ತಾಯಿ ಬೈದಿದ್ದಕ್ಕೆ ಅಪ್ಪ, ಅಮ್ಮ ಸಾರಿ, ನಿಮ್ಮೆದುರು ಸಾಯಲು ಇಷ್ಟವಿಲ್ಲ ಎಂದು ಪತ್ರ ಬರೆದಿಟ್ಟು ಅಪ್ರಾಪ್ತ ಸೋದರಿಯರು ನಾಪತ್ತೆ

19-05-26 05:55 pm       HK News Staffer   ಕ್ರೈಂ

ತಾಯಿ ಬೈದಿದ್ದಕ್ಕೆ ನೊಂದ ಅಪ್ರಾಪ್ತ ಸೋದರಿಯರಿಬ್ಬರು ಅಮ್ಮನಿಗೆ ಭಾವುಕ ಪತ್ರವೊಂದನ್ನು ಬರೆದಿಟ್ಟು ಮನೆಯಿಂದ ನಾಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದ್ದು ಹೆತ್ತವರು ಆತಂಕಗೊಂಡು ಪೊಲೀಸ್ ದೂರು ನೀಡಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಕಾಳೇನಹಳ್ಳಿಯಲ್ಲಿ ಘಟನೆ ನಡೆದಿದ್ದು ರಾಮಚಂದ್ರ ಎಂಬವರ ಮಕ್ಕಳಾದ ಸುಜಾತಾ(16) ಮತ್ತು ರುಕ್ಮಿಣಿ(14) ಮನೆ ಬಿಟ್ಟು ಹೋದವರು.

ಮಂಡ್ಯ, ಮೇ 19: ತಾಯಿ ಬೈದಿದ್ದಕ್ಕೆ ನೊಂದ ಅಪ್ರಾಪ್ತ ಸೋದರಿಯರಿಬ್ಬರು ಅಮ್ಮನಿಗೆ ಭಾವುಕ ಪತ್ರವೊಂದನ್ನು ಬರೆದಿಟ್ಟು ಮನೆಯಿಂದ ನಾಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದ್ದು ಹೆತ್ತವರು ಆತಂಕಗೊಂಡು ಪೊಲೀಸ್ ದೂರು ನೀಡಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಕಾಳೇನಹಳ್ಳಿಯಲ್ಲಿ ಘಟನೆ ನಡೆದಿದ್ದು ರಾಮಚಂದ್ರ ಎಂಬವರ ಮಕ್ಕಳಾದ ಸುಜಾತಾ(16) ಮತ್ತು ರುಕ್ಮಿಣಿ(14) ಮನೆ ಬಿಟ್ಟು ಹೋದವರು. 

ಯಾವುದೋ ವಿಷಯಕ್ಕೆ ಮನೆಯಲ್ಲಿ ತಾಯಿ ಬೈದಿದ್ದು ಮನನೊಂದ ಸಹೋದರಿಯರು, ಮನೆಯನ್ನೇ ಬಿಟ್ಟು ಹೋಗಿದ್ದಾರೆ. ಹೋಗುವ ಮುನ್ನ, "ಅಮ್ಮ-ಅಪ್ಪ ಸ್ಸಾರಿ.. ನಿಮ್ಮ ಕಣ್ಣು ಮುಂದೆ ಸಾಯುವುದಕ್ಕೆ ಆಗಲ್ಲ... ಹೀಗಾಗಿ ನಾವು ದೂರ ಹೋಗಿ ಸಾಯುತ್ತಿದ್ದೇವೆ" ಎಂದು ಆಘಾತಕಾರಿ ಪತ್ರ ಬರೆದಿಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. 

ಸುಜಾತ ಮತ್ತು ರುಕ್ಮಿಣಿ ಮನೆ ಬಿಟ್ಟು ಹೋಗುವ ಮುನ್ನ ಬರೆದಿಟ್ಟಿರುವ ಪತ್ರ ಪೋಷಕರು ಹಾಗೂ ಗ್ರಾಮಸ್ಥರನ್ನು ಆತಂಕಕ್ಕೆ ಈಡುಮಾಡಿದೆ. ಪತ್ರ ಓದಿದ ಕೂಡಲೇ ಆತಂಕಗೊಂಡ ಪೋಷಕರು, ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಕಣ್ಣೀರಿಟ್ಟಿದ್ದಾರೆ. ಕೂಡಲೇ ಪೊಲೀಸರು ದೂರು ದಾಖಲಿಸಿ ಮಕ್ಕಳ ಪತ್ತೆಗೆ ಶೋಧ ಕಾರ್ಯ ನಡೆಸಿದ್ದಾರೆ. ಮಕ್ಕಳು ಪ್ರಾಣಕ್ಕೆ ಅಪಾಯ ಮಾಡಿರಬಹುದೇ ಎಂಬ ಆತಂಕದಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಶಾಲೆಗೆ ಬೇಸಿಗೆ ರಜೆ ಇರುವುದರಿಂದ ಮನೆಯಲ್ಲಿ ಏನೋ ವಿಚಾರಕ್ಕೆ ತಾಯಿ ಬೈದಿದ್ದು ಅದನ್ನೇ ಮುಂದಿಟ್ಟು ಮಕ್ಕಳಿಬ್ಬರು ಮನೆಯಿಂದಲೇ ದೂರವಾಗಿ ಆತಂಕ ಮೂಡಿಸಿದ್ದಾರೆ.