ದುಬಾರೆ ಶಿಬಿರದಲ್ಲಿ ಆನೆಗಳ ಕಾದಾಟ; ಚೆನ್ನೈ ಮೂಲದ ಪ್ರವಾಸಿ ಮಹಿಳೆ ಆನೆಯಡಿಗೆ ಬಿದ್ದು ಸಾವು, ದಾರುಣ ದುರಂತ ದೃಶ್ಯ ಸೆರೆ

18-05-26 06:21 pm       HK News Staffer   ಕ್ರೈಂ

ಸಾಕಾನೆಗಳ ಕಾದಾಟದ ವೇಳೆ ಪ್ರವಾಸ ಬಂದಿದ್ದ ಮಹಿಳೆಯೊಬ್ಬರು ಅವುಗಳ ನಡುವೆ ಸಿಲುಕಿ ದಾರುಣ ಮೃತಪಟ್ಟ ಘಟನೆ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದ ದುಬಾರೆ ಆನೆ ಶಿಬಿರದಲ್ಲಿ ನಡೆದಿದೆ. ಎರಡು ಆನೆಗಳ ತಳ್ಳಾಟದ ವೇಳೆ ಅಲ್ಲಿಯೇ ನಿಂತುಕೊಂಡಿದ್ದ ಮಹಿಳೆ ನೆಲಕ್ಕುರುಳಿದ್ದು ಆನೆಯ ಕಾಲಿನಡಿಗೆ ಬಿದ್ದಿದ್ದಾರೆ.

ಮಡಿಕೇರಿ, ಮೇ 18: ಸಾಕಾನೆಗಳ ಕಾದಾಟದ ವೇಳೆ ಪ್ರವಾಸ ಬಂದಿದ್ದ ಮಹಿಳೆಯೊಬ್ಬರು ಅವುಗಳ ನಡುವೆ ಸಿಲುಕಿ ದಾರುಣ ಮೃತಪಟ್ಟ ಘಟನೆ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದ ದುಬಾರೆ ಆನೆ ಶಿಬಿರದಲ್ಲಿ ನಡೆದಿದೆ. ಎರಡು ಆನೆಗಳ ತಳ್ಳಾಟದ ವೇಳೆ ಅಲ್ಲಿಯೇ ನಿಂತುಕೊಂಡಿದ್ದ ಮಹಿಳೆ ನೆಲಕ್ಕುರುಳಿದ್ದು ಆನೆಯ ಕಾಲಿನಡಿಗೆ ಬಿದ್ದಿದ್ದಾರೆ. 

ಗಂಭೀರ ಗಾಯಗೊಂಡಿದ್ದ ಆಕೆಯನ್ನು ಕೂಡಲೇ ಕುಶಾಲನಗರ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮೃತರನ್ನು ಚೆನ್ನೈ ಮೂಲದ ಜಿನ್ಶು(33) ಎಂದು ಗುರುತಿಸಲಾಗಿದೆ. ಮಹಿಳೆ ತನ್ನ ಕುಟುಂಬ ಸಮೇತ ನಂಜರಾಯಪಟ್ಟಣದ ದುಬಾರೆ ಆನೆ ಶಿಬಿರಕ್ಕೆ ಪ್ರವಾಸ ಬಂದಿದ್ದರು. ಕಾವೇರಿ ನೀರಿನಲ್ಲಿ ಆಟವಾಡುತ್ತಿದ್ದ ಸಂದರ್ಭ ಆನೆಗಳನ್ನು ಸಾಕುವ ಮಾವುತರು ಕಂಜನ್​​ ಮತ್ತು ಮಾರ್ತಾಂಡ ಎಂಬ ಎರಡು ಆನೆಗಳನ್ನು ಸ್ನಾನಕ್ಕೆ ಕರೆತಂದಿದ್ದರು. ಈ ವೇಳೆ ಆನೆಗಳ ನಡುವೆ ಕಾದಾಟ ಶುರುವಾಗಿದೆ. ತಳ್ಳಾಟದಲ್ಲಿ ಅಲ್ಲೇ ಇದ್ದ ಪ್ರವಾಸಿ ಮಹಿಳೆಯ ಮೇಲೆ ಮಾರ್ತಾಂಡ ಆನೆ ಬಿದ್ದಿದ್ದು, ನೆಲಕ್ಕೆ ಅಪ್ಪಳಿಸಿದ ಜಿನ್ಶು ಅವರ ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. 

ಆನೆಗಳ ನಿಯಂತ್ರಣಕ್ಕೆ ಮಾವುತರಿಬ್ಬರು ಸತತ ಪ್ರಯತ್ನ ನಡೆಸಿದರೂ, ಮಗುವನ್ನು ಕೈನಲ್ಲಿ ಹಿಡಿದಿದ್ದ ವ್ಯಕ್ತಿಯೊಬ್ಬರು ಮತ್ತು ಇತರರು ಮಹಿಳೆಯ ರಕ್ಷಣೆಗೆ ಯತ್ನಿಸಿದರೂ ಫಲಕಾರಿಯಾಗಿಲ್ಲ. ಇತರ ಪ್ರವಾಸಿಗರು ಆನೆಗಳ ಕಾದಾಟಕ್ಕೆ ಬೆದರಿ ಓಡಿದ್ದರಿಂದ ಬಚಾವ್​​ ಆಗಿದ್ದಾರೆ. ಘಟನೆ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.