Don Vicky Shetty, Threat: ಡಾನ್ ವಿಕ್ಕಿ ಶೆಟ್ಟಿ ಹೆಸ್ರಲ್ಲಿ ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿಗೆ ಬೆದರಿಕೆ ; ಮಗನ ಮದುವೆ ಸಮಾರಂಭದಲ್ಲೇ ಕೊಲ್ಲುವುದಾಗಿ ಎಚ್ಚರಿಕೆ !

18-05-26 06:49 pm       HK News Staffer   ಕ್ರೈಂ

ಭೂಗತ ಲೋಕದ ಕುಖ್ಯಾತ ಪಾತಕಿ, ಮಂಗಳೂರು ಮೂಲದ ವಿಕ್ಕಿ ಶೆಟ್ಟಿ ಹೆಸರಿನಲ್ಲಿ ನಗರದ ರಿಯಲ್ ಎಸ್ಟೇಟ್ ಉದ್ಯಮಿಗೆ ಜೀವ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಉದ್ಯಮಿ ಜಿ.ಕೆ. ಶಂಕರ್ ಅವರಿಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಕೋಟ್ಯಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಆರೋಪದ ಮೇಲೆ ಸಿಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು, ಮೇ 18: ಭೂಗತ ಲೋಕದ ಕುಖ್ಯಾತ ಪಾತಕಿ, ಮಂಗಳೂರು ಮೂಲದ ವಿಕ್ಕಿ ಶೆಟ್ಟಿ ಹೆಸರಿನಲ್ಲಿ ನಗರದ ರಿಯಲ್ ಎಸ್ಟೇಟ್ ಉದ್ಯಮಿಗೆ ಜೀವ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಉದ್ಯಮಿ ಜಿ.ಕೆ. ಶಂಕರ್ ಅವರಿಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಕೋಟ್ಯಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಆರೋಪದ ಮೇಲೆ ಸಿಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರಣ್ಯಪುರ ನಿವಾಸಿಯಾಗಿರುವ ರಿಯಲ್ ಎಸ್ಟೇಟ್ ಉದ್ಯಮಿ ಶಂಕರ್ ಗೆ ಏಪ್ರಿಲ್ 21ರಂದು ಬೆಳಗ್ಗೆ ಮೊದಲ ಬಾರಿ ಇಂಟರ್‌ನೆಟ್ ಕರೆ ಬಂದಿತ್ತು. ಕರೆ ಮಾಡಿದ ವ್ಯಕ್ತಿ ತಾನು ಭೂಗತ ಪಾತಕಿ ವಿಕ್ಕಿ ಶೆಟ್ಟಿ ಎಂದು ಪರಿಚಯಿಸಿಕೊಂಡು, ಕೇಳಿದಷ್ಟು ಹಣ ನೀಡದಿದ್ದರೆ ಮೇ ಮೊದಲ ವಾರದಲ್ಲಿ ನಡೆಯಲಿದ್ದ ನಿಮ್ಮ ಮಗನ ಮದುವೆ ಸಮಾರಂಭದಲ್ಲೇ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. 

ಆರಂಭದಲ್ಲಿ ಇದನ್ನು ಕಿಡಿಗೇಡಿಗಳ ಕೃತ್ಯವೆಂದು ಭಾವಿಸಿ ಶಂಕರ್ ನಿರ್ಲಕ್ಷಿಸಿದ್ದರು. ಆದರೆ ಬಳಿಕ ಬೇರೆ ಬೇರೆ ಸಂಖ್ಯೆಗಳ ಮೂಲಕ ಆರೇಳು ಬಾರಿ ಕರೆ ಮಾಡಿ ಮತ್ತೆ ಹಣಕ್ಕೆ ಒತ್ತಾಯಿಸಿ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನಿರಂತರ ಬೆದರಿಕೆ ಕರೆಗಳಿಂದ ಆತಂಕಗೊಂಡ ಶಂಕರ್ ಕೆಲ ದಿನಗಳ ಕಾಲ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿದ್ದರೆಂದು ತಿಳಿದುಬಂದಿದೆ.

ಇತ್ತೀಚೆಗೆ ಪುತ್ರನ ಮದುವೆ ಮುಗಿದ ನಂತರ, ಈ ಬೆದರಿಕೆಗಳ ಹಿಂದೆ ನಿಜವಾಗಿಯೂ ವಿಕ್ಕಿ ಶೆಟ್ಟಿ ಅಥವಾ ಆತನ ಸಹಚರರ ಕೈವಾಡ ಇದೆಯೇ?, ಅಥವಾ ಉದ್ಯಮ ವೈಷಮ್ಯದ ಹಿನ್ನೆಲೆ ಬೇರೆಯವರು ಆತನ ಹೆಸರನ್ನು ದುರುಪಯೋಗಪಡಿಸಿಕೊಂಡಿರುವರೇ? ಎಂಬ ಅನುಮಾನ ವ್ಯಕ್ತಪಡಿಸಿ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಶಂಕರ್ ಅವರ ಮೊಬೈಲ್‌ಗೆ ಇಂಟರ್‌ನೆಟ್ ಆಧಾರಿತ ಕರೆಗಳ ಮೂಲಕವೇ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ. ಕರೆಗಳ ಮೂಲ ಪತ್ತೆಹಚ್ಚಲು ತಾಂತ್ರಿಕ ವಿಶ್ಲೇಷಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲತಃ ಮಂಗಳೂರು ಮೂಲದ ವಿಕ್ಕಿ ಶೆಟ್ಟಿ, ಭೂಗತ ಪಾತಕಿ ರವಿ ಪೂಜಾರಿಯ ಮಾಜಿ ಆಪ್ತ ಸಹಚರನಾಗಿದ್ದು, ಬಳಿಕ ಸ್ವಂತ ಸಿಂಡಿಕೇಟ್ ಕಟ್ಟಿಕೊಂಡಿದ್ದಾನೆ ಎಂದು ಹೇಳಲಾಗುತ್ತದ್ದೆ. ಕೊಲೆ, ಸುಲಿಗೆ, ಬೆದರಿಕೆ ಪ್ರಕರಣಗಳಲ್ಲಿ ವಿಕ್ಕಿ ಶೆಟ್ಟಿ ಹೆಸರು ಕೇಳಿಬಂದಿದ್ದು, ಎರಡು ದಶಕಗಳಿಗೂ ಹೆಚ್ಚು ಕಾಲ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಸಿಬಿಐ ಆತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಕೂಡ ಜಾರಿಗೊಳಿಸಿತ್ತು. ದುಬೈ ಅಥವಾ ದಕ್ಷಿಣ ಆಫ್ರಿಕಾ ದೇಶಗಳಲ್ಲಿ ಅಡಗಿರುವ ಶಂಕೆ ವ್ಯಕ್ತವಾಗಿದೆ.

ಮಂಗಳೂರಿನ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ವಿಕ್ಕಿ ಶೆಟ್ಟಿ ವಿರುದ್ಧ 2000ನೇ ಇಸವಿಯಲ್ಲೇ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. 2020ರಲ್ಲಿ ನಡೆದ ತುಳು ನಟ ಸುರೇಂದ್ರ ಭಂಡಾರಿ ಕೊಲೆ ಪ್ರಕರಣದಲ್ಲಿಯೂ ಆತನ ಹೆಸರು ಕೇಳಿಬಂದಿತ್ತು.