ಚಿಕ್ಕೋಡಿಯಲ್ಲಿ ಮಾನಗೇಡಿ ಹತ್ಯೆ; ಪತಿಯನ್ನು ಬಿಟ್ಟು ಪ್ರಿಯಕರನ ಜೊತೆ ಓಡಿಹೋಗಿದ್ದ ಮಹಿಳೆಯನ್ನು ವಿಷ ಕೊಟ್ಟು ಹೆಣ ಸುಟ್ಟ ಕುಟುಂಬಸ್ಥರು!

15-04-26 05:03 pm       HK News Staffer   ಕ್ರೈಂ

ಪತಿಯನ್ನು ಬಿಟ್ಟು ಪ್ರಿಯಕರನ ಜೊತೆ ಓಡಿಹೋಗಿದ್ದ ಮಹಿಳೆಯನ್ನು ಆಕೆಯ ಕುಟುಂಬಸ್ಥರೇ ಸಮಾಜದ ಮರ್ಯಾದೆಗೆ ಅಂಜಿ, ಬಲವಂತವಾಗಿ ವಿಷ ಕುಡಿಸಿ ಕೊಲೆ ಮಾಡಿದ ಬಳಿಕ ಶವವನ್ನು ಸುಟ್ಟು ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಚಿಕ್ಕೋಡಿ, ಏಪ್ರಿಲ್ 15: ಪತಿಯನ್ನು ಬಿಟ್ಟು ಪ್ರಿಯಕರನ ಜೊತೆ ಓಡಿಹೋಗಿದ್ದ ಮಹಿಳೆಯನ್ನು ಆಕೆಯ ಕುಟುಂಬಸ್ಥರೇ ಸಮಾಜದ ಮರ್ಯಾದೆಗೆ ಅಂಜಿ, ಬಲವಂತವಾಗಿ ವಿಷ ಕುಡಿಸಿ ಕೊಲೆ ಮಾಡಿದ ಬಳಿಕ ಶವವನ್ನು ಸುಟ್ಟು ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಣಬರಟ್ಟಿ ಗ್ರಾಮದ ಸತ್ಯವ್ವ ಹೆಳವಿ ಎಂಬಾಕೆ ಕೊಲೆಯಾದ ಮಹಿಳೆ. ಹತ್ಯೆ ಆರೋಪದಡಿ ಪ್ರಕಾಶ್ ಹಳವರ (ಚಿಕ್ಕಪ್ಪ), ಕಲ್ಲಪ್ಪ ಹಾಗೂ ಶಾನೂರ (ಸಹೋದರ) ಎಂಬವರನ್ನು ಬಂಧಿಸಲಾಗಿದೆ.

ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಆರೋಪಿಗಳು ಶವವನ್ನು ಸುಟ್ಟು ಹಾಕಿದ್ದಾರೆ ಎಂಬ ಪ್ರಾಥಮಿಕ ಮಾಹಿತಿಯಡಿ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಮರ್ಯಾದಾ ಹತ್ಯೆ ಪ್ರಕರಣ ದಾಖಲಾಗಿದೆ. ಈ ಸಂಬಂಧ ಹತ್ಯೆಗೀಡಾದ ಮಹಿಳೆಯ ಮೂವರು ಸಂಬಂಧಿಕರನ್ನು ಬಂಧಿಸಿರುವುದಾಗಿ ಪೊಲೀಸ್​ ಮೂಲಗಳು ತಿಳಿಸಿವೆ.

​ಘಟನೆಯ ಹಿನ್ನೆಲೆ:

 ಹುಕ್ಕೇರಿ ತಾಲೂಕಿನ ನದಿಗುಡಿಕ್ಷೇತ ನಿವಾಸಿಯಾಗಿರುವ ಸತ್ಯವ್ವ, ಅದೇ ಗ್ರಾಮದ ವ್ಯಕ್ತಿಯೊಬ್ಬರನ್ನು ಮದುವೆಗೂ ಮುನ್ನ ಪ್ರೀತಿಸುತ್ತಿದ್ದರು. ಕುಟುಂಬಸ್ಥರು ಆಕೆಯ ಇಷ್ಟಕ್ಕೆ ವಿರುದ್ಧವಾಗಿ ಕಳೆದ ನಾಲ್ಕು ವರ್ಷಗಳ ಹಿಂದೆ ರಾಯಬಾಗ ತಾಲೂಕಿನ ಹಣಬರಟ್ಟಿ ಗ್ರಾಮದ ಸಂತೋಷ್ ಹೆಳವಿ ಎಂಬವರ ಜೊತೆ ವಿವಾಹ ಮಾಡಿಕೊಟ್ಟಿದ್ದರು. ವಿವಾಹದ ನಂತರವೂ ಪ್ರಿಯಕರನ ಸಂಪರ್ಕದಲ್ಲಿದ್ದ ಸತ್ಯವ್ವ, ಫೆಬ್ರವರಿ 17ರಂದು ಆತನೊಂದಿಗೆ ಮನೆಬಿಟ್ಟು ಓಡಿಬಂದಿದ್ದರು. ಇಬ್ಬರೂ ಬೆಳವಡಿ ಗ್ರಾಮದಲ್ಲಿ ಬಾಡಿಗೆ ಮನೆ ಪಡೆದು ವಾಸವಿದ್ದರು. ಈ ವಿಷಯ ತಿಳಿದ ಇಬ್ಬರ ಕುಟುಂಬಸ್ಥರು, ಅಲ್ಲಿಗೆ ತೆರಳಿ ಅವರನ್ನು ವಾಪಸ್ ಕರೆತಂದಿದ್ದರು. ಬಳಿಕ ಸತ್ಯವ್ವಗೆ ಬುದ್ಧಿ ಹೇಳಲು ಮಹಾರಾಷ್ಟ್ರದ ಶಿರೋಳ ಹಾಗೂ ಸಾಂಗ್ಲಿ ಜಿಲ್ಲೆಯ ಅರಗ ಗ್ರಾಮಕ್ಕೆ ಕರೆದೊಯ್ದಿದ್ದರು. ಆದರೆ, ಪ್ರಿಯಕರನ ಜೊತೆಗೇ ಇರುವುದಾಗಿ ಹಠ ಮಾಡಿದ್ದರಿಂದ ಈಗಾಗಲೇ ಮನೆ ಬಿಟ್ಟು ಓಡಿ ಹೋಗಿದ್ದರಿಂದ ಸಮಾಜದಲ್ಲಿ ಮರ್ಯಾದೆ ಹೋಗಿದೆ ಎಂದು ಮಾರ್ಚ್ 21ರಂದು ಆಕೆಗೆ ಬಲವಂತವಾಗಿ ವಿಷ ಕುಡಿಸಿ ಕೊಲೆ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಯಾರಿಗೂ ಅನುಮಾನ ಬಾರದಂತೆ ಹಾಗೂ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಶವ ಸುಟ್ಟು ಹಾಕಿದ್ದಾರೆ ಎಂದು ಆರೋಪಿಸಿ ಅದೇ ಗ್ರಾಮದ ಕೃಷ್ಣಾ ಪಾಟೀಲ ಎಂಬವರು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಎಸ್​ಪಿ ಪ್ರತಿಕ್ರಿಯೆ: 

ಬಂಧಿತ ಆರೋಪಿಗಳು ಸತ್ಯೆವ್ವ ಎಂಬ ಮಹಿಳೆಗೆ ವಿಷ ಕುಡಿಸಿ ಕೊಲೆ ಮಾಡಿದ್ದು, ಬಳಿಕ ಯಾರಿಗೂ‌ ಗೊತ್ತಾಗಬಾರದು ಅಂತಾ ಆಕೆಯ ಶವವನ್ನು ಸುಟ್ಟು ಹಾಕಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಮದುವೆ ಮಾಡಿಕೊಟ್ಟ ಮೇಲೆ ತಮ್ಮದೇ ಊರಿನ ವ್ಯಕ್ತಿಯ ಜೊತೆಗೆ ಹೋಗಿರುವ ವಿಚಾರಕ್ಕೆ ಕೊಲೆ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮಿರಜ ತಾಲೂಕಿನ ಅರಗ ಗ್ರಾಮದ ಬಳಿ ಸತ್ಯೆವ್ವಳ ಕೊಲೆ ಆಗಿದೆ. ಹಾಗಾಗಿ, ಈ ಪ್ರಕರಣವನ್ನು ಮಹಾರಾಷ್ಟ್ರ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.