ಟ್ಯಾಬ್ಲೆಟ್ ಆರಿಫ್ ಹತ್ಯೆ ; ಟೋಪಿ ನೌಫಾಲ್ ಸಾವನ್ನ ಸಂಭ್ರಮಿಸಿದ್ದಕ್ಕೆ ರಿವೇಂಜ್ ? ಈದ್ ದಿನದಂದೇ ಸ್ನೇಹಿತನ ಗೋರಿ ಮುಂದೆ ಶಪಥ, ಸಿಸಿಬಿ ಪೊಲೀಸರಿಂದ ಹಲವರ ವಿಚಾರಣೆ‌

29-03-26 10:22 pm       Dinesh, Mangaluru   ಕ್ರೈಂ

ತೊಕ್ಕೊಟ್ಟು ಹೆದ್ದಾರಿಯ ಫ್ಲೈ ಓವರಲ್ಲಿ ಬರ್ಬರವಾಗಿ ಕೊಲೆಯಾಗಿದ್ದ ಉಚ್ಚಿಲ ಮುಳ್ಳುಗುಡ್ಡೆ ನಿವಾಸಿ ರೌಡಿಶೀಟರ್ ಆರೀಫ್ ಹುಸೇನ್ ಅಲಿಯಾಸ್ ಟ್ಯಾಬ್ಲೆಟ್ ಆರಿಫ್ ಹಂತಕರ ಬೇಟೆಗೆ ಇಳಿದಿರುವ ಮಂಗಳೂರು ಸಿಸಿಬಿ ತಂಡಕ್ಕೆ ಖಚಿತ ಸುಳಿವು ದೊರಕಿದ್ದು, ಕಳೆದ ವರುಷ ನಿಗೂಢವಾಗಿ ಸಾವನ್ನಪ್ಪಿದ್ದ ನಟೋರಿಯಸ್ ರೌಡಿ ಟೋಪಿ ನೌಫಾಲ್ ಸಹಚರರೇ ಕೊಲೆ ಕೃತ್ಯ ಎಸಗಿರೋದಾಗಿ ತಿಳಿದುಬಂದಿದೆ.

ಉಳ್ಳಾಲ, ಮಾ.29: ತೊಕ್ಕೊಟ್ಟು ಹೆದ್ದಾರಿಯ ಫ್ಲೈ ಓವರಲ್ಲಿ ಬರ್ಬರವಾಗಿ ಕೊಲೆಯಾಗಿದ್ದ ಉಚ್ಚಿಲ ಮುಳ್ಳುಗುಡ್ಡೆ ನಿವಾಸಿ ರೌಡಿಶೀಟರ್ ಆರೀಫ್ ಹುಸೇನ್ ಅಲಿಯಾಸ್ ಟ್ಯಾಬ್ಲೆಟ್ ಆರಿಫ್ ಹಂತಕರ ಬೇಟೆಗೆ ಇಳಿದಿರುವ ಮಂಗಳೂರು ಸಿಸಿಬಿ ತಂಡಕ್ಕೆ ಖಚಿತ ಸುಳಿವು ದೊರಕಿದ್ದು, ಕಳೆದ ವರುಷ ನಿಗೂಢವಾಗಿ ಸಾವನ್ನಪ್ಪಿದ್ದ ನಟೋರಿಯಸ್ ರೌಡಿ ಟೋಪಿ ನೌಫಾಲ್ ಸಹಚರರೇ ಕೊಲೆ ಕೃತ್ಯ ಎಸಗಿರೋದಾಗಿ ತಿಳಿದುಬಂದಿದೆ. ಕೊಲೆ ಕೃತ್ಯದಲ್ಲಿ ನೇರ ಪಾಲ್ಗೊಂಡ ಹಂತಕರು ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದು, ಕೃತ್ಯಕ್ಕೆ ಸಹಕರಿಸಿರುವ ಶಂಕೆಯಲ್ಲಿ ಸಿಸಿಬಿ ಪೊಲೀಸರು ಹಲವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಮಂಗಳೂರಿನ ಮೀನುಗಾರಿಕಾ ಧಕ್ಕೆಯಲ್ಲಿ ಮೀನಿನ ವ್ಯಾಪಾರಿಯಾಗಿದ್ದ ಆರಿಫ್ ಶುಕ್ರವಾರ ನಸುಕಿನಲ್ಲಿ ಮಂಗಳೂರಿಗೆ ತನ್ನ ಬುಲೆಟ್ ಬೈಕಿನಲ್ಲಿ ತೆರಳುತ್ತಿದ್ದಾಗ ಇನೋವಾ ಕಾರಿನಲ್ಲಿ ಬೆನ್ನಟ್ಟಿದ್ದ ಹಂತಕರು ಬುಲೆಟ್ ಗೆ ಕಾರನ್ನು ಢಿಕ್ಕಿಪಡಿಸಿದ್ದು, ರಸ್ತೆಗೆಸೆಯಲ್ಪಟ್ಟ ಆರೀಫ್ ಮುಖ, ತಲೆ, ಕತ್ತಿನ ಭಾಗಕ್ಕೆ ಯದ್ವಾತದ್ವಾ ಮಚ್ಚು ಬೀಸಿ ಕೊಲೆ ಮಾಡಿದ್ದರು. ಕೊಲೆ ಕೃತ್ಯದ ಬಳಿಕ ಸ್ಥಳದಿಂದ ಪರಾರಿಯಾಗಿದ್ದ ಹಂತಕರ ಕಾರು ವಿಟ್ಲದ ಬುಡೋಳಿ ಎಂಬಲ್ಲಿ ಇಂಧನ ಖಾಲಿಯಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. 

ಕೊಲೆಗೆ ಬಳಸಲಾದ ಕೇರಳ ನೋಂದಣಿಯ ಕಾರನ್ನು ಮೂರು ದಿನಗಳ ಹಿಂದಷ್ಟೆ ಹಂತಕರು ಬಾಡಿಗೆಗೆ ಪಡಕೊಂಡಿದ್ದರೆನ್ನಲಾಗಿದೆ. ಉಳ್ಳಾಲದ ವ್ಯಕ್ತಿಯೋರ್ವ ಕಾರನ್ನು ಬಾಡಿಗೆಗೆ ಪಡೆದಿರೋದಾಗಿ ಕಾರು ಮಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಕಾರನ್ನು ಪೊಲೀಸರು ಉಳ್ಳಾಲ ಠಾಣೆಗೆ ತಂದಿದ್ದಾರೆ. ಕೃತ್ಯದಲ್ಲಿ ನೇರ ಭಾಗಿಯಾಗಿರುವ ಆರು ಮಂದಿ ಹಂತಕರು ಮಂಗಳೂರಿನವರೇ ಆಗಿದ್ದು ವಿಟ್ಲದಿಂದ ಬೆಂಗಳೂರಿನ ಕಡೆಗೆ ಪರಾರಿಯಾಗಿರುವ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.

ನೌಫಾಲ್ ಸಾವನ್ನ ಸಂಭ್ರಮಿಸಿದ್ದಕ್ಕೆ ರಿವೇಂಜ್..? 

2022 ರಲ್ಲಿ ಆರೀಫ್ ನನ್ನು ಉಚ್ಚಿಲದಲ್ಲಿ ಕೊಲೆ ಮಾಡಲು ಯತ್ನಿಸಿದ್ದ ಫೈಸಲ್ ನಗರದ ನಟೋರಿಯಸ್ ರೌಡಿ ಟೋಪಿ ನೌಫಾಲ್ ತಂಡದಲ್ಲಿದ್ದ ಮೊಹಮ್ಮದ್ ರಿಫಾತ್ ಅಲಿ ಎಂಬಾತ ಕೊಲೆ ಕೃತ್ಯದಲ್ಲಿ ನೇರ ಭಾಗಿಯಾಗಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಕಳೆದ 2025ರ ನವೆಂಬರ್ ತಿಂಗಳಲ್ಲಿ ಟೋಪಿ ನೌಫಾಲ್ ಉಪ್ಪಳ ರೈಲ್ವೇ ಗೇಟ್ ಬಳಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದ. ತನಿಖೆ ನಡೆಸಿದ್ದ ಮಂಜೇಶ್ವರ ಪೊಲೀಸರು ರೈಲು ಢಿಕ್ಕಿ ಹೊಡೆದು ನೌಫಾಲ್ ಸಾವನ್ನಪ್ಪಿರೋದಾಗಿ ವರದಿ ನೀಡಿ ಕೈ ತೊಳೆದು ಬಿಟ್ಟಿದ್ದರು. ನೌಫಾಲ್ ನಂತಹ ಕುಖ್ಯಾತ ರೌಡಿ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಲು ಹೇಗೆ ಸಾಧ್ಯವೆಂದು ಸಾವಿನ ಬಗ್ಗೆ ಆತನ ಸಹಚರರಲ್ಲಿ ಮನೆ ಮಾಡಿದ್ದ ಅನುಮಾನಗಳು ಮಾತ್ರ ಎಂದಿಗೂ ಮಾಸಿರಲಿಲ್ಲ. 

ಕಳೆದ ವಾರ ಈದ್ ಉಲ್ ಫಿತರ್ ಹಬ್ಬದಂದು ಪೈಸಲ್ ನಗರ ಮತ್ತು ವಾಮಂಜೂರಿನ ನೌಫಾಲ್ ಸಹಚರರು ಅಗಲಿದ ಸ್ನೇಹಿತನ ಗೋರಿಯ ಮುಂದೆ ಸೇರಿ ದುವಾ ನೆರವೇರಿಸಿದ್ದರಂತೆ. ಇತ್ತ ತನ್ನನ್ನ ಕೊಲೆಗೆ ಯತ್ನಿಸಿದ್ದ ಟೋಪಿ ನೌಫಾಲನಿಗೆ ನಾಯಿಗಿಂತಲೂ ಹೀನ ಸಾವು ಲಭಿಸಿತೆಂದು ಹೇಳಿಕೊಂಡು ಆರೀಫ್ ಸಂಭ್ರಮಿಸುತ್ತಿರುವುದು ನೌಫಾಲ್ ಸಹಚರರ ಪಿತ್ತ ನೆತ್ತಿಗೇರಿಸುವಂತೆ ಮಾಡಿತ್ತು. ಇದೇ ನೆಪವನ್ನು ಮುಂದಿಟ್ಟು ನೌಫಾಲ್ ಸಹಚರರು ಈದ್ ಹಬ್ಬದಂದು ಸ್ನೇಹಿತನ ಗೋರಿಯ ಮುಂದೆಯೇ ಶಫಥಗೈದು, ಆರೀಫ್ ಹಿಂದೆ ಬಿದ್ದು ಹತ್ಯೆ ನಡೆಸಿರೋದಾಗಿ ಹೇಳಲಾಗಿದೆ. ಇದಕ್ಕೆ ಪುಷ್ಟಿ ಎಂಬಂತೆ ರಿಫಾತ್ ಅಲಿ ಮತ್ತು ಆತನ ಸಹಚರರೇ ಸೇರಿ ತಂದೆಯ ಕೊಲೆ ನಡೆಸಿರುವ ಶಂಕೆ ಇದೆಯೆಂದು ಮೃತ ಆರೀಫ್ ಪುತ್ರ ಅಬ್ದುಲ್ ಖಾದರ್ ಅದೀಫ್ ಉಳ್ಳಾಲ ಪೊಲೀಸ್ ಠಾಣೆಗೆ ದೂರು ಕೂಡ ನೀಡಿದ್ದಾರೆ.