ಹಣದ ವಿಚಾರದಲ್ಲಿ ತಕರಾರು ; ಸ್ನೇಹಿತನ ಮನೆಯನ್ನೇ ದೋಚಿದ ಖದೀಮರು, ಅನ್ನ ಕೊಟ್ಟ ಮನೆಗೆ ಗುನ್ನ !

22-05-26 09:25 pm       HK News Staffer   ಕ್ರೈಂ

ಸ್ನೇಹಿತನ ಮನೆಯಲ್ಲೇ ದರೋಡೆ ಮಾಡಿಸಿದ್ದ ಮೇಸ್ತ್ರಿ ಸೇರಿದಂತೆ ಮೂವರು ಆರೋಪಿಗಳನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗುರುಪ್ರಸಾದ್, ಅರ್ಬಾಜ್ ಹಾಗೂ ಜಿಬ್ರಾನ್ ಬಂಧಿತ ಆರೋಪಿಗಳು.

ಬೆಂಗಳೂರು, ಮೇ 22: ಸ್ನೇಹಿತನ ಮನೆಯಲ್ಲೇ ದರೋಡೆ ಮಾಡಿಸಿದ್ದ ಮೇಸ್ತ್ರಿ ಸೇರಿದಂತೆ ಮೂವರು ಆರೋಪಿಗಳನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗುರುಪ್ರಸಾದ್, ಅರ್ಬಾಜ್ ಹಾಗೂ ಜಿಬ್ರಾನ್ ಬಂಧಿತ ಆರೋಪಿಗಳು.

ಚಿಕ್ಕಜಾಲದ ಹುಣಸಮಾರನಹಳ್ಳಿಯಲ್ಲಿರುವ ಕೃಷ್ಣಾಚಾರಿ ಎಂಬುವವರ ಮನೆಗೆ ಏಪ್ರಿಲ್ 18ರಂದು ರಾತ್ರಿ ನುಗ್ಗಿದ್ದ ಅರ್ಬಾಜ್ ಹಾಗೂ ಜಿಬ್ರಾನ್, ಮನೆಯವರಿಗೆ ಚಾಕು ತೋರಿಸಿ 79 ಗ್ರಾಂ ಚಿನ್ನ, 64 ಗ್ರಾಂ ಬೆಳ್ಳಿ ಹಾಗೂ 12 ಲಕ್ಷ ರೂಪಾಯಿ ನಗದು ದೋಚಿ ಪರಾರಿಯಾಗಿದ್ದರು.

ಪೊಲೀಸರ ತನಿಖೆಯಲ್ಲಿ ಈ ದರೋಡೆ ಹಿಂದೆ ಮನೆಯ ಕಾಮಗಾರಿ ನಡೆಸುತ್ತಿದ್ದ ಮೇಸ್ತ್ರಿ ಗುರುಪ್ರಸಾದ್‌ನ ಕೈವಾಡ ಇರುವುದು ಬಹಿರಂಗವಾಗಿದೆ. ಕೃಷ್ಣಾಚಾರಿ ಅವರ ಪುತ್ರ ಸುದರ್ಶನ್ ಹಾಗೂ ಗುರುಪ್ರಸಾದ್ ಸ್ನೇಹಿತರಾಗಿದ್ದು, ಹೊಸ ಮನೆ ನಿರ್ಮಾಣದ ಕಾಮಗಾರಿಯನ್ನು ಕಡಿಮೆ ಹಣಕ್ಕೆ ಗುರುಪ್ರಸಾದ್‌ಗೆ ನೀಡಲಾಗಿತ್ತು. ಆದರೆ ಕಾಮಗಾರಿ ಗುಣಮಟ್ಟ ಮತ್ತು ಹಣದ ವಿಚಾರವಾಗಿ ಆಗಾಗ ಜಗಳ, ಅಸಮಾಧಾನ ನಡೆಯುತ್ತಿತ್ತು ಎನ್ನಲಾಗಿದೆ.

ಇದರಿಂದ ಬೇಸತ್ತ ಗುರುಪ್ರಸಾದ್, ತನ್ನ ಬಳಿ ಕೆಲಸ ಮಾಡುತ್ತಿದ್ದ ಅರ್ಬಾಜ್ ಹಾಗೂ ಜಿಬ್ರಾನ್ ಮೂಲಕ ಸ್ನೇಹಿತನ ಮನೆಯಲ್ಲೇ ದರೋಡೆ ನಡೆಸುವ ಸಂಚು ರೂಪಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ದಿನ ರಾತ್ರಿ ಮನೆಗೆ ನುಗ್ಗಿದ ಆರೋಪಿಗಳು ಚಾಕು ತೋರಿಸಿ ಮನೆಯವರನ್ನು ಬೆದರಿಸಿ ಕಬೋರ್ಡ್ ಕೀ ಪಡೆದುಕೊಂಡಿದ್ದರು. ಬಳಿಕ ಮನೆಯಲ್ಲಿದ್ದ ಚಿನ್ನಾಭರಣ, ಬೆಳ್ಳಿ ಹಾಗೂ ನಗದನ್ನು ಚೀಲದಲ್ಲಿ ತುಂಬಿಕೊಂಡು ಹೋಗಿದ್ದರು.

ಈ ವೇಳೆ “ಎಲ್ಲವನ್ನೂ ದೋಚಿಕೊಂಡು ಹೋದರೆ ನಾವು ಬದುಕೋದು ಹೇಗೆ?” ಎಂದು ಮನೆಯವರು ಕೇಳಿದಾಗ, ಆರೋಪಿಗಳು 50 ಸಾವಿರ ರೂಪಾಯಿ ಇರುವ ಒಂದು ಬಂಡಲ್ ಹಿಂತಿರುಗಿಸಿ, “ಈ ಹಣದಲ್ಲಿ ಬದುಕು ನಡೆಸಿ... ಪೊಲೀಸರಿಗೆ ದೂರು ಕೊಡಬೇಡಿ” ಎಂದು ಬೆದರಿಕೆ ಹಾಕಿ ಪರಾರಿಯಾಗಿದ್ದರು ಎಂದು ಮನೆ ಮಾಲೀಕ ಕೃಷ್ಣಾಚಾರಿ ತಿಳಿಸಿದ್ದಾರೆ.

ದರೋಡೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಗಳಿಗಾಗಿ ಎರಡು ತಿಂಗಳು ನಿರಂತರ ಶೋಧ ನಡೆಸಿದ ಚಿಕ್ಕಜಾಲ ಪೊಲೀಸರು, ಕೊನೆಗೆ ಮೂವರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ 12 ಲಕ್ಷ ರೂಪಾಯಿ ನಗದು, ಸುಮಾರು 24 ಲಕ್ಷ ಮೌಲ್ಯದ ಚಿನ್ನಾಭರಣ, ಒಂದು ದ್ವಿಚಕ್ರ ವಾಹನ, ಒಂದು ಕಾರು ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.