನು ಕೊಡಿಸಿ ಜೈಲಿನಿಂದ ಹೊರ ತಂದಿದ್ದಳು. 

ಅಕ್ಕನ ಮಗ ಅಮೋಘ ಕೀರ್ತಿಯನ್ನು ಕೊಂದ ಪಾಪ ಪರಿಹಾರಕ್ಕಾಗಿ ಇಡೀ ಕುಟುಂಬ ಕೆಲವು ತಿಂಗಳಿಂದ ದೇವಾಲಯಗಳಿಗೆ ಭೇಟಿ ನೀಡುತ್ತಿತ್ತು ಎಂದು ತಿಳಿದುಬಂದಿದೆ. ಆನಂತರ, ಉತ್ತರ ಭಾರತದ ವಿವಿಧ ಕಡೆಗೆ ತೆರಳಿ ಬಿಹಾರಕ್ಕೆ ತಲುಪಿದ್ದರು. ಅಲ್ಲಿ ಜೈನ ಮತಸ್ಥರ ಧರ್ಮಶಾಲೆಯಲ್ಲಿ ತಂಗಿದ್ದಾಗ ಸಾವಿಗೆ ಶರಣಾಗಿದ್ದಾರೆ. ಮೃತ ಶರೀರಗಳ ಬಳಿ ನಿದ್ದೆ ಮಾತ್ರೆಗಳು ಸಿಕ್ಕಿದ್ದು, ಮಾತ್ರೆಗಳ ಓವರ್ ಡೋಸ್​ನಿಂದಲೇ ಕುಟುಂಬ ಮೃತಪಟ್ಟಿದೆ ಎನ್ನಲಾಗಿದೆ.