ಬಂಟ್ವಾಳ ; ತುಳು ಚಿತ್ರನಟ ಸುರೇಂದ್ರ ಬಂಟ್ವಾಳ್ ಹತ್ಯೆ ; ಸ್ನೇಹಿತರಿಂದಲೇ ಕೊಲೆ ಶಂಕೆ !!

21-10-20 02:23 pm       Mangaluru Correspondent   ಕ್ರೈಂ

ತುಳು ಚಿತ್ರನಟ, ಕಾಂಗ್ರೆಸ್ ಕಾರ್ಯಕರ್ತ ಸುರೇಂದ್ರ ಬಂಟ್ವಾಳ್ ಎಂಬವರನ್ನು ಬರ್ಬರ ಹತ್ಯೆ ಮಾಡಲಾಗಿದೆ. 

ಮಂಗಳೂರು, ಅಕ್ಟೋಬರ್ 21: ತುಳು ಚಿತ್ರನಟ, ರೌಡಿ ಶೀಟರ್ ಆಗಿದ್ದ ಸುರೇಂದ್ರ ಬಂಟ್ವಾಳ್ ಅವರನ್ನು ಭೀಕರವಾಗಿ ಕಡಿದು ಹತ್ಯೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ ರೋಡ್ ಬಳಿಯ ಭಂಡಾರಿಬೆಟ್ಟುವಿನ ಅಪಾರ್ಟ್ಮೆಂಟ್ ಒಂದರಲ್ಲಿ ಕೃತ್ಯ ನಡೆದಿದೆ.

ನಿನ್ನೆ ರಾತ್ರಿ ಮನೆಗೆ ನುಗ್ಗಿ ಯಾರೋ ದುಷ್ಕರ್ಮಿಗಳು ಕೊಲೆಗೈದಿದ್ದಾರೆ ಎನ್ನಲಾಗುತ್ತಿದೆ. ಚಾಕು ಇರಿದು ಕೊಲೆಗೈದಿರುವ ಸ್ಥಿತಿಯಲ್ಲಿ ಶವ ಮನೆಯ ಒಳಗಿನ ಸೋಫಾದಲ್ಲಿ ಇಂದು ಮಧ್ಯಾಹ್ನ ಪತ್ತೆಯಾಗಿದೆ. ಬೆಳಗ್ಗಿನಿಂದಲೂ ಮನೆಯ ಬಾಗಿಲು ತೆರೆಯದ ಹಿನ್ನೆಲೆ ಸ್ಥಳೀಯರು ಪರಿಶೀಲಿಸಿದಾಗ ಶವ ಪತ್ತೆಯಾಗಿದೆ. ಮನೆಯ ಬಾಗಿಲು ಎಳೆದುಕೊಂಡ ರೀತಿ ಇತ್ತು. ಸುರೇಂದ್ರ ಬಂಟ್ವಾಳ್ ಅವಿವಾಹಿತನಾಗಿದ್ದು ಈ ಫ್ಲಾಟ್ ನಲ್ಲಿ ಒಬ್ಬಂಟಿಯಾಗಿ ಇರುತ್ತಿದ್ದ. 

ಮನೆಯ ಒಳಗೆ ಪರಿಶೀಲನೆ ವೇಳೆ ನಿನ್ನೆ ರಾತ್ರಿ ಪಾರ್ಟಿ ನಡೆಸಿರುವಂತೆ ಕಂಡುಬರುತ್ತಿದೆ. ಹೀಗಾಗಿ ಕೊಲೆಯಲ್ಲಿ ಸ್ನೇಹಿತರದ್ದೇ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ರಾತ್ರಿಯೇ ಕೊಲೆ ನಡೆಸಿ ಹೋಗಿದ್ದಾರೆಯೇ ಅಥವಾ ಬೆಳಗ್ಗೆ ಯಾರಾದ್ರೂ ಮನೆಗೆ ಬಂದು ಹತ್ಯೆ ನಡೆಸಿದ್ದಾರೆಯೇ ಎನ್ನುವ ನೆಲೆಯಲ್ಲಿ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ. 

ಬಂಟ್ವಾಳ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಹಿಂದೆ ಬಂಟ್ವಾಳದಲ್ಲಿ ರೌಡಿ ಶೀಟರ್ ಆಗಿದ್ದ ಸುರೇಂದ್ರ ಭಂಡಾರಿ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಹಲವು ಕೇಸುಗಳಿವೆ. ಆಬಳಿಕ ತುಳು ಚಿತ್ರರಂಗದಲ್ಲಿ ತೊಡಗಿಸಿದ್ದ ಸುರೇಂದ್ರ ಬಂಟ್ವಾಳ್, ಚಾಲಿಪೋಲಿಲು ಚಿತ್ರದಲ್ಲಿ ನಟಿಸಿದ್ದರು. ಇತ್ತೀಚೆಗೆ ಸವರ್ಣ ದೀರ್ಘ ಸಂಧಿ ಚಿತ್ರದಲ್ಲಿ ಸುರೇಂದ್ರ ನಟಿಸಿದ್ದು ಚಿತ್ರ ಬಿಡುಗಡೆಗೆ ರೆಡಿಯಾಗಿತ್ತು.

ಮಂಗಳೂರಿನಲ್ಲಿ ಫೈನಾನ್ಸ್ ಕೂಡ ಮಾಡಿಕೊಂಡಿದ್ದ ಸುರೇಂದ್ರ, ಎರಡು ವರ್ಷಗಳ ಹಿಂದೆ ಬಂಟ್ವಾಳದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ತಲವಾರು ಬೀಸಿ ಬಂಧನಕ್ಕೊಳಗಾಗಿದ್ದ. ಆನಂತರ ಜಾಮೀನಿನಲ್ಲಿ ಬಿಡುಗಡೆಯಾಗಿದ್ದರು.

Video: 

Tulu Actor and Rowdy sheeter Surendra Bantwal was hacked to death in broad day light on Wednesday October 21. The incident took place at at Vasti Katta, Bastipadpu.