ಕೊಡಚಾದ್ರಿ ಬೆಟ್ಟದಿಂದ ಮರಳುತ್ತಿದ್ದ ಪ್ರವಾಸಿಗರ ಜೀಪಿಗೆ ಮೀನಿನ ಲಾರಿ ಡಿಕ್ಕಿ; ಕೇರಳದ ಇಬ್ಬರು ಸಾವು, ಹಲವರು ಗಂಭೀರ

17-05-26 08:14 pm       HK News Staffer   ಕ್ರೈಂ

ಕೊಲ್ಲೂರು ಸಮೀಪದ ದಳಿ ಎಂಬಲ್ಲಿ ಕೊಡಚಾದ್ರಿ ಬೆಟ್ಟಕ್ಕೆ ತೆರಳಿ ಹಿಂತಿರುಗುತ್ತಿದ್ದ ಜೀಪು ಭಾನುವಾರ ಮಧ್ಯಾಹ್ನ ಮೀನು ಸಾಗಾಟದ ಲಾರಿಗೆ ಡಿಕ್ಕಿಯಾಗಿ ಕೇರಳ ಮೂಲದ ಇಬ್ಬರು ಪ್ರವಾಸಿಗರು ಮೃತಪಟ್ಟಿದ್ದಾರೆ. ಮೂವರು ಮಕ್ಕಳು ಸೇರಿದಂತೆ ಒಟ್ಟು ಎಂಟು ಮಂದಿ ತೀವ್ರ ಗಾಯಗೊಂಡಿದ್ದಾರೆ. ಕೇರಳ ಮೂಲದ ಜ್ಯೋತಿ (35) ಹಾಗೂ ಆರ್ಯ ಅನೂಪ್ (28) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಕುಂದಾಪುರ, ಮೇ 17: ಕೊಲ್ಲೂರು ಸಮೀಪದ ದಳಿ ಎಂಬಲ್ಲಿ ಕೊಡಚಾದ್ರಿ ಬೆಟ್ಟಕ್ಕೆ ತೆರಳಿ ಹಿಂತಿರುಗುತ್ತಿದ್ದ ಜೀಪು ಭಾನುವಾರ ಮಧ್ಯಾಹ್ನ ಮೀನು ಸಾಗಾಟದ ಲಾರಿಗೆ ಡಿಕ್ಕಿಯಾಗಿ ಕೇರಳ ಮೂಲದ ಇಬ್ಬರು ಪ್ರವಾಸಿಗರು ಮೃತಪಟ್ಟಿದ್ದಾರೆ. ಮೂವರು ಮಕ್ಕಳು ಸೇರಿದಂತೆ ಒಟ್ಟು ಎಂಟು ಮಂದಿ ತೀವ್ರ ಗಾಯಗೊಂಡಿದ್ದಾರೆ. ಕೇರಳ ಮೂಲದ ಜ್ಯೋತಿ (35) ಹಾಗೂ ಆರ್ಯ ಅನೂಪ್ (28) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು ಎಂದು ಗುರುತಿಸಲಾಗಿದೆ. 

ಅಪಘಾತದಲ್ಲಿ ಜೀಪ್‌ನಲ್ಲಿದ್ದ ಪ್ರವಾಸಿಗರು ಹಾಗೂ ಚಾಲಕ ಸೇರಿದಂತೆ ಎಂಟು ಮಂದಿ ತೀವ್ರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಅಯನ್ (5), ಅವನಿ (8), ಅರ್ಜುನ್ (9), ಮಿನಿ (60), ಅಭಿ (36), ಅನೂಪ್ (37), ಜ್ಯೋತಿಷ್ (43) ಮತ್ತು ಜೀಪು ಚಾಲಕ ದೇವರಾಜ್ ಎಂದು ಗುರುತಿಸಲಾಗಿದೆ. ಇವರೆಲ್ಲರಿಗೂ ಕುಂದಾಪುರ ಹಾಗೂ ಮಣಿಪಾಲದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳೆಲ್ಲ ಕೇರಳ ರಾಜ್ಯದ ಒಂದೇ ಕುಟುಂಬದ ಪ್ರವಾಸಿಗರು ಎಂದು ತಿಳಿದುಬಂದಿದೆ. 

ಇವರು ಜೀಪಿನಲ್ಲಿ ಕೊಡಚಾದ್ರಿ ಬೆಟ್ಟ ವೀಕ್ಷಿಸಿ ಕೊಲ್ಲೂರಿನತ್ತ ಮರಳುತ್ತಿದ್ದಾಗ ಕೊಲ್ಲೂರಿನಿಂದ ನಾಗೋಡಿ ಕಡೆಗೆ ಸಾಗುತ್ತಿದ್ದ ಮೀನಿನ ಲಾರಿ ನಡುವೆ ದಳಿ ಎಂಬಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಕೊಲ್ಲೂರು ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.