Jones Asset Fraud, Bangalore: ಲೀಸ್ ಮನೆ ಹೆಸರಿನಲ್ಲಿ “ಜೋನ್ಸ್ ಅಸೆಟ್” ಕಂಪನಿಯಿಂದ 200 ಕೋಟಿ ರೂ. ವಂಚನೆ ; ಬೆಂಗಳೂರಿನಲ್ಲಿ 300ಕ್ಕೂ ಹೆಚ್ಚು ಜನರಿಗೆ ಮಕ್ಮಲ್ ಟೋಪಿ, ಆರೋಪಿ ಪರಾರಿ

18-05-26 11:36 am       HK News Staffer   ಕ್ರೈಂ

ನಗರದಲ್ಲಿ ಮನೆಗಳನ್ನು ಲೀಸ್ಗೆ ಪಡೆಯಲು ಬಯಸುವ ಸಾರ್ವಜನಿಕರನ್ನೇ ಗುರಿಯಾಗಿಸಿಕೊಂಡು ಸುಮಾರು 200 ಕೋಟಿ ರೂಪಾಯಿಗೂ ಅಧಿಕ ಹಣ ವಂಚಿಸಿರುವ ಭಾರೀ ಮೋಸದ ಜಾಲ ಇದೀಗ ಬೆಳಕಿಗೆ ಬಂದಿದೆ. “ಜೋನ್ಸ್ ಅಸೆಟ್” ಎಂಬ ಮಿಡಿಯೇಟರ್ ಕಂಪನಿಯು ಮನೆ ಲೀಸ್ ಹೆಸರಿನಲ್ಲಿ ನೂರಾರು ಜನರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚನೆ ನಡೆಸಿರುವ ಆರೋಪ ಕೇಳಿಬಂದಿದೆ.

ಬೆಂಗಳೂರು, ಮೇ 18: ನಗರದಲ್ಲಿ ಮನೆಗಳನ್ನು ಲೀಸ್ಗೆ ಪಡೆಯಲು ಬಯಸುವ ಸಾರ್ವಜನಿಕರನ್ನೇ ಗುರಿಯಾಗಿಸಿಕೊಂಡು ಸುಮಾರು 200 ಕೋಟಿ ರೂಪಾಯಿಗೂ ಅಧಿಕ ಹಣ ವಂಚಿಸಿರುವ ಭಾರೀ ಮೋಸದ ಜಾಲ ಇದೀಗ ಬೆಳಕಿಗೆ ಬಂದಿದೆ. “ಜೋನ್ಸ್ ಅಸೆಟ್” ಎಂಬ ಮಿಡಿಯೇಟರ್ ಕಂಪನಿಯು ಮನೆ ಲೀಸ್ ಹೆಸರಿನಲ್ಲಿ ನೂರಾರು ಜನರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚನೆ ನಡೆಸಿರುವ ಆರೋಪ ಕೇಳಿಬಂದಿದೆ.

ಈ ಪ್ರಕರಣದಲ್ಲಿ ಸುಮಾರು 300ಕ್ಕೂ ಹೆಚ್ಚು ಮಂದಿ ಸಂತ್ರಸ್ತರಾಗಿರುವುದಾಗಿ ತಿಳಿದುಬಂದಿದ್ದು, ಕಂಪನಿಯ ಮಾಲೀಕ ಸ್ಟೀಫನ್ ಅರ್ಥರ್ ಹಣದೊಂದಿಗೆ ಪರಾರಿಯಾಗಿದ್ದಾನೆ. ಪ್ರಕರಣ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ನಗರದಲ್ಲಿ ಲೀಸ್ ಮನೆಗಳ ಬೇಡಿಕೆ ಹೆಚ್ಚಿರುವುದನ್ನು ಬಂಡವಾಳ ಮಾಡಿಕೊಂಡ ಕಂಪನಿ, “ನಿಮ್ಮ ಲೀಸ್ ಹಣವನ್ನು ನಮಗೆ ನೀಡಿ, ನಾವು ನಿಮಗಾಗಿ ಮನೆ ಹುಡುಕಿ ಅದರ ಮಾಸಿಕ ಬಾಡಿಗೆಯನ್ನು ನಾವೇ ಪಾವತಿಸುತ್ತೇವೆ” ಎಂದು ಸಾರ್ವಜನಿಕರಿಗೆ ಆಮಿಷ ಒಡ್ಡುತ್ತಿತ್ತು. ಇದರಿಂದ ಲೀಸ್ ಹಣವೂ ಉಳಿಯುತ್ತದೆ, ಪ್ರತಿ ತಿಂಗಳು ಬಾಡಿಗೆ ಕಟ್ಟುವ ತೊಂದರೆಯೂ ಇರುವುದಿಲ್ಲ ಎಂದು ನಂಬಿಸಿದ ಕಂಪನಿ, ತಲಾ 10 ಲಕ್ಷದಿಂದ 75 ಲಕ್ಷ ರೂಪಾಯಿವರೆಗೆ ಹಣ ವಸೂಲಿ ಮಾಡಿದೆ ಎನ್ನಲಾಗಿದೆ.

ಆರಂಭದಲ್ಲಿ ಕೆಲವು ತಿಂಗಳು ಮನೆ ಮಾಲೀಕರಿಗೆ ಬಾಡಿಗೆ ಪಾವತಿಸಿ ಗ್ರಾಹಕರ ವಿಶ್ವಾಸ ಗಳಿಸಿದ್ದ ಕಂಪನಿ, ನಂತರ ನಿಧಾನವಾಗಿ ಪಾವತಿಯನ್ನು ನಿಲ್ಲಿಸಿ ಕಳ್ಳಾಟ ಆರಂಭಿಸಿದೆ ಎಂಬ ಆರೋಪ ಕೇಳಿಬಂದಿದೆ.

ಸಂತ್ರಸ್ತೆ ಗಾಯತ್ರಿ ತಮ್ಮ ಅನುಭವ ಹಂಚಿಕೊಂಡಿದ್ದು, ತಮಗೊಬ್ಬರಿಗೇ ಸುಮಾರು 37 ಲಕ್ಷ ರೂ. ವಂಚನೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಮನೆ ಮಾಲೀಕರು ಮನೆ ಖಾಲಿ ಮಾಡುವಂತೆ ಒತ್ತಾಯಿಸಿದ ಬಳಿಕ ಅವರು ಕಂಪನಿಯ ಬಳಿ ಹಣ ವಾಪಸ್ ಕೇಳಲು ಹೋಗಿದ್ದರು. ಈ ವೇಳೆ ಕಂಪನಿ, “ಹಣ ವಾಪಸ್ ಪಡೆಯುವುದಕ್ಕಿಂತ ನಮ್ಮಲ್ಲೇ ಹೂಡಿಕೆ ಮಾಡಿ, ತಿಂಗಳಿಗೆ ಶೇ.4ರಷ್ಟು ಬಡ್ಡಿ ಪಡೆಯಿರಿ” ಎಂದು ಮತ್ತೊಂದು ಆಮಿಷ ತೋರಿಸಿದೆ ಎಂದು ತಿಳಿಸಿದ್ದಾರೆ.
ಈ ಮಾತು ನಂಬಿ ಹೂಡಿಕೆ ಮಾಡಿದ್ದ ಗಾಯತ್ರಿಗೆ ಮೊದಲ ಎರಡು ತಿಂಗಳು ಮಾತ್ರ ಹಣ ನೀಡಿ, ಬಳಿಕ ಯಾವುದೇ ಪ್ರತಿಕ್ರಿಯೆ ನೀಡದೆ ಕಂಪನಿ ಕೈಕಳೆದಿದೆ ಎನ್ನಲಾಗಿದೆ.

ಇದೀಗ ಕಂಪನಿ ಕಚೇರಿ ಮುಚ್ಚಲ್ಪಟ್ಟಿದ್ದು, ಮಾಲೀಕ ಸ್ಟೀಫನ್ ಅರ್ಥರ್ ಕೋಟ್ಯಂತರ ರೂಪಾಯಿ ಹಣದೊಂದಿಗೆ ಪರಾರಿಯಾಗಿದ್ದಾನೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಹಣ ಕಳೆದುಕೊಂಡ ಹಲವರು ಇಂದಿರಾನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾರೆ.

ಪ್ರಕರಣದ ಗಂಭೀರತೆಯನ್ನು ಗಮನಿಸಿರುವ ಪೊಲೀಸರು ಕಂಪನಿಯ ಹಣಕಾಸು ವ್ಯವಹಾರ, ಹೂಡಿಕೆ ಮಾದರಿ ಹಾಗೂ ವಂಚನೆ ಜಾಲದ ಕುರಿತು ಸಮಗ್ರ ತನಿಖೆ ಆರಂಭಿಸಿದ್ದಾರೆ. ಇನ್ನೂ ಹೆಚ್ಚಿನ ಮಂದಿ ಸಂತ್ರಸ್ತರಾಗಿರುವ ಸಾಧ್ಯತೆಯೂ ವ್ಯಕ್ತವಾಗಿದೆ.