ಬಾಂಬ್ ಮಾದರಿಯ ವಸ್ತು ಸ್ಫೋಟಿಸಿ ರೀಲ್ಸ್​ ಶೂಟಿಂಗ್ ; ಬಿಗ್​ ಬಾಸ್​ ಮಾಜಿ ಸ್ಪರ್ಧಿ ರಜತ್ ವಿರುದ್ಧ ಸುಮೋಟೋ ಕೇಸ್​, ಬಿಗ್​ ಬಾಸ್​ ಗೆ ಮತ್ತೆ ಕಳಂಕ !

01-05-26 10:30 am       HK News Staffer   ಕ್ರೈಂ

ಬಿಗ್​ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್​ ಮತ್ತೊಮ್ಮೆ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೆಟ್ರೋಲ್ ಬಾಂಬ್ ಮಾದರಿಯ ವಸ್ತು ಬ್ಲಾಸ್ಟ್ ಆಗುವ ದೃಶ್ಯ ಹೊಂದಿರುವ ರೀಲ್ಸ್​​ ಮಾಡಿರುವ ಬಗ್ಗೆ ರಜತ್ ವಿರುದ್ಧ ಕನಕಪುರದ ಕಗ್ಗಲೀಪುರ ಠಾಣೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.

ರಾಮನಗರ, ಮೇ 01: ಬಿಗ್​ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್​ ಮತ್ತೊಮ್ಮೆ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೆಟ್ರೋಲ್ ಬಾಂಬ್ ಮಾದರಿಯ ವಸ್ತು ಬ್ಲಾಸ್ಟ್ ಆಗುವ ದೃಶ್ಯ ಹೊಂದಿರುವ ರೀಲ್ಸ್​​ ಮಾಡಿರುವ ಬಗ್ಗೆ ರಜತ್ ವಿರುದ್ಧ ಕನಕಪುರದ ಕಗ್ಗಲೀಪುರ ಠಾಣೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.

ರಜತ್, ಇತ್ತೀಚೆಗೆ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಈ ರೀಲ್ಸ್ ಅಪ್​ಲೋಡ್ ಮಾಡಿದ್ದರು. ಬೈಕ್​​ನಲ್ಲಿ ಸ್ಟೈಲ್ ಆಗಿ ಬರುವ ರಜತ್ ಹಿಂದೆ ಪೆಟ್ರೋಲ್ ಬಾಂಬ್ ಮಾದರಿಯ ವಸ್ತು ಸ್ಫೋಟವಾಗುವ ದೃಶ್ಯ ಇದಾಗಿತ್ತು. ಆ ರೀಲ್ಸ್​ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರ ತಮ್ಮ ತಪ್ಪು ಅರಿತು ರಜತ್ ಕ್ಷಮೆ ಸಹ ಕೇಳಿದ್ದರು. ಆದರೀಗ, ಬಿಗ್​ಬಾಸ್ ಮಾಜಿ ಸ್ಪರ್ಧಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.

ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ:

ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ರಸ್ತೆಯ ವಡೇರಹಳ್ಳಿಯ ಸಾರ್ವಜನಿಕ ರಸ್ತೆಯಲ್ಲಿ ರಜತ್ ಹಾಗೂ ತಂಡ ರೀಲ್ಸ್ ಶೂಟ್ ಮಾಡಿದ್ದರು. ರೀಲ್ಸ್​​ ಆಕರ್ಷಕವಾಗಿ ಮೂಡಿ ಬರಲೆಂದು ಬ್ಲಾಸ್ಟ್ ಸಹ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕಗ್ಗಲೀಪುರ ಪೊಲೀಸರು ರಜತ್ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಇದೇ ದಿನ ರಜತ್, ರೀಲ್ಸ್ ಶೂಟಿಂಗ್ ಮಾಡಿದ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ತನಿಖೆಯನ್ನು ಸಹ ನಡೆಸಿದ್ದಾರೆ. ರಜತ್​​ಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ.

ಡಿವೈಎಸ್​​ಪಿ ಪ್ರತಿಕ್ರಿಯೆ: 

ಈ ಘಟನೆ ಕುರಿತು ಡಿವೈಎಸ್​​ಪಿ ಶ್ರೀನಿವಾಸ್ ಅವರು ಮಾಧ್ಯಮದೊಂದಿಗೆ ಮಾತನಾಡಿ, ರಜತ್ ಅವರು ಸಾರ್ವಜನಿಕ ಶಾಂತಿಗೆ ಭಂಗ, ಅನುಚಿತ ವರ್ತನೆ, ರಸ್ತೆ ನಿಯಮ ಉಲ್ಲಂಘನೆ, ಸಾರ್ವಜನಿಕ ಆಸ್ತಿಗೆ ನಷ್ಟ ಮಾಡಿದ್ದಾರೆ. ಬಿಎನ್​​ಎಸ್​​ನ ವಿವಿಧ ಕಲಂಗಳ ಅಡಿಯಲ್ಲಿ ರಜತ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಿದ್ದೇವೆ. ರಜತ್ ಅವರಿಗೆ ನೋಟಿಸ್ ನೀಡಿ, ವಿಚಾರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಈ ಹಿಂದಿನ ಪ್ರಕರಣ: 

ರಜತ್ ಈ ಹಿಂದೊಮ್ಮೆ ಮಚ್ಚು ಹಿಡಿದು ರೀಲ್ಸ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದರು. ಮಾರಕಾಸ್ತ್ರ ಹಿಡಿದು ಸಾರ್ವಜನಿಕ ಸ್ಥಳದಲ್ಲಿ ವಿಡಿಯೋ ಮಾಡಿದ್ದ ಬಿಗ್​ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇಬ್ಬರ ವಿರುದ್ಧ ಕಳೆದ ಮಾರ್ಚ್‌ ತಿಂಗಳಿನಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಬಸವೇಶ್ವರ ನಗರ ಠಾಣೆ ಪೊಲೀಸರು, ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದರು. ಬಳಿಕ ಇಬ್ಬರಿಗೂ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ಮಂಜೂರಾಗಿತ್ತು. ಸಾಕ್ಷ್ಯನಾಶಕ್ಕೆ ಯತ್ನಿಸಬಾರದು ಮತ್ತು ಇದೇ ರೀತಿಯಾಗಿ ಮತ್ತೆ ಘಟನೆ ಮರುಕಳಿಸಬಾರದೆಂದು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಲಾಗಿತ್ತು.