ಮಣಿಪಾಲದ ಸಾಫ್ಟ್‌ವೇರ್ ಕಂಪನಿಗೆ ಕೋಟ್ಯಂತರ ಮೌಲ್ಯದ ಷೇರು ನೀಡುವುದಾಗಿ ನಂಬಿಸಿ ವಂಚನೆ; ಸಿಂಗಾಪುರದ ಕಂಪನಿ ಅಧಿಕಾರಿಗಳ ವಿರುದ್ಧ 33 ಕೋಟಿ ವಂಚನೆ ಪ್ರಕರಣ ದಾಖಲು

20-04-26 11:13 am       HK News Staffer   ಕ್ರೈಂ

ಸಿಂಗಾಪುರ ಮೂಲದ ಕಂಪೆನಿಯ ಹೆಸರಲ್ಲಿ ಮಣಿಪಾಲದ ಸಾಫ್ಟ್‌ವೇರ್ ಕಂಪೆನಿಯೊಂದಕ್ಕೆ ಕೋಟ್ಯಂತರ ರೂ. ಮೌಲ್ಯದ ಷೇರುಗಳನ್ನು ನೀಡುವುದಾಗಿ ಹೇಳಿ 33 ಕೋಟಿ ರೂಪಾಯಿ ವಂಚಿಸಿರುವ ಘಟನೆ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಿಪಾಲ, ಎಪ್ರಿಲ್ 20 : ಸಿಂಗಾಪುರ ಮೂಲದ ಕಂಪೆನಿಯ ಹೆಸರಲ್ಲಿ ಮಣಿಪಾಲದ ಸಾಫ್ಟ್‌ವೇರ್ ಕಂಪೆನಿಯೊಂದಕ್ಕೆ ಕೋಟ್ಯಂತರ ರೂ. ಮೌಲ್ಯದ ಷೇರುಗಳನ್ನು ನೀಡುವುದಾಗಿ ಹೇಳಿ 33 ಕೋಟಿ ರೂಪಾಯಿ ವಂಚಿಸಿರುವ ಘಟನೆ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಿಪಾಲದ ಲಕ್ಷ್ಮೀಂದ್ರ ನಗರದಲ್ಲಿ ಎಂ.ಎನ್. ಶೆಟ್ಟಿ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಕಂಪೆನಿಯನ್ನು ನಡೆಸುತ್ತಿದ್ದ ದೀಲಿಪ್ ಆ‌ರ್.ಅಡಿಗ (35) ಎಂಬವರು ತನಗಾದ ವಂಚನೆ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ. ಸಿಂಗಾಪುರ ಮೂಲದ ಇನ್ಫೋಮೋ ಗ್ಲೋಬಲ್ ಪ್ರೈ. ಲಿ. ಕಂಪೆನಿಯ ಸಿಇಓ ಎಂದು ಹೇಳಿಕೊಂಡ ಆನಂದರಾವ್ ಎಂಬವರು ದೀಲಿಪ್ ಗೆ ಕರೆ ಮಾಡಿ ಕಂಪನಿಯಲ್ಲಿ ತಯಾರಾಗುವ ಸಿಎಂಎಸ್‌ ಪ್ರೊಡಕ್ಟ್ ಗಳನ್ನು ಪಡೆದುಕೊಳ್ಳುವ ಬಗ್ಗೆ ಮಾತುಕತೆ ನಡೆಸಿದ್ದರು.

ದಿಲೀಪ್ ಹೇಳಿದ ಪ್ರೊಡಕ್ಟ್ ಮೌಲ್ಯದ ಪಟ್ಟಿಯನ್ನು ಇ-ಮೇಲ್ ಮುಖಾಂತರ ನೋಡಿ 2019ರ ಜೂನ್‌ನಲ್ಲಿ 35 ಲಕ್ಷ ರೂ. ನಗದು ಹಾಗೂ ಸಿಂಗಾಪುರ ಕಂಪನಿಯ 17.5 ಲಕ್ಷ ಶೇರ್‌ಗಳನ್ನು ನೀಡುವುದಾಗಿ ಆನಂದ ರಾವ್ ತಿಳಿಸಿದ್ದರು. ಈ ಶೇ‌ರ್ ಮೂರು ವರ್ಷದ ಬಳಿಕ 33 ಕೋಟಿ ಆಗಲಿದ್ದು ಕಂಪನಿಯ ಒಟ್ಟು ಶೇರು ಮೌಲ್ಯ 3 ವರ್ಷದಲ್ಲಿ 9 ಸಾವಿರ ಕೋಟಿ  ಆಗುವುದಾಗಿ ನಂಬಿಸಿದ್ದರು. ಇದರಂತೆ, 2020ರ ಎಪ್ರಿಲ್‌ನಲ್ಲಿ ಶೇರ್ ತೆಗೆದುಕೊಳ್ಳುವ ಅಗ್ರಿಮೆಂಟ್ ಆಗಿದ್ದು ವ್ಯವಹಾರ ಮಾಡಿಕೊಂಡಿದ್ದರು. ಇದೇ ವೇಳೆ, ಸಿಂಗಾಪುರದ ಕಂಪನಿಯಲ್ಲಿ ಒಟ್ಟು 35 ಮಿಲಿಯನ್ ಷೇರುಗಳಿವೆ ಎಂಬುದಾಗಿ ಸುಳ್ಳು ಮಾಹಿತಿಯನ್ನು ನಮೂದಿಸಿ ನಂಬಿಸಲಾಗಿತ್ತು. ಅಗ್ರಿಮೆಂಟ್‌ಗೆ ದಿಲೀಪ್ ಹಾಗೂ ಆನಂದ ರಾವ್ ಸಹಿ ಮಾಡಿದ್ದರು. ಒಪ್ಪಂದ ಪ್ರಕಾರ ದಿಲೀಪ್ ತಮ್ಮ ಸಿಎಂಎಸ್ ಸಾಫ್ಟ್‌ವೇರ್ ಉತ್ಪನ್ನವನ್ನು ಸಿಂಗಾಪುರ ಕಂಪನಿಗೆ ಒದಗಿದ್ದರು.

ಮೂರು ವರ್ಷಗಳ ಬಳಿಕ 2023ರ ಎ.6ರಂದು ಅಗ್ರಿಮೆಂಟ್ ಪ್ರಕಾರ ವ್ಯಾಲ್ಯೂಷನ್ ವರದಿ ಮತ್ತು ಹಣದ ಬಗ್ಗೆ ದಿಲೀಪ್ ಇ-ಮೇಲ್ ಮೂಲಕ ಕೇಳಿಕೊಂಡಾಗ ಕಂಪನಿಯವರು ಸಬೂಬು ಹೇಳತೊಡಗಿದ್ದರು. 

ಬಳಿಕ ಮಣಿಪಾಲ್ ಕಂಪನಿಯ ಪಾಲುದಾರ ಶ್ಯಾಮದೀಪ್ ಅವರೊಂದಿಗೆ ಮಾತುಕತೆ ನಡೆಸಿದ ಆರೋಪಿಗಳು 6.9 ಕೋಟಿ ರೂ. ನಗದು ಮತ್ತು 20 ಲಕ್ಷ ಷೇರು ನೀಡುವುದಾಗಿ ಹೇಳಿ ಮತ್ತೆ ಕಾಲಹರಣ ಮಾಡಿದ್ದರು. ಆದರೆ ಕಂಪನಿಗೆ ಬರಬೇಕಾದ 33 ಕೋಟಿ ಹಣ ನೀಡದೆ ವಂಚಿಸಿದ್ದು ಕಂಪನಿಯ ಚೇರ್ಮನ್ ಪೀಟ‌ರ್ ಜಫ್ರೀ ಜರ್ಮೈನ್, ಸಿ.ಟಿ.ಓ ರಾಘವೇಂದ್ರ ಅಗರವಾಲ, ನಿರ್ದೇಶಕರಾದ ಸ್ಮಿತಾ ಶಾಹು, ಕಂಪನಿ ಬೋರ್ಡ್ ಸದಸ್ಯರಾದ ಅಶುತೋಷ್ ಶ್ರೀವಾತ್ಸವ, ಆನಂದರಾವ್ ವಿರುದ್ಧ ದಿಲೀಪ್ ಮಣಿಪಾಲ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.