12 ಲಕ್ಷ ಬಹುಮಾನದ ಆಸೆಗೆ ಬಿದ್ದು 26 ಲಕ್ಷ ರೂ. ಕಳಕೊಂಡ ಮೂರ್ಖ..!

09-10-20 12:56 pm       Udupi Correspondent   ಕ್ರೈಂ

ನ್ಯಾಪ್‌ಟಾಲ್ ಕಂಪೆನಿ ಹೆಸರಿನಲ್ಲಿ 12 ಲಕ್ಷದ ಆಸೆಗೆ ಬಿದ್ದು ಬರೋಬ್ಬರಿ 26,47,650 ರೂಪಾಯಿ ಕಳೆದುಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿ, ಅಕ್ಟೋಬರ್ 09 : ಆನ್ ಲೈ‌ನ್ ವಂಚನೆ ಬಗ್ಗೆ ಎಷ್ಟೇ ಪ್ರಕರಣಗಳು ವರದಿಯಾದರೂ, ಜನ ಎಚ್ಚತ್ತುಕೊಳ್ಳಲ್ಲ. ಇಲ್ಲೊಬ್ಬರು ನ್ಯಾಪ್‌ಟಾಲ್ ಕಂಪೆನಿ ಹೆಸರಿನಲ್ಲಿ 12 ಲಕ್ಷದ ಆಸೆಗೆ ಬಿದ್ದು ಬರೋಬ್ಬರಿ 26,47,650 ರೂಪಾಯಿ ಕಳಕೊಂಡಿದ್ದಾರೆ. 

ಉಡುಪಿಯ ನಾಗರಾಜ್‌ ಭಟ್‌ ಅವರ ವಿಳಾಸಕ್ಕೆ ನ್ಯಾಪ್‌ಟಾಲ್‌ ಕಂಪನಿ ಹೆಸರಿನಲ್ಲಿ ಸ್ಕ್ರಾಚ್‌ ಕೂಪನ್ ಬಂದಿತ್ತು. ಅದರಲ್ಲಿ ನೀವು ರೂಪಾಯಿ 12 ಲಕ್ಷ ಬಹುಮಾನ ಗೆದ್ದಿದ್ದೀರಿ, ಅದನ್ನು ಪಡೆಯಲು ನಮ್ಮನ್ನು ಸಂಪರ್ಕಿಸುವಂತೆ ತಿಳಿಸಿದ್ದರು. ಪತ್ರದಲ್ಲಿದ್ದ ಮೊಬೈಲ್‌ ಸಂಖ್ಯೆಗೆ ನಾಗರಾಜ್ ಕರೆ ಮಾಡಿದ್ದು ಬಹುಮಾನದ ಹಣ ಪಡೆಯಲು ನೋಂದಣಿ ಶುಲ್ಕ 12,೦೦೦ ರೂ. ತೆರಬೇಕು ಎಂದು ತಿಳಿಸಿದ್ದರು. 

ಅದರಂತೆ, 2019ರ ಎ.4ರಂದು ನಾಗರಾಜ್, 12 ಸಾವಿರ ರೂ. ಖಾತೆಗೆ ಪಾವತಿಸಿದ್ದರು. ಅನಂತರ ಅಮಿತ್‌ ಬಿಸ್ವಾಸ್‌, ಚೇತನ್‌ ಕುಮಾರ್‌ ಎಂಬವರು, ಬೇರೆ ಸಂಖ್ಯೆಗಳಿಂದ ಕರೆ ಮಾಡಿ ತಾವು ನ್ಯಾಪ್ಟಲ್‌ ಕಂಪೆನಿಯಿಂದ ಮಾತನಾಡುತ್ತಿರುವುದಾಗಿ ನಂಬಿಸಿದ್ದರು. ಅಲ್ಲದೆ, 12 ಲಕ್ಷ ಬಹುಮಾನದ ಮೊತ್ತ ಪಡೆಯಲು ಜಿಎಸ್ ಟಿ, ಚಾರ್ಜ್ ಅಂತ ಶುಲ್ಕ ಕಟ್ಟಬೇಕು ಎಂದು ನಂಬಿಸಿದ್ದರು. ಹೀಗೆ ನಾಗರಾಜ್ ಭಟ್, 2019ರ ಎ.4ರಿಂದ ಜು.28ರ ನಡುವೆ ಜಿ.ಎಸ್‌.ಟಿ. ತೆರಿಗೆ, ವೆರಿಫಿಕೇಶನ್‌ ಚಾರ್ಜ್‌, ಸಬ್‌ಚಾರ್ಜ್ ಎಂದು ಒಟ್ಟು 26,47,650 ರೂ. ಮೊತ್ತವನ್ನು ವಿವಿಧ ಖಾತೆಗಳಿಗೆ ಜಮೆ ಮಾಡಿದ್ದಾರೆ.  

ಕೊನೆಗೆ, ನಾಗರಾಜ್ ಭಟ್‌ ತಾನು ಮೋಸ ಹೋಗಿದ್ದು ಅರಿವಾಗಿದ್ದು ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ವಂಚಕರ ವಿರುದ್ಧ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Man looses 26 lakhs in online fraud later registers case in cyber crime. The victim has been identified as Nagraj Bhat from Udupi.