ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ; ಎಸಿ ಕೋಚ್ ನಲ್ಲಿ ಏಕಾಏಕಿ ಬೆಂಕಿ ಅವಘಡ, ತುರ್ತು ಕಾರ್ಯಾಚರಣೆಗೆ ತಪ್ಪಿದ ಅನಾಹುತ

17-05-26 05:51 pm       HK News Staffer   ಕ್ರೈಂ

ತಿರುವನಂತಪುರಂನಿಂದ ರಾಜಧಾನಿ ದೆಹಲಿಗೆ ತೆರಳುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಎಸಿ ಕೋಚ್‌ನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಭೋಪಾಲ್, ಮೇ 17: ತಿರುವನಂತಪುರಂನಿಂದ ರಾಜಧಾನಿ ದೆಹಲಿಗೆ ತೆರಳುತ್ತಿದ್ದ  ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಎಸಿ ಕೋಚ್‌ನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ರೈಲು ಸಾಗುತ್ತಿದ್ದಾಗ ಭಾನುವಾರ ನಸುಕಿನ 5:15 ರ ವೇಳೆಗೆ ರೈಲು ಸಂಖ್ಯೆ 12431ರ ಬಿ-1 (B-1) ಎಸಿ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರೈಲು ಚಲಿಸುತ್ತಿದ್ದಾಗ ಬಿ-1 ಬೋಗಿಯಿಂದ ದಟ್ಟವಾದ ಹೊಗೆ ಹಾಗೂ ಬೆಂಕಿ ಬರುತ್ತಿರುವುದನ್ನು ರೈಲಿನ ಗಾರ್ಡ್ ಗಮನಿಸಿದ್ದು, ತಕ್ಷಣವೇ ಲೋಕೋ ಪೈಲಟ್‌ಗೆ ಮಾಹಿತಿ ರವಾನಿಸಿದ್ದಾರೆ. ತಕ್ಷಣ ರೈಲನ್ನು ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದು ರೈಲ್ವೆ ರಕ್ಷಣಾ ಪಡೆ ಮತ್ತು ರೈಲ್ವೆ ಸಿಬ್ಬಂದಿ, ತುರ್ತು ಕಾರ್ಯಾಚರಣೆ ಮೂಲಕ ಬೋಗಿಯಲ್ಲಿದ್ದ ಎಲ್ಲಾ 68 ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಇದೇ ವೇಳೆ ಮುನ್ನೆಚ್ಚರಿಕಾ ಕ್ರಮವಾಗಿ ಓವರ್‌ ಹೆಡ್‌ ವಿದ್ಯುತ್ ಸರಬರಾಜನ್ನು ತಕ್ಷಣವೇ ಸ್ಥಗಿತಗೊಳಿಸಿ, ಬೆಂಕಿ ಹತ್ತಿಕೊಂಡಿದ್ದ ಬೋಗಿಗಳನ್ನು ರೈಲಿನ ಉಳಿದ ಭಾಗದಿಂದ ಯಶಸ್ವಿಯಾಗಿ ಬೇರ್ಪಡಿಸಿದ್ದಾರೆ. ಪ್ರಾಣಹಾನಿ ತಪ್ಪಿದರೂ, ಪ್ರಯಾಣಿಕರು ತಮ್ಮ ಲಗೇಜ್‌ಗಳನ್ನು ಬೋಗಿಯಲ್ಲೇ ಬಿಟ್ಟು ಓಡಿ ಬಂದಿದ್ದರಿಂದ ಕೆಲವು ಅತ್ಯಮೂಲ್ಯ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಲ್ಲದೆ ಹಳಿಯ ಪಕ್ಕದಲ್ಲಿದ್ದ ಒಣ ಮರಗಳಿಗೂ ಬೆಂಕಿ ವ್ಯಾಪಿಸಿದ್ದು, ಸ್ಥಳಕ್ಕೆ ಧಾವಿಸಿದ ಮೂರು ಅಗ್ನಿಶಾಮಕ ದಳದ ವಾಹನಗಳು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿವೆ. 

ರೈಲ್ವೆ ತಾಂತ್ರಿಕ ತಂಡದ ಪ್ರಾಥಮಿಕ ತನಿಖೆಯ ಪ್ರಕಾರ, ಬಿ-1 ಎಸಿ ಕೋಚ್‌ನ ಬ್ಯಾಟರಿ ಬಾಕ್ಸ್ ಅಥವಾ ಎಲೆಕ್ಟ್ರಿಕಲ್ ಕಂಟ್ರೋಲ್ ಪ್ಯಾನೆಲ್‌ನಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ಅಗ್ನಿ ಅವಘಡಕ್ಕೆ ಪ್ರಮುಖ ಕಾರಣ ಎಂದು ಶಂಕಿಸಲಾಗಿದೆ.