Udupi: ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಳ್ಳಲು ಯತ್ನ ; ಉಡುಪಿ ಕಲ್ಸಂಕದಲ್ಲಿ ಯುವಕನ ಹೈಡ್ರಾಮಾ, ಪೊಲೀಸರಿಂದ ರಕ್ಷಣೆ 

23-02-26 04:30 pm       Mangalore Correspondent   ಕ್ರೈಂ

ಯುವಕನೊಬ್ಬ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಕಲ್ಸಂಕ ವೃತ್ತದ ಬಳಿ ಸಂಭವಿಸಿದೆ. ಯುವಕನನ್ನು ಪೊಲೀಸರು ಮತ್ತು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ರಕ್ಷಿಸಿದ್ದಾರೆ.

ಉಡುಪಿ, ಫೆ.23: ಯುವಕನೊಬ್ಬ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಕಲ್ಸಂಕ ವೃತ್ತದ ಬಳಿ ಸಂಭವಿಸಿದೆ. ಯುವಕನನ್ನು ಪೊಲೀಸರು ಮತ್ತು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ರಕ್ಷಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಗದಗ ಮೂಲದವನೆಂದು ಗುರುತಿಸಲಾಗಿದೆ. ಆತ ಪಾನಮತ್ತನಾಗಿ ಅಥವಾ ಮಾನಸಿಕ ಅಸ್ವಸ್ಥನಾಗಿ ಕೃತ್ಯ ಎಸಗಿದ್ದಾನೋ ಎಂಬುದು ತಿಳಿದುಬಂದಿಲ್ಲ.

ಬಾಟಲಿಯಲ್ಲಿ ಪೆಟ್ರೋಲ್ ಹಿಡಿದು ಬಂದಿದ್ದ ಅಪರಿಚಿತ ವ್ಯಕ್ತಿ, ಕಲ್ಸಂಕ ವೃತ್ತದ ಬಳಿ ಕಿರುಚುತ್ತಾ ಮೈಮೇಲೆ ಪೆಟ್ರೋಲ್ ಸುರಿದುಕೊಂಡಿದ್ದಾನೆ. ಈ ವೇಳೆ ಅಲ್ಲಿಯೇ ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸರು ಆತನ ಕೈಯಲ್ಲಿದ್ದ ಬಾಟಲಿಯನ್ನು ಕಸಿದುಕೊಳ್ಳಲು ಯತ್ನಿಸಿದ್ದು, ಪೊಲೀಸರ ಕರ್ತವ್ಯಕ್ಕೂ ಅಡ್ಡಿಪಡಿಸಿದ್ದಾನೆ. ಒಮ್ಮೆ ಬಾಟಲಿ ಕಸಿದುಕೊಂಡರೂ, ಮತ್ತೆ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾನೆ. 

ತಕ್ಷಣವೇ ಕಾರ್ಯಪ್ರವೃತ್ತರಾದ ಉಡುಪಿ ನಗರ ಪೊಲೀಸ್ ಠಾಣೆಯ ಎಸ್‌ಐಗಳಾದ ನಾರಾಯಣ ಮತ್ತು ಗಂಗಪ್ಪ ಹಾಗೂ ಸಮಾಜಸೇವಕ ನಿತ್ಯಾನಂದ ಒಳಕಾಡು, ಆತನನ್ನು ಹಿಡಿದಿಟ್ಟು ಬೆಂಕಿ ಹಚ್ಚಿಕೊಳ್ಳುವುದಂತೆ ತಡೆದಿದ್ದಾರೆ. ಇದರಿಂದ ಸಂಭವನೀಯ ಭೀಕರ ದುರಂತ ತಪ್ಪಿದೆ.