30 ನಿಮಿಷ ಕೊಟ್ಟರೆ ಮಂಗಳೂರು ಕಮಿಷನರ್ ಮುಖವಾಡ ಬಯಲು ಮಾಡ್ತೀನಿ ; ಡಿಜಿಪಿಗೆ ದೂರು ನೀಡಿದ ಎಸ್‌ಪಿ ಕಾಶಿ

20-04-26 03:44 pm       HK News Staffer   ಕ್ರೈಂ

ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ವಿರುದ್ಧ ಗಂಭೀರ ಆರೋಪಗಳನ್ನು ಉಲ್ಲೇಖಿಸಿ ಡಿಸಿಐಆರ್ ಎಸ್‌ಪಿ ಎಸ್.ಎಸ್ ಕಾಶಿ ಅವರು ಡಿಜಿಪಿ ಸಲೀಂ ಅವರಿಗೆ ಲಿಖಿತ ದೂರು ನೀಡಿದ್ದಾರೆ. ಮಾನಸಿಕ ಕಿರುಕುಳ, ದರ್ಪ ಹಾಗೂ ತಾರತಮ್ಯ ಆರೋಪಗಳನ್ನು ಮಾಡಿ ದೂರು ಸಲ್ಲಿಸಿದ್ದಾರೆ.

ಬೆಂಗಳೂರು, ಏಪ್ರಿಲ್ 20: ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ವಿರುದ್ಧ ಗಂಭೀರ ಆರೋಪಗಳನ್ನು ಉಲ್ಲೇಖಿಸಿ ಡಿಸಿಐಆರ್ ಎಸ್‌ಪಿ ಎಸ್.ಎಸ್ ಕಾಶಿ ಅವರು ಡಿಜಿಪಿ ಸಲೀಂ ಅವರಿಗೆ ಲಿಖಿತ ದೂರು ನೀಡಿದ್ದಾರೆ. ಮಾನಸಿಕ ಕಿರುಕುಳ, ದರ್ಪ ಹಾಗೂ ತಾರತಮ್ಯ ಆರೋಪಗಳನ್ನು ಮಾಡಿ ದೂರು ಸಲ್ಲಿಸಿದ್ದಾರೆ.

"ನೀವು 30 ನಿಮಿಷ ಸಮಯ ನೀಡಿದರೆ ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿಯ ಎಲ್ಲ ಕರ್ಮಕಾಂಡವನ್ನು ಸಂಪೂರ್ಣ ಬಯಲು ಮಾಡುತ್ತೇನೆ” ಎಂದು ದೂರಿನಲ್ಲಿ ಹೇಳಿದ್ದು ಪ್ರಕರಣ ಕುತೂಹಲ ತಂದಿದೆ. ಇಲಾಖೆಯಲ್ಲಿ ಅಧೀನ ಅಧಿಕಾರಿಗಳು ತಮ್ಮ ಮಾತಿನಂತೆ ಕೆಲಸ ಮಾಡದಿದ್ದರೆ ಮೆಮೊ ನೀಡುವುದರ ಮೂಲಕ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಇದಲ್ಲದೆ, ಕನ್ನಡಿಗ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿ ಕಿರುಕುಳ ನೀಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿರುವ ಕಾಶಿ, ಈ ಕುರಿತು ಹಲವು ಬಾರಿ ಲಿಖಿತ ದೂರು ನೀಡಿದ್ದರೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಕೆಲವು ಐಪಿಎಸ್ ಅಧಿಕಾರಿಗಳು ತಮ್ಮ ಅಧಿಕಾರ ದುರುಪಯೋಗಪಡಿಸಿ ಕೆಳಹಂತದ ಸಿಬ್ಬಂದಿ ಮೇಲೆ ದರ್ಪ, ತಾರತಮ್ಯ ಹಾಗೂ ಸ್ವಜನಪಕ್ಷಪಾತ  ತೋರಿಸುತ್ತಿದ್ದಾರೆ. ವಿಶೇಷವಾಗಿ ಹೊರ ರಾಜ್ಯಗಳಿಂದ ಬಂದು ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿರುವ ಕೆಲ ಅಧಿಕಾರಿಗಳು ಕನ್ನಡಿಗ ಅಧಿಕಾರಿಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ ಎಂದೂ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. 

ಮಂಗಳೂರು ಕಮಿಷನರ್ ವಿರುದ್ಧದ ಆರೋಪಗಳು, ಅಧೀನ ಸಿಬ್ಬಂದಿಗೆ ನೀಡಿದ ಕಿರುಕುಳ ಹಾಗೂ ಇತರೇ ದೌರ್ಜನ್ಯಗಳ ಕುರಿತಾಗಿ ವಿವರವಾಗಿ ಹೇಳಲು ಒಂದು ವಾರದೊಳಗೆ ಭೇಟಿಗೆ ಅವಕಾಶ ನೀಡುವಂತೆ ಡಿಜಿಪಿಗೆ ಎಸ್ಪಿ ಕಾಶಿ ಮನವಿ ಮಾಡಿದ್ದಾರೆ. ಈ ಬೆಳವಣಿಗೆ ಪೊಲೀಸ್ ಇಲಾಖೆಯಲ್ಲಿ ಚರ್ಚೆಗೆ ಕಾರಣವಾಗಿದ್ದು, ಮುಂದಿನ ಕ್ರಮಗಳತ್ತ ಎಲ್ಲರ ಗಮನ ಸೆಳೆದಿದೆ.