ತಾಯಿಗೆ ಅವಾಚ್ಯವಾಗಿ ನಿಂದಿಸಿದ್ದಕ್ಕೆ ಹೆಣವಾದ ಅಣ್ಣ, ಆತ್ಮಹತ್ಯೆಯ ನಾಟಕವಾಡಿ ಸಿಕ್ಕಿಬಿದ್ದ ತಮ್ಮ, ರಾಯಚೂರಿನಲ್ಲಿ ಬೆಚ್ಚಿಬಿದ್ದ ಜನ!

18-05-26 12:37 pm       HK News Staffer   ಕ್ರೈಂ

ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಅಣ್ಣನನ್ನೇ ತಮ್ಮ ಕೊಲೆ ಮಾಡಿರುವ ಹೃದಯ ಕಲುಕುವ ಘಟನೆ ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಬಸವಸಾಗರ ಕ್ರಾಸ್ ಬಳಿ ನಡೆದಿದೆ.

ರಾಯಚೂರು, ಮೇ 18: ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಅಣ್ಣನನ್ನೇ ತಮ್ಮ ಕೊಲೆ ಮಾಡಿರುವ ಹೃದಯ ಕಲುಕುವ ಘಟನೆ ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಬಸವಸಾಗರ ಕ್ರಾಸ್ ಬಳಿ ನಡೆದಿದೆ.

ಮೃತರನ್ನು ಬಸವರಾಜ (37) ಎಂದು ಗುರುತಿಸಲಾಗಿದ್ದು, ಆರೋಪಿ ಶ್ರೀಧರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧ ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಕೊಲೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಮಾಹಿತಿ ನೀಡಿದ್ದು, ಮೃತ ಬಸವರಾಜ ಕುಡಿದು ಮನೆಗೆ ಬಂದು ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ತಮ್ಮ ಶ್ರೀಧರ್, ಅಣ್ಣ ನಿದ್ರೆಗೆ ಜಾರಿದ ಬಳಿಕ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಅಣ್ಣನನ್ನು ಕೊಲೆ ಮಾಡಿದ ಬಳಿಕ, ಘಟನೆ ಆತ್ಮಹತ್ಯೆಯಂತೆ ತೋರಿಸಲು ಶ್ರೀಧರ್ ಕುತಂತ್ರ ರೂಪಿಸಿದ್ದಾನೆ. ಸೀರೆಯನ್ನು ಬಳಸಿಕೊಂಡು ಫ್ಯಾನ್‌ಗೆ ಅಣ್ಣನ ಹೆಣವನ್ನು ನೇತು ಹಾಕಿ ಅಣ್ಣನೇ ನೇಣು ಹಾಕಿಕೊಂಡಿದ್ದಾನೆ ಎಂಬಂತೆ ಮನೆಯವರಿಗೆ ನಂಬಿಸಲು ಯತ್ನಿಸಿದ್ದಾನೆ. ಇದರ ಜೊತೆಗೆ, ಬಳಿಕ ಬಾಗಿಲಿ‌ನ ಚೀಲಕ ಮುರಿದಂತೆ ಮಾಡಿ ಅಣ್ಣನ ಶವವನ್ನು ಕೆಳಗೆ ಇಳಿಸಿದ ತಮ್ಮ ತದನಂತರ ಅಣ್ಣ ಬಸವರಾಜ್ ಜೀವ ಇರಬಹುದು ಎಂದು ತಾಯಿಗೆ ನಂಬಿಸಿ ಖಾಸಗಿ ವಾಹನದಲ್ಲಿ ಶವ ತೆಗೆದುಕೊಂಡು ತಾಲೂಕು ಆಸ್ಪತ್ರೆಗೆ ಹೋಗಿದ್ದಾನೆ.

ತಾಲೂಕು ಆಸ್ಪತ್ರೆಯಲ್ಲಿ ವೈದ್ಯರು ಪರಿಶೀಲನೆ ನಡೆಸಿದಾಗ, ಬಸವರಾಜ್ ಈಗಾಗಲೇ ಮೃತಪಟ್ಟಿರುವುದು ದೃಢಪಟ್ಟಿದೆ. ಇದರಿಂದ ಘಟನೆಗೆ ಹೊಸ ತಿರುವು ಸಿಕ್ಕಿದ್ದು, ಅನುಮಾನಗಳು ಗಟ್ಟಿಯಾದವು. ಇತ್ತ ಬಸವರಾಜ್ ಸಾವಿನ ಕುರಿತು ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಮೃತನ ತಂದೆ ವಾಸುದೇವ್ ದೂರು ನೀಡಿದ್ದಾರೆ. ಮಾಹಿತಿ ದೊರಕುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಪ್ರಕರಣದ ಗಂಭೀರತೆಯನ್ನು ಗಮನಿಸಿದ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.