ಮಂಗಳೂರಿನಲ್ಲಿ ಭೀಕರ ಲಿಫ್ಟ್ ದುರಂತ; ಲಿಫ್ಟ್ ನಲ್ಲಿ ಸಿಲುಕಿದ್ದ ಯುವಕನನ್ನು ಹೊರಕ್ಕೆ ಎಳೆಯಲೆತ್ನಿಸಿ ದುರ್ಘಟನೆ, ಯುವಕ ದಾರುಣ ಸಾವು

17-05-26 05:49 pm       HK News Staffer   ಕ್ರೈಂ

ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ ಯುವಕನನ್ನು ರಕ್ಷಿಸಲು ಹೋಗಿ ಎಡೆಯಿಂದ ಎಳೆಯಲೆತ್ನಿಸಿದಾಗಲೇ ಏಕಾಏಕಿ ಲಿಫ್ಟ್ ಚಲಿಸಿ, 28 ವರ್ಷದ ಯುವಕ ದಾರುಣವಾಗಿ ಮೃತಪಟ್ಟ ಘಟನೆ ನಗರದ ಕುಂಟಿಕಾನದಲ್ಲಿ ನಡೆದಿದೆ.

ಮಂಗಳೂರು, ಮೇ 17: ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ ಯುವಕನನ್ನು ರಕ್ಷಿಸಲು ಹೋಗಿ ಎಡೆಯಿಂದ ಎಳೆಯಲೆತ್ನಿಸಿದಾಗಲೇ ಏಕಾಏಕಿ ಲಿಫ್ಟ್ ಚಲಿಸಿ, 28 ವರ್ಷದ ಯುವಕ ದಾರುಣವಾಗಿ ಮೃತಪಟ್ಟ ಘಟನೆ ನಗರದ ಕುಂಟಿಕಾನದಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಬೆಳಾಲು ಪೂಂಜಕೆರೆ ನಿವಾಸಿ ನೌಫಾಲ್ ಮೃತ ಯುವಕ. ನೌಫಾಲ್ ಅವಿವಾಹಿತರಾಗಿದ್ದು ಆನ್‌ಲೈನ್ ಡೆಲಿವರಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರ ಸಂಜೆ ಕೆಲಸದ ನಿಮಿತ್ತ ಲಿಫ್ಟ್‌ನಲ್ಲಿ ಸಾಮಗ್ರಿಗಳನ್ನು ತುಂಬಿಕೊಂಡು ಕೆಳ ಮಹಡಿಗೆ ಬರುತ್ತಿದ್ದ ವೇಳೆ, ಲಿಫ್ಟ್ ಏಕಾಏಕಿ ಒಂದನೇ ಮಹಡಿ ಮತ್ತು ನೆಲಮಹಡಿ ನಡುವಿನ ಭಾಗದಲ್ಲಿ ಕೆಟ್ಟು ನಿಂತಿದೆ. ಲಿಫ್ಟ್‌ನಲ್ಲಿ ನೌಫಾಲ್ ಸಿಲುಕಿರುವ ಮಾಹಿತಿ ತಿಳಿದ ತಕ್ಷಣ ಸಹೋದ್ಯೋಗಿಗಳು ರಕ್ಷಣೆಗೆ ಧಾವಿಸಿದ್ದಾರೆ.

ಲಿಫ್ಟ್‌ನ ಅರ್ಧ ಭಾಗ ಒಂದನೇ ಮಹಡಿಗೆ ಸಮೀಪದಲ್ಲಿದ್ದ ಕಾರಣ, ಬಾಗಿಲನ್ನು ಬಲವಂತವಾಗಿ ತೆರೆಯಲಾಗಿತ್ತು. ಬಳಿಕ ನೌಫಾಲ್ ಅವರನ್ನು ಮೇಲಕ್ಕೆ ಎಳೆಯಲು ಸಹೋದ್ಯೋಗಿಗಳು ಕೈ ಹಿಡಿದು ರಕ್ಷಿಸಲು ಯತ್ನಿಸುತ್ತಿದ್ದಾಗ, ಏಕಾಏಕಿ ಲಿಫ್ಟ್ ಕೆಳಕ್ಕೆ ಚಲಿಸಿದೆ. ಪರಿಣಾಮ ನೌಫಾಲ್ ಲಿಫ್ಟ್‌ ಎಡೆಯಲ್ಲಿ ಸಿಲುಕಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. 

ಭಯಾನಕ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.