Udupi Police, Chaddi Gang: ಉಡುಪಿಗೆ ಎಂಟ್ರಿ ಕೊಟ್ಟ ಚಡ್ಡಿ ಗ್ಯಾಂಗ್ ; ಮಧ್ಯಪ್ರದೇಶ ಮೂಲದ ಕಳ್ಳರಿಬ್ಬರ ಸೆರೆ, ಮಳೆಗಾಲದಲ್ಲಿ ಬೀಗ ಹಾಕಿದ ಮನೆಗಳೇ ಟಾರ್ಗೆಟ್ ! 

23-07-25 11:36 am       Udupi Correspondent   ಕ್ರೈಂ

ಉಡುಪಿಯ 76 ಬಡಗುಬೆಟ್ಟು ಗ್ರಾಮದ ಮಿಷನ್ ಕಾಂಪೌಂಡ್‌ನ ಪಿಡಬ್ಲ್ಯೂಡಿ ಕ್ವಾರ್ಟಸ್‌ ನಲ್ಲಿ ಎರಡು ದಿನ ಹಿಂದೆ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಪೊಲೀಸರು ಇಬ್ಬರು ಅಂತಾರಾಜ್ಯ ಮನೆಗಳ್ಳರನ್ನು ಬಂಧಿಸಿ, ಸಾವಿರಾರು ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿದ್ದಾರೆ.

Photo credits : Representative Image

ಉಡುಪಿ, ಜುಲೈ 23 : ಉಡುಪಿಯ 76 ಬಡಗುಬೆಟ್ಟು ಗ್ರಾಮದ ಮಿಷನ್ ಕಾಂಪೌಂಡ್‌ನ ಪಿಡಬ್ಲ್ಯೂಡಿ ಕ್ವಾರ್ಟಸ್‌ ನಲ್ಲಿ ಎರಡು ದಿನ ಹಿಂದೆ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಪೊಲೀಸರು ಇಬ್ಬರು ಅಂತಾರಾಜ್ಯ ಮನೆಗಳ್ಳರನ್ನು ಬಂಧಿಸಿ, ಸಾವಿರಾರು ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿದ್ದಾರೆ.

ಮಧ್ಯಪ್ರದೇಶ ಧಾರ್ ಜಿಲ್ಲೆಯ ಕುಷ್ಠಿ ತಾಲೂಕು ನಿವಾಸಿಗಳಾದ ಬಂಗಡ ಯಾನೆ, ಬಾಂಗು ಯಾನೆ ರಮೇಶ್ ಜವಾನ್ ಸಿಂಗ್ (37) ಹಾಗೂ ಕಾಲಿಯಾ ಯಾನೆ ಕಾಲು (25) ಬಂಧಿತರು. ಇನ್ನೊಬ್ಬ ಆರೋಪಿ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದಾನೆ.

ಜು.19ರ ಸಂಜೆ 6 ಗಂಟೆಯಿಂದ ಜು.20ರ ಬೆಳಗ್ಗೆ 7 ಗಂಟೆಯ ನಡುವೆ ಉಡುಪಿ ತಾಲೂಕು 76 ಬಡಗುಬೆಟ್ಟು ಗ್ರಾಮದ ಮಿಷನ್ ಕಾಂಪೌಂಡ್‌ ಪಿಡಬ್ಲ್ಯೂಡಿ ಕ್ವಾರ್ಟಸ್ ನಲ್ಲಿ ಕಳವು ನಡೆದಿತ್ತು. ಸೌರ್ಪಣಿಕ ಬಿ ಬ್ಲಾಕ್ ನಲ್ಲಿರುವ ಕುಶಲ ಎಚ್. ಅವರ ಮನೆಯ ಬಾಗಿಲು ಮುರಿದು ನುಗ್ಗಿದ್ದ ಕಳ್ಳರು ಕಪಾಟು ಬೀಗ ತೆರೆದು ಒಂದು ಜತೆ ಬೆಳ್ಳಿಯ ಕಾಲುಗೆಜ್ಜೆ-40 ಗ್ರಾಂ, ಒಂದು ಜತೆ ಬೆಳ್ಳಿಯ ಕಾಲುಗೆಜ್ಜೆ 20 ಗ್ರಾಂ, ಒಂದು ಜತೆ ಬೆಳ್ಳಿಯ ಸೊಂಟದ ನೇವಳ-30 ಗ್ರಾಂ, ಒಂದು ಜತೆ ಬೆಳ್ಳಿಯ ಕೈ ಬಳೆ-20 ಗ್ರಾಂ ಸಹಿತ 12 ಸಾವಿರ ರೂ. ಮೌಲ್ಯದ ಬೆಳ್ಳಿ ಹಾಗೂ 1,700 ರೂ. ನಗದು ಕಳವು ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿತ್ತು. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್ ನಾಯ್ಕ ಹಾಗೂ ಡಿವೈಎಸ್ಪಿ ಪ್ರಭು ಡಿ.ಟಿ ನೇತೃತ್ವದಲ್ಲಿ ಉಡುಪಿ ನಗರ ಠಾಣೆ ಇನ್ಸ್ ಪೆಕ್ಟರ್ ಮಂಜುನಾಥ ಬಡಿಗೇರ ಅವರ ತಂಡ ತನಿಖೆ ಆರಂಭಿಸಿತ್ತು. 

ಪೊಲೀಸರು ಸಿಸಿಟಿವಿ ದೃಶ್ಯಾವಳಿ ಪರೀಶೀಲಿಸಿ ಮಾಹಿತಿ ಕಲೆ ಹಾಕಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಕಾಲು ಗೆಜ್ಜೆ, ಸೊಂಟದ ನೇವಳ, ಕೈ ಬಳೆ, ಕಾಲುಂಗುರ, ಸೊಂಟದ ಪಟ್ಟಿ, ಬಟ್ಟಲು, ಕಡಗ ಮತ್ತು ಬ್ರೇಸ್‌ಲೆಟ್ ಸೇರಿ ಒಟ್ಟು 80,970 ರೂ. ಮೌಲ್ಯದ ಬೆಳ್ಳಿಯ ಸೊತ್ತು, 4,250 ರೂ. ಮೌಲ್ಯದ ಚಿನ್ನ ಹಾಗೂ 1700 ರೂ. ನಗದನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.

ಆರೋಪಿಗಳು ರಜಾ ದಿನಗಳಲ್ಲಿ, ಬೀಗ ಹಾಕಿರುವ ಮನೆಗಳನ್ನು ಗುರಿಯಾಗಿಸಿ ಕಳ್ಳತನ ಮಾಡುವ ಚಾಳಿ ಉಳ್ಳವರಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಇನ್ನೊಬ್ಬ ಆರೋಪಿಯನ್ನು ಶೀಘ್ರ ಪತ್ತೆ ಹಚ್ಚಲಾಗುವುದೆಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.

ಬಂಧಿತ ಆರೋಪಿಗಳು ಮಧ್ಯಪ್ರದೇಶದವರಾಗಿದ್ದು, ಉಡುಪಿ ನಗರ ಠಾಣೆಯಲ್ಲಿ 2024ರಲ್ಲಿ ದಾಖಲಾದ 3 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ತಮ್ಮ ಸಹಚರರೊಂದಿಗೆ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ಕಳವು ಮಾಡಿರುವ ಬಗ್ಗೆ ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಸಹ ಪ್ರಕರಣಗಳು ದಾಖಲಾಗಿರುವುದು ಆರೋಪಿಗಳ ವಿಚಾರಣೆ ವೇಳೆ ತಿಳಿದುಬಂದಿದೆ. ರಮೇಶ್ ಜವಾನ್ ಸಿಂಗ್ ವಿರುದ್ಧ ಈಗಾಗಲೇ ಬೇರೆ ರಾಜ್ಯಗಳಲ್ಲಿ 11 ಕಳ್ಳತನ ಪ್ರಕರಣಗಳು ಮತ್ತು ಕಾಲಿಯಾ ವಿರುದ್ಧ ಉಡುಪಿ ಜಿಲ್ಲೆಯಲ್ಲಿ 3 ಪ್ರಕರಣಗಳು ದಾಖಲಾಗಿವೆ. ಮಂಗಳೂರಿನಲ್ಲಿ ಒಂದು ವರ್ಷದ ಹಿಂದೆ ಮಧ್ಯಪ್ರದೇಶ ಮೂಲದ ಮನೆ ಕಳ್ಳರನ್ನು ಕಳ್ಳತನ ನಡೆದ ಕೆಲವೇ ಗಂಟೆಗಳಲ್ಲಿ ಸಿನಿಮಾ ಶೈಲಿಯಲ್ಲಿ ಬಂಧಿಸಲಾಗಿತ್ತು. ವಿಚಾರಣೆ ಸಂದರ್ಭದಲ್ಲಿ ಕರ್ನಾಟಕದ ಹಲವು ಕಡೆಗಳಲ್ಲಿ ಮಳೆಗಾಲದಲ್ಲಿ ಮನೆ ಕಳ್ಳತನ ನಡೆಸುತ್ತಿರುವುದು ಪತ್ತೆಯಾಗಿತ್ತು. ಚಡ್ಡಿ ಹಾಕ್ಕೊಂಡು ಬಂದು ಕಳ್ಳತನ ನಡೆಸುತ್ತಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಪತ್ತೆಯಾಗಿತ್ತು. ಅದೇ ತಂಡ ಉಡುಪಿಗೆ ಎಂಟ್ರಿ ಕೊಟ್ಟಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

ಕಾರ್ಯಾಚರಣೆಯಲ್ಲಿ ಉಡುಪಿ ನಗರ ಠಾಣೆಯ ಪಿಎಸ್‌ಐ ಭರತೇಶ್ ಕಂಕಣವಾಡಿ, ಈರಣ್ಣ ಶಿರಗುಂಪಿ, ಗೋಪಾಲಕೃಷ್ಣ ಜೋಗಿ ಹಾಗೂ ಸಿಬ್ಬಂದಿ ನಾರಾಯಣ , ಜಯಕರ್, ಶಿವು ಕುಮಾರ್, ಹೇಮಂತ, ಆನಂದ, ಗಫೂರ್, ಸಂತೋಷ್ ರಾಥೋಡ್, ಮಲ್ಲಯ್ಯ, ಓಬಳೇಶ್, ಕಾರ್ತಿಕ್, ಕುಮಾರ್ ಕೊಪ್ಪದ್, ವಿನಯ್ ಕುಮಾರ್, ಸಂತೋಷ್ ಭಾಗವಹಿಸಿದ್ದರು.

Udupi police have arrested two interstate burglars from Madhya Pradesh in connection with a recent house theft in PWD Quarters, Mission Compound, Badagubettu village. The duo is believed to be part of the notorious ‘Chaddi Gang’, known for targeting locked houses, especially during the monsoon season.