ಬೇರೊಬ್ಬ ಮಹಿಳೆ ಹೆಸರಲ್ಲಿ ಪಾಸ್ಪೋರ್ಟ್ ಪಡೆದು ಇಸ್ರೇಲ್ ತೆರಳಿದ್ದ ಪ್ರಕರಣ ; ಪೊಲೀಸರದ್ದೇ ಎಡವಟ್ಟು, ಇಲಾಖಾ ತನಿಖೆಗೆ ಆದೇಶಿಸಿದ ಪೊಲೀಸ್ ಕಮಿಷನರ್

17-05-26 09:10 pm       HK News Staffer   ಕ್ರೈಂ

ಉಳ್ಳಾಲದ ಮಹಿಳೆಯೊಬ್ಬರು ಬೇರೊಬ್ಬ ಮಹಿಳೆಯ ಹೆಸರಲ್ಲಿ ಪಾಸ್ಪೋರ್ಟ್ ಪಡೆದು ಇಸ್ರೇಲ್ ತೆರಳಿದ ಪ್ರಕರಣದಲ್ಲಿ ಪೊಲೀಸರೇ ಎಡವಟ್ಟು ಮಾಡಿಕೊಂಡ ಆರೋಪ ಕೇಳಿಬಂದಿದೆ. ಈ ಬಗ್ಗೆ ತಿಳಿಯುತ್ತಲೇ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಇಲಾಖಾ ತನಿಖೆಗೆ ಆದೇಶ ಮಾಡಿದ್ದಾರೆ.

ಮಂಗಳೂರು, ಮೇ 17: ಉಳ್ಳಾಲದ ಮಹಿಳೆಯೊಬ್ಬರು ಬೇರೊಬ್ಬ ಮಹಿಳೆಯ ಹೆಸರಲ್ಲಿ ಪಾಸ್ಪೋರ್ಟ್ ಪಡೆದು ಇಸ್ರೇಲ್ ತೆರಳಿದ ಪ್ರಕರಣದಲ್ಲಿ ಪೊಲೀಸರೇ ಎಡವಟ್ಟು ಮಾಡಿಕೊಂಡ ಆರೋಪ ಕೇಳಿಬಂದಿದೆ. ಈ ಬಗ್ಗೆ ತಿಳಿಯುತ್ತಲೇ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಇಲಾಖಾ ತನಿಖೆಗೆ ಆದೇಶ ಮಾಡಿದ್ದಾರೆ.

ಉಳ್ಳಾಲಬೈಲು ನಿವಾಸಿ ಪ್ರೀತಾ ಡಿಸೋಜ ಎಂಬವರು ಯಶೋಧ ಕೇಶವ ಎಂಬ ಮಹಿಳೆಯ ಹೆಸರಲ್ಲಿ ಪಾಸ್ಪೋರ್ಟ್ ಅರ್ಜಿ ಸಲ್ಲಿಸಿ ಪ್ರತ್ಯೇಕ ಪಾಸ್ ಪೋರ್ಟ್ ಮಾಡಿಸಿಕೊಂಡಿದ್ದರು. ದಾಖಲೆಯಲ್ಲಿ ಯಶೋಧ ಎನ್ನುವ ಹೆಸರಿದ್ದರೂ, ಅರ್ಜಿಯಲ್ಲಿ ಪ್ರೀತಾ ಡಿಸೋಜ ಅವರದ್ದೇ ಫೋಟೋ ಲಗತ್ತಿಸಲಾಗಿತ್ತು. ಹೀಗಾಗಿ ಪರಿಶೀಲನೆ ಸಂದರ್ಭದಲ್ಲಿ ತಪ್ಪೆಸಗಿದ್ದು ಪೊಲೀಸರಿಗೆ ಅರಿವಿಗೆ ಬಂದಿರಲಿಲ್ಲ.

ತಪ್ಪು ಮಾಹಿತಿ ನೀಡಿ ಪಾಸ್ಪೋರ್ಟ್ ಮಾಡಿಸಿದ್ದಲ್ಲದೆ, ಅದೇ ನಕಲಿ ವಿಳಾಸದ ಮೂಲಕ ಪ್ರೀತಾ ಡಿಸೋಜ 2025ರ ಮಾರ್ಚ್ 17ರಂದು ಮುಂಬೈ ವಿಮಾನ ನಿಲ್ದಾಣದ ಮೂಲಕ ಇಸ್ರೇಲ್ ತೆರಳಿದ್ದರು. ಆದರೆ ಆ ಸಂದರ್ಭದಲ್ಲಿ ಉಳ್ಳಾಲ ಇನ್ಸ್ ಪೆಕ್ಟರ್ ಆಗಿದ್ದ ಬಾಲಕೃಷ್ಣ ಮತ್ತು ಪಾಸ್ಪೋರ್ಟ್ ಪರಿಶೀಲನೆ ಮಾಡಿದ್ದ ಹೆಡ್ ಕಾನ್ಸ್ ಟೇಬಲ್ ಅವರ ನಿರ್ಲಕ್ಷ್ಯದಿಂದಾಗಿ ಪ್ರಮಾದ ಆಗಿರುವುದು ಮೇಲ್ನೋಟಕ್ಕೆ ವ್ಯಕ್ತವಾಗಿದ್ದರಿಂದ ಪೊಲೀಸ್ ಕಮಿಷನರ್ ಇಲಾಖಾ ತನಿಖೆಗೆ ಆದೇಶ ಮಾಡಿದ್ದಾರೆ.

ಪಾಸ್ಪೋರ್ಟ್ ಸೇವಾ ಪೋರ್ಟಲ್ ದಾಖಲೆಗಳ ಪ್ರಕಾರ, ಅರ್ಜಿಯಲ್ಲಿ ಯಶೋಧ ಕೇಶವ ಎಂಬುದಾಗಿ ಕೈಬರಹದಲ್ಲಿ ನಮೂದಿಸಿದ್ದು, ಪ್ರೀತಾ ಡಿಸೋಜ ಅವರ ಫೋಟೋ ಲಗತ್ತಿಸಲಾಗಿತ್ತು. ಯಶೋಧ ಹೆಸರಿನ ಸಹಿಯನ್ನೂ ಪ್ರೀತಾ ಡಿಸೋಜ ಮಾಡಿರುವುದು ಮೇಲ್ನೋಟಕ್ಕೆ ಪತ್ತೆಯಾಗಿದೆ. ಇಷ್ಟೆಲ್ಲ ಅವಾಂತರ ಮಾಡಿದ್ದರೂ ಪರಿಶೀಲನೆ ಮಾಡಿದ್ದ ಅಂದಿನ ಪೊಲೀಸರು, ಸರಿಯಾದ ದಾಖಲೆಗಳನ್ನು ನೋಡಿಕೊಳ್ಳದೆ ನಿರ್ಲಕ್ಷ್ಯ ಮಾಡಿದ್ದು ಎದ್ದು ಕಾಣುತ್ತದೆ.

ಈ ಅಕ್ರಮಕ್ಕೆ ಉಳ್ಳಾಲ ನಿವಾಸಿ ಪ್ರೇಮ್ ಡಿಸೋಜ ಎಂಬಾತ ಸಹಕರಿಸಿದ್ದು, ಪ್ರೀತಾಳನ್ನು ಇಸ್ರೇಲ್ ಕಳುಹಿಸುವ ಉದ್ದೇಶದಿಂದ ತನ್ನ ಪರಿಚಯದ ಯಶೋಧ ಅವರ ದಾಖಲೆಗಳನ್ನು ತಯಾರಿ ಮಾಡಿಕೊಟ್ಟಿದ್ದ. ಇದೀಗ ಅಕ್ರಮ ತಿಳಿಯುತ್ತಿದ್ದಂತೆ ಉಳ್ಳಾಲ ಠಾಣೆಯಲ್ಲಿ ಪ್ರೇಮ್ ಡಿಸೋಜ, ಪ್ರೀತಾ ಡಿಸೋಜ, ಯಶೋಧ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.