ಧರ್ಮಸ್ಥಳದ ಬುರುಡೆ ರಹಸ್ಯ ಪ್ರಕರಣ ಮತ್ತೆ ಚುರುಕು ; ಬಂಗ್ಲೆಗುಡ್ಡೆ ಪ್ರದೇಶಕ್ಕೆ ಎಫ್ಎಸ್ಎಲ್ ತಜ್ಞರು, ಸ್ಥಳದಲ್ಲಿ ಶೋಧನೆ

21-05-26 04:34 pm       HK News Staffer   ಕ್ರೈಂ

ಧರ್ಮಸ್ಥಳದ ಬುರುಡೆ ರಹಸ್ಯ ಪ್ರಕರಣದಲ್ಲಿ ಎಸ್ಐಟಿ ತನಿಖೆ ಆರು ತಿಂಗಳ ಬಳಿಕ ಮತ್ತೆ ಚುರುಕುಗೊಂಡಿದೆ. ಧರ್ಮಸ್ಥಳ ಬಳಿಯ ಬಂಗ್ಲೆಗುಡ್ಡೆ ಕಾಡಿಗೆ ಬೆಂಗಳೂರಿನಿಂದ ಬಂದ ಎಫ್ ಎಸ್ ಎಲ್ ತಜ್ಞರ ತಂಡ ಭೇಟಿ ನೀಡಿದೆ.

ಮಂಗಳೂರು, ಮೇ 21: ಧರ್ಮಸ್ಥಳದ ಬುರುಡೆ ರಹಸ್ಯ ಪ್ರಕರಣದಲ್ಲಿ ಎಸ್ಐಟಿ ತನಿಖೆ ಆರು ತಿಂಗಳ ಬಳಿಕ ಮತ್ತೆ ಚುರುಕುಗೊಂಡಿದೆ. ಧರ್ಮಸ್ಥಳ ಬಳಿಯ ಬಂಗ್ಲೆಗುಡ್ಡೆ ಕಾಡಿಗೆ ಬೆಂಗಳೂರಿನಿಂದ ಬಂದ ಎಫ್ ಎಸ್ ಎಲ್ ತಜ್ಞರ ತಂಡ ಭೇಟಿ ನೀಡಿದೆ. 

ಬೆಂಗಳೂರಿನಿಂದ ಬಂದಿರುವ ಮೂರು ಮಂದಿ ಅಧಿಕಾರಿಗಳ ತಂಡ ಎಸ್ಐಟಿ‌ ಅಧಿಕಾರಿಗಳೊಂದಿಗೆ ಬಂಗ್ಲೆಗುಡ್ಡೆ ಅರಣ್ಯ ಪ್ರದೇಶಕ್ಕೆ ತೆರಳಿದೆ. ಬರುಡೆ ಸಿಕ್ಕಿರುವ ಜಾಗದಲ್ಲಿ ಎಫ್ಎಸ್ಎಲ್‌ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ, ಬಂಗ್ಲೆಗುಡ್ಡೆ ಪ್ರದೇಶಕ್ಕೆ ಬುರುಡೆ ಷಡ್ಯಂತ್ರ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರದೀಪ್ ಕುಲಾಲ್ ನನ್ನು ಪೊಲೀಸರು ಕರೆಸಿಕೊಂಡಿದ್ದಾರೆ. 

ಪ್ರಕರಣದ ಕುರಿತಾಗಿ BNSS ಸೆಕ್ಷನ್ 183 ಅಡಿ ಪ್ರದೀಪ್ ಕುಲಾಲ್ ಕೋರ್ಟಿನಲ್ಲಿ ಹೇಳಿಕೆ ನೀಡಿದ್ದ. ಅಂದು ವೈರಲ್ ಆಗಿದ್ದ ರಾತ್ರಿ ಹೊತ್ತು ಕಾಡಿನಲ್ಲಿ ಬರುಡೆ ತೆಗೆಯುವ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಪ್ರದೀಪ್, ಬಳಿಕ ಎಸ್ಐಟಿ ಅಧಿಕಾರಿಗಳ ತ‌ನಿಖೆಯ ಬಳಿಕ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದ ಎನ್ನಲಾಗಿದೆ. ಇದೀಗ ಆರು ತಿಂಗಳ ಬಳಿಕ ಸಾಕ್ಷಿದಾರ ಪ್ರದೀಪ್ ನನ್ನು ಸ್ಥಳಕ್ಕೆ ಕರೆಸಿ ಎಫ್ಎಸ್ಎಲ್ ತಜ್ಞರು ಪರಿಶೀಲನೆ ನಡೆಸಿದ್ದಾರೆ. ‌ಸ್ಥಳೀಯ ಪೊಲೀಸರು ಸಾಥ್ ನೀಡಿದ್ದಾರೆ.

ಬುರುಡೆ ಹೊರತೆಗೆದ ವೈರಲ್ ಆಗಿದ್ದ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆನ್ನಲಾದ ಬಂಗ್ಲೆಗುಡ್ಡೆ ಜಾಗದಲ್ಲಿ ಸನ್ನಿವೇಶವನ್ನು ಮರು ಸೃಷ್ಟಿಸಲು ಎಫ್ಎಸ್ಎಲ್ ತಂಡ ಮುಂದಾಗಿದ್ದು ಇದಕ್ಕಾಗಿ ಪ್ರದೀಪ್ ಕುಲಾಲ್ ನನ್ನು ಸ್ಥಳಕ್ಕೆ ಕರೆಸಿಕೊಂಡಿರುವ ಮಾಹಿತಿ ಇದೆ. ‌ಮರು ಸೃಷ್ಟಿಸಿದ ಬಳಿಕ ಹಳೆಯ ವಿಡಿಯೋ ಹಾಗೂ ಈಗಿನ ವಿಡಿಯೋವನ್ನು ತಜ್ಞರು ತಾಳೆ ಹಾಕಲಿದ್ದು ಸಾಮ್ಯತೆ ಬಗ್ಗೆ ಪರಿಶೀಲಿಸಲಿದ್ದಾರೆ. ತಲೆ ಬುರುಡೆಯನ್ನು ಆರೋಪಿಗಳು ಅದೇ ಜಾಗದಿಂದ ತೆಗೆದಿದ್ದರೇ ಎಂಬ ಬಗ್ಗೆ ಪರಾಮರ್ಶೆ ನಡೆಸಲಿದ್ದಾರೆ. ಬಳಿಕ ಈ ಬಗ್ಗೆ ವರದಿಯನ್ನು ಕೋರ್ಟಿಗೆ ಸಲ್ಲಿಸುವ ಸಾಧ್ಯತೆಯಿದೆ.