13 ವರ್ಷಗಳಿಂದ ಜೀವನ್ಮರಣ ಹೋರಾಟ ; ಕೋಮಾದಲ್ಲಿದ್ದ ಯುವಕನಿಗೆ ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ, ನಾಲ್ಕನೇ ಮಹಡಿಯಿಂದ ಬಿದ್ದು ಅಂಗವೈಕಲ್ಯಕ್ಕೀಡಾಗಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ

11-03-26 07:16 pm       HK News Staffer   ಕರ್ನಾಟಕ

13 ವರ್ಷಗಳ ಹಿಂದೆ ನಾಲ್ಕು ಮಹಡಿಯ ಮೇಲಿಂದ ಬಿದ್ದು ಮೆದುಳಿಗೆ ಗಾಯಗೊಂಡು ಸುದೀರ್ಘ ಕಾಲದಿಂದ ಕೋಮಾದಲ್ಲಿಯೇ ಇದ್ದ 32 ವರ್ಷದ ಹರೀಶ್ ರಾಣಾ ಎಂಬ ಯುವಕನಿಗೆ ಸುಪ್ರೀಂ ಕೋರ್ಟ್ ದಯಾಮರಣಕ್ಕೆ ಅವಕಾಶ ನೀಡಿದೆ.

ಗಾಜಿಯಾಬಾದ್, ಮಾರ್ಚ್ 11: 13 ವರ್ಷಗಳ ಹಿಂದೆ ನಾಲ್ಕು ಮಹಡಿಯ ಮೇಲಿಂದ ಬಿದ್ದು ಮೆದುಳಿಗೆ ಗಾಯಗೊಂಡು ಸುದೀರ್ಘ ಕಾಲದಿಂದ ಕೋಮಾದಲ್ಲಿಯೇ ಇದ್ದ 32 ವರ್ಷದ ಹರೀಶ್ ರಾಣಾ ಎಂಬ ಯುವಕನಿಗೆ ಸುಪ್ರೀಂ ಕೋರ್ಟ್ ದಯಾಮರಣಕ್ಕೆ ಅವಕಾಶ ನೀಡಿದೆ.

ಸುಪ್ರೀಂ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠವು ಈ ತೀರ್ಪು ನೀಡಿದೆ. ರೋಗಿಯನ್ನು ಪರೀಕ್ಷಿಸುವ ವೈದ್ಯಕೀಯ ಮಂಡಳಿಗಳು ಚೇತರಿಕೆಯ ನಿರೀಕ್ಷೆ ಅರ್ಥಪೂರ್ಣವಲ್ಲ ಎಂದು ತೀರ್ಮಾನಿಸಿದರೆ ಹಾಗೂ ಶಿಫಾರಸು ಮಾಡಿದರೆ ಮಾತ್ರ ಅಂತಹ ಸಂದರ್ಭದಲ್ಲಿ ಮೆಡಿಕಲ್ ಸಪೋರ್ಟ್ ಹಿಂಪಡೆಯಬಹುದು ಎಂದು ಕೋರ್ಟ್ ಹೇಳಿದೆ.

ರಾಣಾ ಒಂದು ಕಾಲದಲ್ಲಿ "ಸಮರ್ಥ ಯುವಕ"ನಾಗಿದ್ದ. ಆದರೆ ಮಹಡಿ ಮೇಲಿನಿಂದ ಬಿದ್ದು ಉಂಟಾದ ಮಿದುಳಿನ ಗಾಯಗಳು ಅವನನ್ನು ನಿಷ್ಕ್ರಿಯಗೊಳಿಸಿತ್ತು. ನ್ಯಾಯಾಲಯದ ಮುಂದೆ ಸಲ್ಲಿಸಲಾದ ವೈದ್ಯಕೀಯ ವರದಿಗಳು ಕಳೆದ 13 ವರ್ಷಗಳಿಂದ ಅವನ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ತೋರಿಸಿಲ್ಲ ಮತ್ತು ಕೇವಲ ವೆಂಟಿಲೇಟರ್ ನಿಂದ ಜೀವ ಉಳಿದಿದೆ ಎಂಬುದನ್ನು ಕೋರ್ಟ್ ಗಮನಿಸಿ ದಯಾಮರಣಕ್ಕೆ ಅವಕಾಶ ನೀಡಿದೆ.‌ 

ಜೀವರಕ್ಷಕ ಕ್ರಮಗಳನ್ನು ಹಿಂತೆಗೆದುಕೊಳ್ಳುವ ನಿಷ್ಕ್ರಿಯ ದಯಾಮರಣವನ್ನು ಮೊದಲು ಸುಪ್ರೀಂ ಕೋರ್ಟ್ 2011ರ ಅರುಣಾ ಶಾನುಬಾಗ್ ಪ್ರಕರಣದಲ್ಲಿ ನೀಡಿತ್ತು‌. 2018 ರಲ್ಲಿ ಕಾಮನ್ ಕಾಸ್ vs ಯೂನಿಯನ್ ಆಫ್ ಇಂಡಿಯಾ ತೀರ್ಪಿನಲ್ಲಿ ಇದನ್ನು ಕಾನೂನುಬದ್ಧ ಮಾಡಲಾಗಿತ್ತು, ಇದು ಘನತೆಯಿಂದ ಸಾಯುವ ಹಕ್ಕನ್ನು ಬದುಕುವ ಹಕ್ಕಿನ ಭಾಗವೆಂದು ಗುರುತಿಸಿತ್ತು. ಔಷಧಗಳು ಅಥವಾ ಇಂಜೆಕ್ಷನ್ ಮೂಲಕ ನೇರವಾಗಿ ಸಾವಿಗೆ ಕಾರಣವಾಗುವ ಸಕ್ರಿಯ ದಯಾಮರಣ ಭಾರತದಲ್ಲಿ ಕಾನೂನುಬಾಹಿರವಾಗಿದೆ. 

ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆಯುತ್ತಿದ್ದ ರಾಣಾ, ಆಗಸ್ಟ್ 20, 2013 ರಂದು ತಮ್ಮ ಪಿಜಿ ವಸತಿಗೃಹದ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಬಿದ್ದು ತಲೆಗೆ ತೀವ್ರ ಗಾಯಗಳಾಗಿ ಸಂಪೂರ್ಣ ಅಂಗವೈಕಲ್ಯಕ್ಕೆ ಒಳಗಾಗಿದ್ದರು. ಅಂದಿನಿಂದ, ಅವರು ಉಸಿರಾಟಕ್ಕಾಗಿ ಟ್ರಾಕಿಯೊಸ್ಟೊಮಿ ಟ್ಯೂಬ್ ಮತ್ತು ಪೋಷಣೆಗಾಗಿ ಗ್ಯಾಸ್ಟ್ರೋಸ್ಟೊಮಿ ಟ್ಯೂಬ್ ಅನ್ನು ಅವಲಂಬಿಸಿದ್ದಾರೆ. ಹರೀಶ್ ಅವರ ಪೋಷಕರು, ಇತರ ಇಬ್ಬರು ಮಕ್ಕಳನ್ನು ಸಹ ನೋಡಿಕೊಳ್ಳುತ್ತಿದ್ದಾರೆ. ದೆಹಲಿಯಲ್ಲಿರುವ ತಮ್ಮ ಮನೆಯನ್ನು ಮಾರಿ, ಏಮ್ಸ್‌ನಲ್ಲಿ ಅವರ ಹಾಸಿಗೆಯ ಪಕ್ಕದಲ್ಲಿಯೇ ಇರಲು ಗಾಜಿಯಾಬಾದ್‌ಗೆ ಸ್ಥಳಾಂತರಗೊಂಡಿದ್ದರು. ಇತ್ತೀಚೆಗೆ ಮಗನ ದೀರ್ಘಕಾಲದ ನೋವನ್ನು ಕೊನೆಗೊಳಿಸಲು ಅವರು ನಿಷ್ಕ್ರಿಯ ದಯಾಮರಣಕ್ಕೆ ಕಾನೂನು ಅನುಮತಿ ಕೋರಿದ್ದರು.