ಬೆಂಗಳೂರಿನಲ್ಲಿ ದಿಢೀರ್ ಮಳೆ ಆರ್ಭಟ ; ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ಘೋರ ದುರಂತ, ಮಳೆಗೆ ಆಸರೆ ಪಡೆದಿದ್ದ ಮಕ್ಕಳು ಸೇರಿ 8 ಮಂದಿ ಸಾವು

29-04-26 08:12 pm       HK News Staffer   ಕ್ರೈಂ

ನಗರದಲ್ಲಿ ದಿಢೀರ್ ಸುರಿದ ಭಾರೀ ಮಳೆಯ ಅಬ್ಬರಕ್ಕೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿದು 8 ಮಂದಿ ಸಾವನ್ನಪ್ಪಿದ ಘಟನೆ ನಡೆದಿದ್ದು ಮೊದಲ ಮಳೆಗೇ ಎದುರಾದ ದುರಂತ ಸಿಲಿಕಾನ್ ನಗರವನ್ನು ಬೆಚ್ಚಿಬೀಳಿಸಿದೆ. ಮಳೆಯಿಂದ ತಪ್ಪಿಸಿಕೊಳ್ಳಲು ಗೋಡೆಯ ಬಳಿ ಆಶ್ರಯ ಪಡೆದಿದ್ದವರ ಮೇಲೆ ಗೋಡೆ ಕುಸಿದಿದ್ದು, ಮಕ್ಕಳು ಸೇರಿದಂತೆ ಹಲವರು ಬಲಿಯಾಗಿದ್ದಾರೆ.

ಬೆಂಗಳೂರು, ಏಪ್ರಿಲ್ 29 : ನಗರದಲ್ಲಿ ದಿಢೀರ್ ಸುರಿದ ಭಾರೀ ಮಳೆಯ ಅಬ್ಬರಕ್ಕೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿದು 8 ಮಂದಿ ಸಾವನ್ನಪ್ಪಿದ ಘಟನೆ ನಡೆದಿದ್ದು ಮೊದಲ ಮಳೆಗೇ ಎದುರಾದ ದುರಂತ ಸಿಲಿಕಾನ್ ನಗರವನ್ನು ಬೆಚ್ಚಿಬೀಳಿಸಿದೆ. ಮಳೆಯಿಂದ ತಪ್ಪಿಸಿಕೊಳ್ಳಲು ಗೋಡೆಯ ಬಳಿ ಆಶ್ರಯ ಪಡೆದಿದ್ದವರ ಮೇಲೆ ಗೋಡೆ ಕುಸಿದಿದ್ದು, ಮಕ್ಕಳು ಸೇರಿದಂತೆ ಹಲವರು ಬಲಿಯಾಗಿದ್ದಾರೆ.

ಬುಧವಾರ ಸಂಜೆ 5 ಗಂಟೆಯಿಂದ ಬಿರುಗಾಳಿ, ಗುಡುಗು- ಸಿಡಿಲಿನೊಂದಿಗೆ ಭಾರೀ ಮಳೆ ಸುರಿಯುತ್ತಿತ್ತು. ಮಳೆಯಿಂದ ರಕ್ಷಿಸಿಕೊಳ್ಳಲು ಬೀದಿ ವ್ಯಾಪಾರಿಗಳು ಮತ್ತು ಪಾದಚಾರಿಗಳು ಕಾಂಪೌಂಡ್ ಗೋಡೆ ಪಕ್ಕದಲ್ಲಿ ನಿಂತಿದ್ದರು. ಹಳೆಯ ಗೋಡೆ ಬಿರುಗಾಳಿಯ ಒತ್ತಡ ತಡೆಯಲಾಗದೆ ಏಕಾಏಕಿ ಕುಸಿದು ಬಿದ್ದ ಪರಿಣಾಮ ಅಲ್ಲಿ ಆಶ್ರಯ ಪಡೆದಿದ್ದವರು ಅದರಡಿಯಲ್ಲಿ ಸಿಲುಕಿದ್ದಾರೆ. ಟರ್ಪಾಲ್ ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದವರೂ ದುರಂತಕ್ಕೆ ಬಲಿಯಾಗಿದ್ದಾರೆ.

ಘಟನೆ ನಡೆದ ತಕ್ಷಣವೇ ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದ್ದು, ಕೆಲವರು ಇನ್ನೂ ಅವಶೇಷದಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಆಸ್ಪತ್ರೆ ಮುಂದೆ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಳಿಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಗೋಡೆ ಕುಸಿತದಿಂದ ಉಂಟಾದ ದುರಂತದ ಹಿನ್ನೆಲೆ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.