ಕಾಶ್ಮೀರಕ್ಕೆ ಕೆಲಸಕ್ಕೆಂದು ಕರೆದೊಯ್ದು ಉತ್ತರ ಪ್ರದೇಶದ ಬಾಲಕನ ಮತಾಂತರ; ವಿಡಿಯೋ ವೈರಲ್, ಗ್ರಾಮದ ನಿವಾಸಿಯಿಂದಲೇ ಕೃತ್ಯ

19-05-26 05:23 pm       HK News Staffer   ಕ್ರೈಂ

ಅಪ್ರಾಪ್ತ ಬಾಲಕನೊಬ್ಬನಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಜಮ್ಮು ಮತ್ತು ಕಾಶ್ಮೀರಕ್ಕೆ ಕರೆದೊಯ್ದಿದ್ದ ಯುವಕನೊಬ್ಬ ಅಲ್ಲಿ ಆತನನ್ನು ಬಲವಂತದಿಂದ ಮುಸ್ಲಿಂ ಆಗಿ ಮತಾಂತರ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ನಡೆದಿದ್ದು ಆತಂಕಗೊಂಡ ಬಾಲಕನ ಪೋಷಕರು ಎಸ್ಪಿ ಕಚೇರಿಗೆ ತೆರಳಿ ದೂರು ನೀಡಿದ್ದಾರೆ.

ಲಕ್ನೋ, ಮೇ 19: ಅಪ್ರಾಪ್ತ ಬಾಲಕನೊಬ್ಬನಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಜಮ್ಮು ಮತ್ತು ಕಾಶ್ಮೀರಕ್ಕೆ ಕರೆದೊಯ್ದಿದ್ದ ಯುವಕನೊಬ್ಬ ಅಲ್ಲಿ ಆತನನ್ನು ಬಲವಂತದಿಂದ ಮುಸ್ಲಿಂ ಆಗಿ ಮತಾಂತರ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ನಡೆದಿದ್ದು ಆತಂಕಗೊಂಡ ಬಾಲಕನ ಪೋಷಕರು ಎಸ್ಪಿ ಕಚೇರಿಗೆ ತೆರಳಿ ದೂರು ನೀಡಿದ್ದಾರೆ.

ಬಿಜ್ನೋರ್‌ ನಗರದ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಬಖರಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಬಿಜ್ನೋರ್ ನಿವಾಸಿ ವಿಶಾಲ್ ಎಂಬ ಅಪ್ರಾಪ್ತ ಬಾಲಕನಿಗೆ ಅದೇ ಭಾಗದ ವಸೀಮ್ ಎಂಬ ಯುವಕ ಒಳ್ಳೆಯ ಕೆಲಸ ಕೊಡಿಸುವುದಾಗಿ ಹೆತ್ತವರಿಗೆ ಹೇಳಿ ಕಾಶ್ಮೀರಕ್ಕೆ ಕರೆದೊಯ್ದಿದ್ದ. ಇದನ್ನು ನಂಬಿದ ಬಾಲಕ ಕಾಶ್ಮೀರಕ್ಕೆ ತೆರಳಿದ್ದು ಅಲ್ಲಿಗೆ ಹೋದ ನಂತರ ಪ್ರಾಣ ಬೆದರಿಕೆ ಹಾಕಿ, ಬಲವಂತದಿಂದ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಮತಾಂತರದ ನಂತರ ವಿಶಾಲ್ ಹೆಸರನ್ನು 'ಹಮ್ಮಾ' ಎಂದು ಬದಲಾಯಿಸಲಾಗಿದೆ ಎಂದು ತಿಳಿದುಬಂದಿದೆ.

ಮಗನ ಬಗ್ಗೆ ಮಾಹಿತಿ ಪಡೆಯಲು ಪೋಷಕರು ವಸೀಮ್‌ನನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, "ಇನ್ಮುಂದೆ ನಿಮ್ಮ ಮಗನನ್ನು ಮರೆತುಬಿಡಿ' ಎಂದು ಉದ್ಧಟತನದ ಉತ್ತರ ಬಂದಿದೆ ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ. ಈ ನಡುವೆ, ಬಾಲಕನ ಮತಾಂತರ ಪ್ರಕ್ರಿಯೆಗೆ ಸಂಬಂಧಿಸಿದ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡ ಕುಟುಂಬಸ್ಥರು ಪೊಲೀಸರ ಮೊರೆ ಹೋಗಿದ್ದಾರೆ. ಮಗನನ್ನು ಸುರಕ್ಷಿತವಾಗಿ ಕರೆತರುವಂತೆ ಆಗ್ರಹಿಸಿದ್ದಾರೆ.